ಪುನೀತ್ ಅಭಿಮಾನಿಗಳಿಗೆ ಹಾಸನದಲ್ಲಿ ಲಾಠಿ ಏಟು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಹಾಸನದಲ್ಲಿ ಸೋಮವಾರ (ನ.29) ನಡೆದಿದೆ. ಖಾಸಗಿ ಆಭರಣ ಮಳಿಗೆಯೊಂದರ ಉದ್ಘಾಟನೆಗಾಗಿ ಪುನೀತ್ ಸೋಮವಾರ ಹಾಸನಕ್ಕೆ ಭೇಟಿ ನೀಡಿದ್ದರು.
ಆಭರಣ ಮಳಿಗೆಯವರು ಭಾರಿ ಪ್ರಚಾರ ಕೊಟ್ಟಿದ್ದ ಕಾರಣ ಪುನೀತ್ ಹಾಸನಕ್ಕೆ ಬರಲಿದ್ದಾರೆ ಎಂಬ ಸುದ್ದಿ ಮುಂಚಿತವಾಗಿಯೇ ಗೊತ್ತಾಗಿತ್ತು. ಧ್ವನಿವರ್ಧಕಗಳ ಮೂಲಕವೂ ಪ್ರಕಟಿಸಲಾಗಿತ್ತು. ಪುನೀತ್ ಇಂದು ಹಾಸನಕ್ಕೆ ಬರುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ಮುತ್ತಿದರು.
ಪುನೀತ್ ಅವರನ್ನು ನೋಡುವ ಸಲುವಾಗಿ ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಯಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ಮಾಡಿ ಅಭಿಮಾನಿಗಳನ್ನು ಚದುರಿಸಿದರು. ಮಳಿಗೆಯನ್ನು ಉದ್ಘಾಟಿಸಿದ ಬಳಿಕ ಪುನೀತ್ ಅಲ್ಲಿಂದ ಹೊರಟು ಹೋದರು.
ಪುನೀತ್ ಉಳಿದುಕೊಂಡಿದ್ದ ಹೋಟೆಲ್ ವರೆಗೂ ಅಭಿಮಾನಿಗಳು ಹಿಂಬಾಲಿಸಿದರು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಮಯದವರೆಗೂ ಹೋಟೆಲ್ ಹೊರಗೆ ಕಾದುಕುಳಿತಿದ್ದ ಚಿತ್ರಣ ಸಾಮಾನ್ಯವಾಗಿತ್ತು.


Click it and Unblock the Notifications











