ಯೋಗರಾಜ್ ಭಟ್ಟರ 'ಡ್ರಾಮಾ'ಕ್ಕೆ ಮುಹೂರ್ತ ಫಿಕ್ಸ್
ನಿರ್ದೇಶಕ ಯೋಗರಾಜ್ ಭಟ್ ಅವರ 'ಡ್ರಾಮಾ' ಚಿತ್ರ ಸೆಟ್ಟೇರಲಿರುವ ದಿನಾಂಕ ಪಕ್ಕಾ ಆಗಿದೆ. ಮುಂದಿನ ತಿಂಗಳು, ಅಂದರೆ ಮಾರ್ಚ್ 5, 2012ರ ಭಾನುವಾರದಂದು ಮುಹೂರ್ತ ನಡೆಯಲಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಜೊತೆ ನೀನಾಸಂ ಸತೀಶ್ ಹಾಗೂ ಪ್ರಜ್ಞಾ ಕೂಡ ಅಭಿನಯಿಸಲಿದ್ದಾರೆ. ಪ್ರಕಾಶ್ ರೈ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ಭಟ್ಟರ ಡ್ರಾಮಾಕ್ಕೆ ಕಳೆದ 18ರಂದು (ಫೆಬ್ರವರಿ 18, 2012) ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಕಥೆಯಲ್ಲಿ ಆದ ಕೆಲವು ಬದಲಾವಣೆ ಹಾಗೂ ಭಟ್ಟರಿಗೆ ಬಂದ ಕೆಲವು ವೈಯಕ್ತಿಕ ತೊಂದರೆ ತಾಪಾತ್ರಯಗಳಿಂದ ಮುಹೂರ್ತ ಮುಂದೂಡಲ್ಪಟ್ಟಿತ್ತು. ಆದರೆ ಈಗ, ಮಾರ್ಚ್ 5 ರಂದು ಮುಹೂರ್ತ ನಡೆಯಲಿರುವ ವಿಷಯವನ್ನು ಸ್ವತಃ ಯೋಗರಾಜ್ ಭಟ್ಟರು ಬಹಿರಂಗಪಡಿಸಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಹಾಗೂ ಮುಂಗಾರು ಮಳೆ ಕೃಷ್ಣ ಛಾಯಾಗ್ರಹಣವಿದೆ. ಪರಮಾತ್ಮ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್ ಹಾಗೂ ನಟಿ ಪ್ರಜ್ಞಾ, ಪ್ರಕಾಶ್ ರೈ ಪ್ರಮುಖ ಪಾತ್ರಧಾರಿಗಳು. ಮುಹೂರ್ತ ನಡೆದ ತಕ್ಷಣ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.


Click it and Unblock the Notifications











