ಭಟ್ಟರ 'ಡ್ರಾಮಾ'ಕ್ಕೆ ಯಶ್ ಜೊತೆ ರಾಧಿಕಾ ಪಂಡಿತ್
ನಿರ್ದೇಶಕ ಯೋಗರಾಜ್ ಭಟ್ ಅವರ ಸದ್ಯದಲ್ಲೇ ಸೆಟ್ಟೇರಲಿರುವ ಚಿತ್ರ' ಡ್ರಾಮಾ' ತಂಡದಿಂದ ನಟಿ ಭಾಮಾ ಡೇಟ್ಸ್ ಸಮಸ್ಯೆಯಿಂದ ಹೊರಹೋಗಿದ್ದು ಈಗ ಹಳೆಯ ಸಮಾಚಾರ. "ಡೇಟ್ಸ್ ಸಮಸ್ಯೆಯಿಂದ ನಾವು ಭಾಮಾ ಅವರನ್ನು ಬದಲಾಯಿಸುತ್ತಿದ್ದೇವೆ, ಸದ್ಯದಲ್ಲೇ ಬೇರೆ ನಟಿ ಬರಲಿದ್ದಾರೆ" ಎಂದಿದ್ದರು ಭಟ್ಟರು. ಇದೀಗ 'ಡ್ರಾಮಾ'ಕ್ಕೆ ಅಚ್ಚ ಕನ್ನಡತಿ "ರಾಧಿಕಾ ಪಂಡಿತ್ ಯಶ್ ಜೋಡಿಯಾಗಿ ಆಯ್ಕೆಯಾಗಿದ್ದಾರೆ" ಎಂದು ಸ್ವತಃ ಭಟ್ಟರು ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಈ ಹಿಂದೆ ಭಟ್ಟರ ಡ್ರಾಮಾಕ್ಕೆ ಕಳೆದ 18ರಂದು (ಫೆಬ್ರವರಿ 18, 2012) ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಅದೇ ದಿನ ಡ್ರಾಮಾ ನಾಯಕ ಯಶ್ ಚಿತ್ರ 'ಲಕ್ಕಿ' ಆಡಿಯೋ ಬಿಡುಗಡೆ ಸಮಾರಂಭ ಆಯೋಜಿಸಲ್ಪಟ್ಟು ಡ್ರಾಮಾ ಮುಹೂರ್ತ ಕೆಲವು ದಿನಗಳು ಮುಂದಕ್ಕೆ ಹೋಗಿದೆ. ಸದ್ಯದಲ್ಲೇ ಚಿತ್ರದ ಮುಹೂರ್ತ ನಡೆಯಲಿದ್ದು ಈಗ ರಾಧಿಕಾ ಪಂಡಿತ್ ಆಯ್ಕೆಯಾಗುವ ಮೂಲಕ ನಾಯಕಿ ಯಾರೆಂಬ ಪ್ರಶ್ನೆಗೆ ಉತ್ತರ ದೊರೆತಿದೆ.
ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ. ಮುಂಗಾರು ಮಳೆ ಕೃಷ್ಣ ಛಾಯಾಗ್ರಹಣ. ಪರಮಾತ್ಮ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್ ಹಾಗೂ ನಟಿ ಪ್ರಜ್ಞಾ ಪ್ರಮುಖ ಪಾತ್ರಧಾರಿಗಳು. ಮುಹೂರ್ತಕ್ಕೆ ಯಾವಾಗ 'ಮುಹೂರ್ತ' ಕೂಡಿ ಬರಲಿದೆ ಎಂಬುದು ಸದ್ಯದ ಕುತೂಹಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











