ಬಾಗಿಬಳುಕುವ ಜಿಂಕೆ ಮರಿ ರೇಖಾ ಕಣ್ಣಲ್ಲಿ ನೀರು!
ಬಳುಕುವ ಜಿಂಕೆ ಮರಿ ರೇಖಾ ಕಣ್ಣಲ್ಲಿ ನೀರು ಹಾಕಿಸಲು ನಿರ್ದೇಶಕ ಸಾಯಿಪ್ರಕಾಶ್ ಪಣ ತೊಟ್ಟಿದ್ದಾರೆ! ಗ್ಲಾಮರ್ನಿಂದಲೇ ಎಲ್ಲರ ಸೆಳೆದಿದ್ದ ರೇಖಾ, ತಮ್ಮ ಮುಂದಿನ ಚಿತ್ರದಲ್ಲಿ ಕೊಳಗಟ್ಟಲೇ ಕಣ್ಣೀರು ಸುರಿಸಲಿದ್ದಾರೆ.
ರೇಖಾ ಕಣ್ಣೀರಿನಿಂದ ನಿರ್ಮಾಪಕರಿಗೆ ಅನುಕೂಲವಾಗುತ್ತೋ ಬಿಡುತ್ತೋ ಗೊತ್ತಿಲ್ಲ. ಹೆಚ್ಚಾಗಿ ರಾಧಿಕಾರನ್ನೇ ಹಾಕಿಕೊಂಡು ಸೆಂಟಿಮೆಂಟ್ ಸಿನಿಮಾಗಳನ್ನು ಮಾಡುತ್ತಿದ್ದ ನಿರ್ದೇಶಕ ಸಾಯಿಪ್ರಕಾಶ್ ಕಣ್ಣಿಗೆ ರೇಖಾ ಬಿದ್ದಿದ್ದಾರೆ. ‘ಹೆತ್ತರೆ ಹೆಣ್ಣನ್ನೇ ಹೆರಬೇಕು’ ಎಂಬ ತಮ್ಮ ಹೊಸ ಸೆಂಟಿಮೆಂಟಲ್ ಚಿತ್ರಕ್ಕೆ ರೇಖಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.
ಈ ಚಿತ್ರದಲ್ಲಿ ಲಕ್ಷ್ಮಿ ಮತ್ತು ಬಾಲಸುಬ್ರಹ್ಮಣ್ಯಂ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ನೋಡಿದವರು ಹೆಣ್ಣು ಮಕ್ಕಳು ಬೇಕೇಬೇಕು ಎನ್ನುತ್ತಾರೆ. ಆ ಮಟ್ಟದಲ್ಲಿ ಸಿನಿಮಾ ಮಾಡುತ್ತೇನೆ ಎಂದು ಸಾಯಿ ನುಡಿದಿದ್ದಾರೆ.
ಸದ್ಯಕ್ಕೆ ರೇಖಾ ಅವರು ಕಾಮಿಡಿ ಟೈಂ ಗಣೇಶ್ ಜೊತೆ ‘ಹುಡುಗಾಟ’ ಹಾಗೂ ‘ನೆನಪಿರಲಿ’ ಫೇಮ್ನ ಪ್ರೇಮ್ ಜೊತೆ ‘ಗುಣವಂತ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಕೋಡ್ಲು ರಾಮಕೃಷ್ಣ ನಿರ್ದೇಶನದ ‘ತಮಾಷೆಗಾಗಿ’ ಚಿತ್ರದಲ್ಲೂ ರೇಖಾ ನಾಯಕಿ. ವಿಷ್ಣುವರ್ಧನ್ ಅಳಿಯ ಅನಿರುದ್ಧ ಚಿತ್ರದ ನಾಯಕ.
‘ಹುಚ್ಚ’ ಚಿತ್ರ ನೋಡಿದವರಿಗೆ ರೇಖಾ ಎಷ್ಟರಮಟ್ಟಿಗೆ ಕಣ್ಣೀರು ಸುರಿಸಬಲ್ಲರು ಮತ್ತು ಎಷ್ಟರಮಟ್ಟಿಗೆ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಬಲ್ಲರು ಎಂದು ಪ್ರೇಕ್ಷಕರಿಗೆ ಗೊತ್ತು. ಜನ ಮುಸಿಮುಸಿ ನಕ್ಕರೆ ಆಶ್ಚರ್ಯವಿಲ್ಲ. ಆದರೆ, ಎಂಟು ಚಿತ್ರಗಳ ಅನುಭವದಲ್ಲಿ ರೇಖಾ ನಿಜವಾಗಿಯೂ ಯಶಸ್ವಿಯಾದರೆ ಅದಕ್ಕಿಂತ ಸಂತೋಷದ ಸುದ್ದಿ ಮತ್ತೊಂದಿಲ್ಲ. ರೇಖಾಗೆ ಅಭಿನಂದನೆಗಳು.


Click it and Unblock the Notifications