ಸದ್ಯಕ್ಕೆ ಅಂಬರೀಷ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ
ಅಂಬಿಗೆ ಐವತ್ತು !
ಕನ್ನಂಬಾಡಿಯಲ್ಲಿ ನೀರು ಕಡಿಮೆಯಾಗಿರಬಹುದು ; ಕಬ್ಬಿನ ನಗರಿ ಮಂಡ್ಯದಲ್ಲಿ ಮಾತ್ರ ಸಂಭ್ರಮ ತುಳುಕುತ್ತಿದೆ. ಮೇ 29 ರ ಸಂಜೆ 5 ಗಂಟೆಗೆ, ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ 'ಅಂಬಿ-50" ವಿಶೇಷ ಕಾರ್ಯಕ್ರಮ. ಪ್ರಸಿದ್ಧ ಚಿತ್ರನಟರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಂಬಿ ಹುಟ್ಟುಹಬ್ಬದ ಆಚರಣೆ.
ಅಂಬಿ ಸಿನಿ ಕಲಾವಿದ ಮಾತ್ರವಲ್ಲ ; ರಾಜಕಾರಣಿಯೂ ಹೌದು. ಆ ಕಾರಣದಿಂದಲೇ ಹುಟ್ಟುಹಬ್ಬದ ಕಾರ್ಯಕ್ರಮ ಒಂದು ದಿಕ್ಕಿನಿಂದ ಸಿನಿಮಾ ಕಾರ್ಯಕ್ರಮದಂತೆ, ಇನ್ನೊಂದು ದಿಕ್ಕಿನಿಂದ ರಾಜಕೀಯ ಕಾರ್ಯಕ್ರಮದಂತೆ ಕಂಡರೆ ಅದು ಅಂಬಿ ತಪ್ಪಲ್ಲ . ಅದೇನೇ ಇರಲಿ, ತವರು ಜಿಲ್ಲೆಯಲ್ಲಿ ಅಂಬಿಗೆ ಶುಭಾಶಯ ಸಲ್ಲಿಸುವ ಕಾರ್ಯಕ್ರಮ ಅದ್ದೂರಿ ಅನ್ನುವುದರಲ್ಲಿ ಎರಡು ಮಾತಿಲ್ಲ .
ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪಿ.ಶಿವರಾಂ ದಟ್ಸ್ಕನ್ನಡ.ಕಾಂಗೆ ತಿಳಿಸಿರುವಂತೆ- ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಅಂಬಿ ಹುಟ್ಟುಹಬ್ಬದಲ್ಲಿ ಭಾಗವಹಿಸುವರು. ಅಲ್ಲದೇ ಸಿನಿಮಾ ರಂಗದಿಂದ ವಿಷ್ಣು ವರ್ಧನ್, ಜಯಪ್ರದಾ, ಶತ್ರುಘ್ನ ಸಿನ್ಹಾ , ಅರ್ಜುನ್ ಸರ್ಜಾ, ರಜನಿಕಾಂತ್, ಶಿವರಾಜ್ ಕುಮಾರ್, ರವಿಚಂದ್ರನ್, ರಾಕ್ಲೈನ್ ವೆಂಕಟೇಶ್, ಪುನೀತ್, ಮೋಹನ್ಬಾಬು ಸೇರಿದಂತೆ ಸಾಲು ಸಾಲು ತಾರೆಯರು ಅಂಬಿ- 50 ಸಮಾರಂಭವನ್ನು ಬೆಳಗಲಿದ್ದಾರೆ.
ಅಂಬರೀಷ್ರ 49ನೇ ಹುಟ್ಟು ಹಬ್ಬ ನಡೆದದ್ದು ದಾವಣಗೆರೆಯಲ್ಲಿ . ಅಲ್ಲಿ ಅವರಿಗೆ ವಜ್ರದ ಕಿರೀಟ ಅರ್ಪಿಸಲಾಗಿತ್ತು . ಈ ಬಾರಿಯ ಹುಟ್ಟುಹಬ್ಬದಲ್ಲಿ ಅಂಬರೀಷ್ ಅವರ ಜೀವನ ಚರಿತ್ರೆ ಒಳಗೊಂಡ ಅಭಿನಂದನಾ ಗ್ರಂಥ ಹೊರ ತರಲಾಗುತ್ತಿದೆ. ಅಂಬಿ ಅವರನ್ನು ಕುರಿತು ಅವರ ಆತ್ಮೀಯರು ಬರೆದ ಲೇಖನಗಳನ್ನು ಒಳಗೊಂಡ ಈ ಕೃತಿ ಚಿತ್ರರಂಗದ ಏಳುಬೀಳುಗಳ ದಾಖಲೆಯೂ ಆಗಿದೆ. ವರ್ಣರಂಜಿತ ಚಿತ್ರಗಳು, ಸಂಸದರಾಗಿ ಅಂಬಿ ಸಾಧನೆಗಳ ಪಕ್ಷಿನೋಟವೂ ಅಭಿನಂದನಾ ಗ್ರಂಥದಲ್ಲಿದೆ ಎಂದು ಶಿವರಾಂ ತಿಳಿಸಿದ್ದಾರೆ.
ಅಂದಹಾಗೆ, ಮೇ 30 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬ!


Click it and Unblock the Notifications