ಕಡಿದ ಮರಕ್ಕೆ ದಂಡವಾಗಿ 10ಸಾವಿರ ರು. ಕಕ್ಕಿದ ಸಿಹಿಕಹಿ ಚಂದ್ರು
ಪಾ.ಪ.ಪಾಂಡು ಮೂಲಕ ಸಾಕಷ್ಟು ದುಡ್ಡು ಮತ್ತು ಸದ್ದು ಮಾಡಿರುವ ಹಿರಿ- ಕಿರಿ ತೆರೆಯ ನಟ/ನಿರ್ದೇಶಕ ಸಿಹಿಕಹಿ ಚಂದ್ರು ಮಹಾನಗರ ಪಾಲಿಕೆಗೆ 10 ಸಾವಿರ ರುಪಾಯಿ ದಂಡ ಕಟ್ಟಿದ ಪ್ರಸಂಗವಿದು..
ನಾಲ್ಕು ದಿನಗಳ ಕೆಳಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಹಳೆಯ ಕೇಂದ್ರ ಕಾರಾಗೃಹದಲ್ಲಿ (ಕೇಂದ್ರ ಕಾರಾಗೃಹ ಈಗ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಗೊಂಡಿದೆ) ‘ಚಿರಸ್ಮರಣೆ’ ಎಂಬ ಧಾರಾವಾಹಿಯ ಶೂಟಿಂಗ್ ಮಾಡುತ್ತಿದ್ದರು. ಒಂದು ಸಣ್ಣ ಮರ ಅಡ್ಡ ಆಯಿತೆಂದು ಅದನ್ನು ಕಡಿಸಿ ಹಾಕಿದರು. ಮರ ಕಡಿಯುವುದನ್ನು ಬೆಂಗಳೂರಲ್ಲಿ ನಿಷೇಧಿಸಿರುವುದರಿಂದ ಇದು ದಂಡ ಕಟ್ಟಿಸಿಕೊಳ್ಳುವಂಥ ಕೃತ್ಯವಾಯಿತು. ಸಿಹಿ ಕಹಿ ಚಂದ್ರುಗೆ ಪಾಲಿಕೆಯವರು 10 ಸಾವಿರ ರುಪಾಯಿ ದಂಡ ಹಾಕಿದರು.
ಧಾರಾವಾಹಿ ಶೂಟಿಂಗಿಗೆಂದು ಮೊದಲೇ ಕಟ್ಟಿಸಿಕೊಂಡಿದ್ದ 5 ಸಾವಿರ ರುಪಾಯಿ ಠೇವಣಿ ಮುಟ್ಟುಗೋಲು ಹಾಕಿಕೊಂಡು ಇನ್ನೂ 5 ಸಾವಿರ ರುಪಾಯಿಯನ್ನು ಚಂದ್ರು ಅವರಿಂದ ಪಾಲಿಕೆ ವಸೂಲಿ ಮಾಡಿತು.
ಪಾಲಿಕೆಯ ಉಪ ಆಯುಕ್ತ ಆರ್.ರೆ.ನಿರಂಜನ್ ಸುದ್ದಿಗಾರರಿಗೆ ಗುರುವಾರ (ಆ.28) ಈ ವಿಷಯ ತಿಳಿಸಿದರು. ಇಂಥಾ ಘಟನೆ ಮರುಕಳಿಸಕೂಡದೆಂಬ ಕಾರಣಕ್ಕೆ ಹಳೆಯ ಕೇಂದ್ರ ಕಾರಾಗೃಹವನ್ನು ಇನ್ನು ಮುಂದೆ ಯಾವ ಚಿತ್ರೀಕರಣಕ್ಕೂ ಕೊಡದಿರಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ.
ಹಳೆಯ ಕೇಂದ್ರ ಕಾರಾಗೃಹದಲ್ಲಿ ಉದ್ಯಾನವನ ನಿರ್ಮಿಸಲು ರಾಜ್ಯ ಸರ್ಕಾರ ಜಾಗವನ್ನು ಮಹಾನಗರ ಪಾಲಿಕೆಗೆ ಗುತ್ತಿಗೆ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications