ಗೀರಿಶ್ ಕಾಸರವಳ್ಳಿ ಟೈಂಪಾಸ್ ಹೇಗೆ ಮಾಡುತ್ತಾರೆ ?
'ಗಿರೀಶ್ ಕಾಸರವಳ್ಳಿ" ಎಂದೊಡನೆ ಪ್ರಶಸ್ತಿ ವಿಜೇತ ಚಿತ್ರಗಳಾದ 'ಘಟಶ್ರಾದ್ಧ", 'ತಬ್ಬಲಿಯು ನೀನಾದೆ ಮಗನೆ" ಹಾಗೂ 'ತಾಯಿಸಾಹೇಬ" ಚಿತ್ರಗಳು ನೆನಪಿನ ಪಟಲದಲ್ಲಿ ಮೂಡುತ್ತವೆ. ಈಗ ಅವರ ಬತ್ತಳಿಕೆಯಲ್ಲಿರುವ ಹೊಸ ಅಸ್ತ್ರ 'ದ್ವೀಪ".
ಗಿರೀಶ್ಗೂ ಪ್ರಶಸ್ತಿಗೂ ಏನೋ ಒಂದು ನಂಟು ! ಕೇವಲ ಪ್ರಶಸ್ತಿಗಾಗಿ ಅವರು ಚಿತ್ರ ತೆಗೀತಾರೆ ಅಂತ ಆರೋಪಿಸುವವರಿಗೂ ಕೊರತೆ ಏನಿಲ್ಲ.
ಗಿರೀಶ್ ಕಾಸರವಳ್ಲಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂದರೆ ಆ ವರ್ಷ ದೇಶದ ಇತರ ಕಲಾತ್ಮಕ ಚಿತ್ರ ನಿರ್ದೇಶಕರು ಪ್ರಶಸ್ತಿ ತಮಗೆ ದಕ್ಕುವುದಿಲ್ಲ ಎಂದು ಚಿತ್ರ ನಿರ್ಮಾಣದಿಂದಲೇ ಹಿಂದೆ ಸರಿಯುವಷ್ಟರ ಮಟ್ಟಿಗೆ ಕಲಾತ್ಮಕ ಮೆರುಗು ಉಳಿಸಿಕೊಂಡಿದ್ದಾರೆ.
ಒಂದು ವರ್ಷ ಸಿನಿಮಾ ತೆಗೆದು ಅದಕ್ಕೆ ಪ್ರಶಸ್ತಿ ದೊರೆತ ನಂತರ ಎರಡರಿಂದ ಮೂರು ವರ್ಷ ಸುಮ್ಮನಾಗುವ ಗಿರೀಶ್ ಅವರನ್ನು ಟೈಂಪಾಸ್ ಹೇಗೆ ಮಾಡ್ತೀರಿ ಅಂತ ಪ್ರಶ್ನಿಸಿದರೆ ನಾನು ಭಾಷೆ, ದೇಶ, ವರ್ತಮಾನದ ಬಗ್ಗೆ ಚಿಂತಿಸದೆ ಎಲ್ಲ ಭಾಷೆಯ ಸಮಕಾಲೀನ ಶ್ರೇಷ್ಠ ನಿರ್ದೇಶಕರ ಚಿತ್ರ ನೋಡ್ತೀನಿ ಅಂತಾರೆ.
ಮುಂದೆ ತೆಗೆಯುವ ಚಿತ್ರದ ಕಥಾವಸ್ತುವಿನ ಬಗ್ಗೆ ಮಾಹಿತಿ ಸಂಗ್ರಹಿಸ್ತೀನಿ. ಉದಾಹರಣೆಗೆ ಅಣೆಕಟ್ಟಿಗೆ ಸಂಬಂಧಿಸಿದ ಚಿತ್ರ ತೆಗೆಯುವುದಾದರೆ ಮೇಧಾ ಪಾಟ್ಕರ್, ಅರುಂಧತಿ ರಾಯ್ ಅವರ ಲೇಖನ, ಕೃತಿಗಳನ್ನೋದುತ್ತೇನೆ. ಪರಿಸರ ಸಂಬಂಧಿ ಚಿತ್ರವಾದರೆ ಆ ಕ್ಷೇತ್ರದ ಜನರ ಜತೆ, ಐತಿಹಾಸಿಕ ಕಥೆಯ ಚಿತ್ರವಾದರೆ ಇತಿಹಾಸ ತಜ್ಞರ ಜೊತೆ ಚರ್ಚಿಸುತ್ತೇನೆ ಎನ್ನುತ್ತಾರೆ. ಕಾಸರವಳ್ಳಿ.
ನನ್ನ ಸಿನಿಮಾ ಗಟ್ಟಿ ಮಾಡುವ ಯಾವುದೇ ಪುಸ್ತಕವನ್ನಾದರೂ ಓದುತ್ತೇನೆ. ಓದುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ ಎಂದೆನ್ನುವ ಅವರು ಪತ್ನಿ ವೈಶಾಲಿ ತಮ್ಮ ಪ್ರತಿಯಾಂದು ಸಾಧನೆಯ ಹಿಂದಿನ ಪ್ರೇರಕ ಶಕ್ತಿ ಎನ್ನಲು ಮರೆಯುವುದಿಲ್ಲ.
ವಿವಾದದಿಂದ ದೂರ ಇರಲು ಬಯಸುವ ಕಾಸರವಳ್ಳಿ ಆಗಿಂದಾಗ್ಗೆ ಪರಿಸರ ಚಳವಳಿಯಲ್ಲೂ ಮುಖ ತೋರುತ್ತಾರೆ. ಮನೆಯೆದುರಿನ ಹೂದೋಟಕ್ಕೆ ನೀರೆರೆಯುವುದು ಮನಕ್ಕೆ ತಂಪೆರೆಯುತ್ತದೆ ಎಂದವರು ಟೈಂಪಾಸ್ ಪ್ರವರಕ್ಕೆ ಮಂಗಳ ಹಾಡುತ್ತಾರೆ.(ವಿಜಯ ಕರ್ನಾಟಕ)


Click it and Unblock the Notifications