ಕನ್ನಡದ ಮೂವರು ನಟರು ಈಗ ನಿರ್ದೇಶಕರು
ನಟನೆ ಹಾಗೂ ನಿರ್ದೇಶನ ಈ ಎರಡು ದೊಡ್ಡ ಕೆಲಸಗಳು. ಈ ಎರಡೂ ಕೆಲಸವನ್ನು ಒಟ್ಟಿಗೆ ಮಾಡಿ ಗೆದ್ದಿವರೂ ಇದ್ದಾರೆ, ಸೋತವರೂ ಇದ್ದಾರೆ. ಆದರೆ, ಇದೀಗ ಕನ್ನಡದ ಮೂವರು ಸ್ಟಾರ್ ಗಳು ಅದೃಷ್ಣ ಪರೀಕ್ಷೆಗೆ ಇಳಿದಿದ್ದಾರೆ.
ಸ್ಯಾಂಡಲ್ ವುಡ್ ನ ಮೂರು ನಟರು ಈಗ ನಿರ್ದೇಶಕರಾಗುತ್ತಿದ್ದಾರೆ. ನಟ ಸತೀಶ್ ನೀನಾಸಂ ಇತ್ತೀಚೆಗಷ್ಟೆ ತಮ್ಮ ನಿರ್ದೇಶನದ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ನಿನ್ನೆ ಡಾರ್ಲಿಂಗ್ ಕೃಷ್ಣ ಸಹ ತಮ್ಮ ಡೈರೆಕ್ಷನ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು. ಈಗ ನಟ ಅನೀಶ್ ತೇಜೆಶ್ವರ್ ಕೂಡ ಆಕ್ಷನ್ ಕಟ್ ಹೇಳಲು ಬಂದಿದ್ದಾರೆ.
ಈ ಮೂರು ನಟರು ತಮ್ಮ ಮುಂದಿನ ಸಿನಿಮಾಗೆ ತಾವೇ ನಟನೆ ಹಾಗೂ ನಿರ್ದೇಶನ ಮಾಡಲಿದ್ದಾರೆ. ಅಂದಹಾಗೆ, ಕನ್ನಡದ ಈ ನಟರ ನಿರ್ದೇಶನದ ಹೊಸ ಸಿನಿಮಾಗಳ ವಿವರ ಮುಂದಿದೆ ಓದಿ....

'ಸಿದ್ಧೇಗೌಡ'ನಾದ ಸತೀಶ್
ನಟ ಸತೀಶ್ ನೀನಾಸಂ ಹೊಸವರ್ಷದ ವಿಶೇಷವಾಗಿ ತಮ್ಮ ನಿರ್ದೇಶನದ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ 'ಮೈ ನೇಮ್ ಇಸ್ ಸಿದ್ಧೇಗೌಡ' ಎಂಬ ಟೈಟಲ್ ಇಡಲಾಗಿದೆ. 'ಅಯೋಗ್ಯ' ಸಿನಿಮಾದ ತಮ್ಮ ಪಾತ್ರದ ಹೆಸರನ್ನೇ ಈ ಚಿತ್ರದ ಹೆಸರನ್ನಾಗಿಸಿದ್ದಾರೆ. ಅವರ ಬ್ಯಾನರ್ ನಲ್ಲಿಯೇ ಚಿತ್ರ ನಿರ್ಮಾಣ ಆಗುತ್ತಿದೆ.

ಪ್ರೇಮಕಥೆ ಹೇಳಲು ಬಂದ ಕೃಷ್ಣ
ನಟ ಡಾರ್ಲಿಂಗ್ ಕೃಷ್ಣ ಇದೀಗ ಡೈರೆಕ್ಟರ್ ಆಗಿದ್ದಾರೆ. ತಮ್ಮ ನಟನೆಯ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳಲು ನಿರ್ಧಾರ ಮಾಡಿದ್ದಾರೆ. ಅವರ ಮೊದಲ ನಿರ್ದೇಶನದ ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಮಾಡಿದ್ದಾರೆ. ಸಿನಿಮಾಗೆ 'ಲವ್ ಮೊಕ್ಟೈಲ್' ಎಂಬ ಹೆಸರು ಇಟ್ಟಿದ್ದಾರೆ. ನಟ ಸುದೀಪ್ ಟ್ವಿಟರ್ ಮೂಲಕ ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.

ಅನೀಶ್ ಈಗ 'ರಾಮಾರ್ಜುನ'
ನಟ ಅನೀಶ್ ತೇಜೆಶ್ವರ್ ಕೂಡ ಈಗ ಡೈರೆಕ್ಟರ್ ಆಗಿದ್ದಾರೆ. 'ರಾಮಾರ್ಜುನ' ಅವರ ನಿರ್ದೇಶನದ ಮೊದಲ ಚಿತ್ರವಾಗಿದ್ದು, ತಾವೇ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಮಾಸ್ ಸಿನಿಮಾ ಎಂಬುದು ಪೋಸ್ಟರ್ ನಲ್ಲಿ ಬಿಂಬಿತವಾಗುತ್ತಿದೆ. ಚಿತ್ರದ ಟೀಸರ್ ಜನವರಿ 12ಕ್ಕೆ ಬಿಡುಗಡೆಯಾಗಲಿದೆ. ಈ ಹಿಂದೆ ಒಂದು ವೆಬ್ ಸಿರೀಸ್ ನಿರ್ದೇಶನ ಮಾಡಿದ್ದರು.

ನಟನೆ ಜೊತೆಗೆ ನಿರ್ದೇಶನ
ಕನ್ನಡ ನಟರಾದ ಉಪೇಂದ್ರ, ರವಿಚಂದ್ರನ್, ಸುದೀಪ್, ರಕ್ಷಿತ್ ಶೆಟ್ಟಿ ಹೀಗೆ ಅನೇಕರು ನಿರ್ದೇಶನ ಹಾಗೂ ನಟನೆ ಎರಡರಲ್ಲಿಯೂ ಗೆದ್ದಿದ್ದಾರೆ. ಈಗ ಆ ಸಾಲಿಗೆ ಸೇರಲು ಸತೀಶ್ ನೀನಾಸಂ, ಅನೀಶ್ ತೇಜೆಶ್ವರ್ ಹಾಗೂ ಡಾರ್ಲಿಂಗ್ ಕೃಷ್ಣ ಕೂಡ ಉತ್ಸುಕರಾಗಿದ್ದಾರೆ.


Click it and Unblock the Notifications











