ಕನ್ನಡದ ದಿಗ್ಗಜರಿಗಿಲ್ಲ ಆ ಹೆಗ್ಗಳಿಕೆ: ಅಪರೂಪದ ಸಾಧನೆ ಮಾಡಿದ ಸಂಚಾರಿ ವಿಜಯ್
ಸಂಚಾರಿ ವಿಜಯ್ ಓರ್ವ ಅದ್ಭುತ ಕಲಾವಿದ. 'ನಾನು ಅವನಲ್ಲ ಅವಳು', 'ಹರಿವು' ಅಂತಹ ಕಲಾತ್ಮಕ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿಕೊಂಡವರು. ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದರೂ ವಿಜಯ್ಗೆ ಹೆಚ್ಚು ಮನ್ನಣೆ ಸಿಕ್ಕಿದ್ದು ಮಾತ್ರ ಕಲಾತ್ಮಕ ಹಾಗೂ ಪ್ರಯೋಗಾತ್ಮಕ ಪಾತ್ರಗಳ ಮೂಲಕವೇ. ಎಲ್ಲರಿಗೂ ತಿಳಿದಿರುವಂತೆ 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕಾಗಿ ಸಂಚಾರಿ ವಿಜಯ್ಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಬಹಳ ಚಿಕ್ಕವಯಸ್ಸಿನಲ್ಲಿ ಈ ಪ್ರಶಸ್ತಿಗೆ ಭಾಜನರಾದ ನಟ ವಿಜಯ್.
Recommended Video
ಗಮನಾರ್ಹ ವಿಚಾರ ಅಂದ್ರೆ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ದೇವ್ರು ಎನಿಸಿಕೊಂಡಿರುವ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಡಾ ಅಂಬರೀಶ್ ಅಂತಹ ದಿಗ್ಗಜ ಕಲಾವಿದರಿಗೂ ಸಹ ರಾಷ್ಟ್ರ ಪ್ರಶಸ್ತಿಯ ಹೆಗ್ಗಳಿಕೆ ಸಿಗಲಿಲ್ಲ. ಆದರೆ, ಸಂಚಾರಿ ವಿಜಯ್ ಪಾಲಿಗೆ ಇದು ದೊಡ್ಡ ಸಾಧನೆಯೇ ಸರಿ. ಅಂದ್ಹಾಗೆ, ಇದುವರೆಗೂ ಕನ್ನಡದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ನಟರು ಬರಿ ಮೂರು ಕಲಾವಿದರು. ಅದರಲ್ಲಿ ಒಬ್ಬರು ಸಂಚಾರಿ ವಿಜಯ್. ಉಳಿದ ಇಬ್ಬರು ಯಾರು? ಮುಂದೆ ಓದಿ....

1975ರಲ್ಲಿ ವಾಸುದೇದ ರಾವ್
ಕನ್ನಡದಲ್ಲಿ ಮೊಟ್ಟ ಮೊದಲ ರಾಷ್ಟ್ರ ಪ್ರಶಸ್ತಿ ಪಡೆದ ನಟ ಎಂವಿ ವಾಸುದೇವರಾವ್. 1975ರಲ್ಲಿ ತೆರೆಕಂಡ 'ಚೋಮನ ದುಡಿ' ಸಿನಿಮಾದ ಚೋಮನ ಪಾತ್ರಕ್ಕಾಗಿ ಈ ಪ್ರಶಸ್ತಿ ಲಭಿಸಿತ್ತು. ಶಿವರಾಮ ಕಾರಂತರ ಕಾದಂಬರಿ ಆಧರಿಸಿದ ತಯಾರಾಗಿದ್ದ ಈ ಚಿತ್ರಕ್ಕೆ ಬಿವಿ ಕಾರಂತ ನಿರ್ದೇಶನ ಮಾಡಿದ್ದರು.

ತಬರನಕಥೆಗೆ ಎರಡನೇ ಬಾರಿ ಪ್ರಶಸ್ತಿ
1986ರಲ್ಲಿ ಎರಡನೇ ಬಾರಿ ಕನ್ನಡದ ನಟನೊಬ್ಬ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿಗೆ ಭಾಜನರಾದರು. 'ತಬರನಕಥೆ' ಚಿತ್ರದ ನಟನೆಗಾಗಿ ಚಾರುಹಾಸನ್ ಈ ಪ್ರಶಸ್ತಿ ಪಡೆದರು. ತಬರ ಶೆಟ್ಟಿ ಪಾತ್ರ ನಿರ್ವಹಿಸಿದ್ದ ಚಾರುಹಾಸನ್, ನಟಿ ಸುಹಾಸಿನಿ ತಂದೆ ಹಾಗೂ ಕಮಲ್ ಹಾಸನ್ ಸಹೋದರ. ಗಿರೀಶ್ ಕಾಸರವಳ್ಳಿ ಈ ಚಿತ್ರ ನಿರ್ದೇಶಿಸಿದ್ದರು.

2014ರಲ್ಲಿ ಸಂಚಾರಿ ವಿಜಯ್
2014ರಲ್ಲಿ ನಟ ಸಂಚಾರಿ ವಿಜಯ್ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಲಿಂಗದೇವರು ನಿರ್ದೇಶಿಸಿದ್ದ 'ನಾನು ಅವನಲ್ಲ ಅವಳು' ಚಿತ್ರದಲ್ಲಿ ತೃತೀಯ ಲಿಂಗಿ ಪಾತ್ರದಲ್ಲಿ ವಿಜಯ್ ಅಭಿನಯಿಸಿದ್ದರು. ಈ ಪಾತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.

ತಲೆದಂಡ ಚಿತ್ರದ ಮೇಲೂ ನಿರೀಕ್ಷೆ
ಕೃಪಾಕರ್ ನಿರ್ದೇಶನದಲ್ಲಿ 'ತಲೆದಂಡ' ಎಂಬ ಚಿತ್ರ ತಯಾರಾಗಿದೆ. ಈ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಅದಕ್ಕೂ ಮುಂಚೆಯೇ ವಿಜಯ್ ಇಹಲೋಕ ಸಂಚಾರ ಮುಗಿಸಿದರು. ಇದೀಗ, ಈ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ರಾಜ್ಯ ಪ್ರಶಸ್ತಿ ಅಥವಾ ರಾಷ್ಟ್ರ ಪ್ರಶಸ್ತಿ ಸಿಗಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ವಿಶೇಷವಾಗಿ ವಿಜಯ್ ಪಾತ್ರ ಬಹಳ ಗಮನ ಸೆಳೆಯುತ್ತಿದೆ.


Click it and Unblock the Notifications











