ಅಂಬಿ ಹೃದಯಕ್ಕೆ ಕಿಡಿಗೇಡಿಗಳು ಮತ್ತೆ ಗಾಯ!
ಕಲಿಯುಗ ಕರ್ಣ, ರೆಬಲ್ ಸ್ಟಾರ್, ಮಳವಳ್ಳಿ ಗಂಡು ಅಂಬರೀಷ್ ಹೃದಯದ ಮೇಲೆ ಕಿಡಿಗೇಡಿಗಳು ಮತ್ತೊಮ್ಮೆ ದಾಳಿ ಮಾಡಿದ್ದಾರೆ. "ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ಹೃದಯಾಘಾತವಂತೆ. ಕಲಿಯುಗ ಕರ್ಣ ದಿಢೀರ್ ಅಂತ ಕಣ್ಮುಚ್ಚಿದರಂತೆ..." ಹಾಗಂತೆ ಹೀಗಂತೆ ಎಂಬ ಅಂತೆ ಕಂತೆಗಳ ಸಂತೆ ಸುದ್ದಿಗಳು ಗುರುವಾರ ಮಟ ಮಟ ಮಧ್ಯಾಹ್ನ ಕಾಡ್ಗಿಚ್ಚಿನಂತೆ ಹಬ್ಬಿ ಕನ್ನಡ ಚಿತ್ರೋದ್ಯಮವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿವೆ.
ಅಯೋಧ್ಯೆ ರಾಮಜನ್ಮ ಭೂಮಿ ಬಾಬರಿ ಮಸೀದಿ ವಿವಾದ ಪ್ರಕರಣ ಹೊರಬೀಳುತ್ತಿರುವ ಈ ಸಂದರ್ಭದಲ್ಲಿ ಇಡೀ ದೇಶವೇ ಗಪ್ ಚುಪ್ ಎಂದು ಕುಳಿತು ಕಣ್ಣುಗಳನ್ನು ಸುದ್ದಿ ವಾಹಿನಿಗಳಿಗೆ ಕೀಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಂಬರೀಷ್ ಬಗ್ಗೆ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ತಮಾಷೆ ಮಾಡಲು ಹೋಗಿದ್ದಾರೆ.
ಮೂಲಗಳ ಪ್ರಕಾರ, ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತನ್ನ ವೈದ್ಯ ಮಿತ್ರರೊಬ್ಬರಿಗೆ ಕರೆ ಮಾಡಿ ಅಂಬರೀಷ್ ಅವರಿಗೆ ಹೃದಯಾಘಾತವಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಮಾಧ್ಯಮಗಳ ಕಿವಿಗೆ ಬೀಳುವುದಕ್ಕೂ ಮುನ್ನ ಈ ಸುದ್ದಿ ಆ ಕಿವಿಯಿಂದ ಈ ಕಿವಿಗೆ ತಲುಪಿ ಕಡೆಗೆ ಮೊಬೈಲ್ಗಳಲ್ಲಿ ಸರಿದಾಡಿದೆ.
ಕಡೆಗೆ ಕನ್ನಡ ಟಿವಿ ಮಾಧ್ಯಮಗಳ ಕಚೇರಿಗೆ ಸುದ್ದಿ ಮುಟ್ಟುವ ವೇಳೆಗೆ ಮಧ್ಯಾಹ್ನ ಊಟದ ಸಮಯ ಮೀರಿತ್ತು. ಇದರ ಸತ್ಯಾಸತ್ಯತೆಗಳನ್ನು ತಿಳಿಯಲು ಸ್ವತಃ ಅಂಬರೀಷ್ ಅವರಿಗೆ ದೂರವಾಣಿ ಮಾಡಲಾಗಿ, ಅವರು ಎಂದಿನಂತೆ ನನಗೇನು ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ನನಗೆ ಹಾರ್ಟ್ ಅಟ್ಯಾಕು ಇಲ್ಲ ಎಂತಹದ್ದೂ ಇಲ್ಲ. ನಾನುಗುಂಡುಕಲ್ಲಿನಂತೆ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಬ್ಬ ವ್ಯಕ್ತಿ ಜೀವಂತವಾಗಿರುವಾಗಲೆ ಸತ್ತ ಸುದ್ದಿ ಹಬ್ಬಿದರೆ ಅವರಿಗೆ ನೂರು ವರ್ಷ ಆಯಸ್ಸಂತೆ! ಹಾಗಾಗಿ ರೆಬಲ್ ಸ್ಟಾರ್ ಅಂಬರೀಷ್ ಅವರು ಚಿರಂಜೀವಿ ಸುಖಿಭವ. ಅವರು ಇನ್ನೂ ನೂರ್ಕಾಲಿ ಬಾಳಿ, ಬದುಕಲಿ ಎಂಬುದು ನಮ್ಮ ನಿಮ್ಮೆಲ್ಲರ ಅವರ ಎಲ್ಲ ಅಭಿಮಾನಿಗಳ ಹಾರೈಕೆ.


Click it and Unblock the Notifications











