ದರ್ಶನ್ ದ್ವಿಪಾತ್ರದ 'ಇಂದ್ರ' ಹಾಗೂ ಆತ್ಮೀಯ ತೆರೆಗೆ
ಪ್ರಥಮ ಬಾರಿಗೆ ದರ್ಶನ್ ತೂಗದೀಪ ಅವರು ದ್ವಿಪಾತ್ರದಲ್ಲಿ ಅಭಿನಯಿಸಿರುವ ಇಂದ್ರ ಚಿತ್ರ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಗಜ' ಚಿತ್ರದ ಅನಿರೀಕ್ಷಿತ ಯಶಸ್ಸಿನಿಂದ ಪುಳಕಗೊಂಡಿರುವ ದರ್ಶನ್, ಅದೇ ಹುಮ್ಮಸ್ಸಿನಿಂದ ಇಂದ್ರ ಚಿತ್ರದಲ್ಲಿ ವಿವಿಧ ಗೆಟೆಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ದರ್ಶನ್ ಚಿತ್ರವೆಂದ ಮೇಲೆ ಹಾಡು, ಕುಣಿತ, ಸಾಹಸ, ಸ್ವಲ್ಪ ಸೆಂಟಿಮೆಂಟ್ ಮಾಮೂಲಿ, ಚಿತ್ರದ ಪ್ರತಿ ದೃಶ್ಯದಲ್ಲೂ ರಿಚ್ ನೆಸ್ ತರಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ ನಿರ್ದೇಶಕ ಎಚ್. ವಾಸು.
ದರ್ಶನ್ ಬ್ಯಾನರ್ ಹಾಗೂ ಅವರ ಚಿತ್ರಗಳಿಗೆ ಖಾಯಂ ಸಂಗೀತ ನಿರ್ದೇಶಕರಾಗಿರುವ ಗಾಳಿಪಟ ಚಿತ್ರ ಖ್ಯಾತಿಯ ಹರಿಕೃಷ್ಣ, ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರಿಗೆ ಸರಿಹೊಂದುವಂತೆ ಹಾಡುಗಳನ್ನು ನೀಡಿದ್ದಾರೆ ಎಂದು ದರ್ಶನ್ ಹೇಳಿಕೆ. ಹಾಡುಗಳ ಶೈಲಿಯಲ್ಲಿ ಹೊಸತನವೇನಿಲ್ಲ ಎಂಬುದು ಕೇಳುಗರ ಅಭಿಪ್ರಾಯ. ಇನ್ನೂ ದರ್ಶನ್ ಚಿತ್ರದ ಪ್ರಮುಖ ಹೈಲೈಟ್ ಆದ ಸಂಭಾಷಣೆ ಹಾಗೂ ಸಾಹಸ ಸನ್ನಿವೇಶಗಳ ಜವಾಬ್ದಾರಿಯನ್ನು ಬಿ.ಎ. ಮಧು ಹಾಗೂ ರವಿವರ್ಮ ಹೊತ್ತಿದ್ದಾರೆ. ರಸಿಕ ಪ್ರೇಕ್ಷಕರ ಮನತಣಿಸಲು ತೊರ ಮೈಯ ಸುಂದರಿ ನಮಿತಾ ಇದ್ದಾರೆ. ಉಳಿದಂತೆ ಬ್ಯಾಂಕಾಕ್, ಸ್ವಿಟ್ಜರ್ ಲ್ಯಾಂಡ್ ಗಳಲ್ಲಿ ಕೃಷ್ಣಕುಮಾರ್ ಚಿತ್ರೀಕರಿಸಿರುವ ದೃಶ್ಯಗಳು ಮೋಹಕವಾಗಿ ಬಂದಿದೆ ಇದು ಅಪ್ಪಟ ಮನರಂಜನೆ ಚಿತ್ರ ಎಂದು ದರ್ಶನ್ ಹೇಳಿದ್ದಾರೆ.
ಭರವಸೆಯ ಕಲಾವಿದರ ಚಿತ್ರ ಆತ್ಮೀಯ
ಕಿರುತೆರೆಯಲ್ಲಿ ನಟಿಸಿ, ನೃತ್ಯ ಮಾಡಿ ಸೈ ಎನಿಸಿಕೊಂಡಿರುವ ಅಕುಲ್ ಹಾಗೂ ನಖರಾವಾಲಿ ಸ್ಮಿತಾ ಅಭಿನಯನದ ಆತ್ಮೀಯ ಚಿತ್ರ ತೆರೆಕಂಡಿದೆ. ಹೊಸಬರ ಚಿತ್ರವಾದ್ದರಿಂದ ಹೆಚ್ಚಿನ ನಿರೀಕ್ಷೆಯಿಲ್ಲದೆ ಪ್ರೇಕ್ಷಕ ಒಮ್ಮೆ ಚಿತ್ರ ನೋಡಿ ಪ್ರೋತ್ಸಾಹ ನೀಡಬೇಕೆಂಬುದು ನಿರ್ದೇಶಕ ಗೋವಿಂದರಾಜ್ ಮನವಿ. ಕಥೆ ಸಾರಾಂಶ ಹೀಗಿದೆ:
ನಾಯಕ ಅಕುಲ್ ಹುಟ್ಟು ಸೋಮಾರಿ. ಜವಾಬ್ದಾರಿ ಇಲ್ಲದ ಹುಡುಗ. ಆದರೆ ವಿದ್ಯಾವಂತ. ಕೆಲಸವಿಲ್ಲದೆ ಅಕ್ಕನ ಮನೆ ಸೇರಿ ಆರಾಮವಾಗಿರುತ್ತಾನೆ. ಮುಂದೆ, ಭಾವ ಕೊಡಿಸಿದ ಕೆಲಸದ ಜತೆಜತೆಗೆ ಹುಡುಗಿಗೆ(ನಾಯಕಿ)ಆಪ್ತನಾಗುತ್ತಾನೆ. ಇಬ್ಬರ ಆತ್ಮೀಯ ಸಂಬಂಧ ಜೀವನ ಪಾಠ ಹೇಗೆ ಸಾಗುತ್ತದೆ ಎಂಬುದು ಕಥೆಯ ಮುಂದಿನಭಾಗ. ಈ ಚಿತ್ರದಲ್ಲಿ ರಂಗಾಯಣ ರಘು ಅವರದು ಪ್ರಮುಖ ಪಾತ್ರ. ಮನೋಜ್ ಜಾರ್ಜ್ ಮೊದಲ ಬಾರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
(ದಟ್ಸ್ ಸಿನಿವಾರ್ತೆ)


Click it and Unblock the Notifications