ವಿಚ್ಚೇದನದ ನಂತರ ಸುಖಿ ದಾಂಪತ್ಯದ ರಹಸ್ಯ ಹೇಳಿದ ನಿವೇದಿತಾ ಗೌಡ ; ಡಿವೋರ್ಸ್ಗೆ ಇದೇ ಕಾರಣ ಎಂಬ ಗೊಂಬೆ
ದಾಂಪತ್ಯದಲ್ಲಿ ನಂಬಿಕೆ ಮಾತ್ರ ಅಲ್ಲ ಸಮಯ ಕೂಡ ತುಂಬಾನೇ ಮುಖ್ಯ. ಆಗ ಮಾತ್ರ ಸಂಬಂಧ ದೀರ್ಘ ಕಾಲ ಬಾಳಲು ಸಾಧ್ಯ. ಆದರೆ..ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಲವರ ಬದುಕು ಯಾಂತ್ರಿಕ ಕ್ರಿಯೆ ಆಗಿದೆ. ಹೆಂಡತಿ ಜೊತೆ ಮಾತನಾಡಲು ಗಂಡನ ಹತ್ತಿರ ಸಮಯ ಇರಲ್ಲ. ಗಂಡ ಮಾತನಾಡಲು ಬಂದಾಗ ಹೆಂಡತಿ ಪುರುಸೊತ್ತಾಗಿ ಇರುವುದಿಲ್ಲ.
ಒಂದೇ ಮನೆಯಲ್ಲಿದ್ದರೂ ಕೂಡ ಸಂಬಂಧ ಉಂಡು-ಮಲುಗುವುದಕ್ಕೆ ಮಾತ್ರ ಸೀಮಿತವಾಗಿರುತ್ತೆ. ಮನ ಮನ ಬೆರೆಯಲ್ಲ. ಮನದ ಭಾವನೆಯನ್ನು ಇಬ್ಬರಲ್ಲಿ ಒಬ್ಬರೂ ಕೂಡ ಹಂಚಿಕೊಳ್ಳುವುದಿಲ್ಲ. ಹೀಗಾಗಿ ಮದುವೆಯ ಸಂಬಂಧವನ್ನು ವರ್ಷದಲ್ಲಿ ಅಳೆಯುವುದಕ್ಕಿಂತ ಜೊತೆಯಲ್ಲಿ ಕಳೆದ ಸುಂದರ, ಸುಮಧುರ ಕ್ಷಣಗಳ ಆಧಾರದ ಮೇಲೆ ಲೆಕ್ಕ ಹಾಕಬೇಕೆಂದು ದೊಡ್ಡವರು ಹೇಳುತ್ತಾರೆ. ದಾಂಪತ್ಯ ಜೀವನ ಮುರಿದು ಬೀಳಲು ಪ್ರಮುಖವಾದ ಕಾರಣಗಳಲ್ಲಿ ಈ ಸಮಯದ ಸಮಸ್ಯೆ ಕೂಡ ಒಂದು ಎಂದು ಹೇಳುತ್ತಾರೆ. ಸದ್ಯ ಇದೇ ಮಾತನ್ನು ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ ನಿವೇದಿತಾ ಗೌಡ ಕೂಡ ಪುನರುಚ್ಚಿಸಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ದಾಂಪತ್ಯ ಜೀವನ ಮುಕ್ತಾಯವಾಗಿ ಎರಡು ವರ್ಷಗಳಾಗುತ್ತ ಬಂದಿವೆ. ಗೌರವಯುತವಾಗಿ ದೂರವಾದ ಇಬ್ಬರು ಈ ಒಂದೂವರೆ ವರ್ಷದಲ್ಲಿ ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳ ಮೂಲಕ ಸದ್ದು ಮಾಡಿದ್ದಾರೆ.
ನಿವೇದಿತಾ ಗೌಡ ತೆಲುಗು ಚಿತ್ರರಂಗದ ಬಾಗಿಲು ಬಡೆದು ಬಂದಿದ್ಧಾರೆ. ''ವಾಲು ಕಳ್ಳತಾ'' ಹೆಸರಿನ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ''ಐ ಆಮ್ ಗಾಡ್'' ಚಿತ್ರದಲ್ಲಿ ದಿಗಂತ್ ಜೊತೆ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇದರ ಜೊತೆ ಎಂದಿನಂತೆ ರೀಲ್ಸ್ಗಳನ್ನು ಮಾಡುತ್ತಾ ಪಡ್ಡೆ ಹುಡುಗರ ಕಣ್ಮನ ಸೆಳೆಯುತ್ತಿರುವ ನಿವೇದಿತಾ ದೇಶ ಸುತ್ತುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.
ಮತ್ತೊಂದು ಕಡೆ ಚಂದನ್ ಶೆಟ್ಟಿ ''ಕಾಟನ್ ಕ್ಯಾಂಡಿ'' ಎಂಬ ಆಲ್ಬಂ ಹಾಡೊಂದನ್ನು ಮಾಡಿದ್ದಾರೆ. ನಾಯಕನಾಗಿ ಕೂಡ ಚಿತ್ರರಂಗದಲ್ಲಿ ಬಡ್ತಿ ಪಡೆದಿದ್ದಾರೆ. ಕ್ರಿಸ್ ಗೇಲ್ ಅವರ ಜೊತೆ ಕೂಡ ಕೈ ಜೋಡಿಸಿದ್ದಾರೆ. ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆಲ್ಬಂ ಹಾಡುಗಳನ್ನು ಕೂಡ ಹೊರ ತರುತ್ತಿದ್ದಾರೆ. ಇನ್ನು ವಿಚ್ಛೇದನಕ್ಕಿಂತ ಮುನ್ನ ಒಪ್ಪಿಕೊಂಡಿದ್ದ ''ಮುದ್ದು ರಾಕ್ಷಸಿ'' ಎಂಬ ಚಿತ್ರವನ್ನು ಕೂಡ ಇಬ್ಬರು ಮುಗಿಸಿದ್ದಾರೆ.
ಹೀಗೆ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಾಗಿರುವ ಇವರು ಇಬ್ಬರು ಮುಂದೊಂದು ದಿನ ಮತ್ತೊಂದು ಮದುವೆ ಆಗ್ತಾರಾ ಗೊತ್ತಿಲ್ಲ. ಆದರೆ.. ಸದ್ಯ ನಿವೇದಿತಾ ಗೌಡ ತಮ್ಮ ವಿಚ್ಚೇದನದ ನಂತರ ಸುಖಿ ದಾಂಪತ್ಯದ ರಹಸ್ಯ ಹೇಳಿದ್ದಾರೆ. ಸುಖ ಸಂಸಾರಕ್ಕೆ ಕೇವಲ 30 ನಿಮಿಷ ಸಾಕು ಎಂದಿದ್ದಾರೆ.

ಈ ಕುರಿತು ''anything_about_eveything''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ ಗೌಡ, ಒಬ್ಬ ವ್ಯಕ್ತಿಯ ಜೊತೆ ನೀವು ಎಷ್ಟು ಗಂಟೆ ಕಳೆಯುತ್ತಿದ್ದೀರಾ ಎನ್ನುವುದು ಮುಖ್ಯವಲ್ಲ. 24 ಗಂಟೆ ಜೊತೆಯಲ್ಲಿ ಇರುವುದು ಕೂಡ ಮುಖ್ಯ ಅಲ್ಲ, ಆದರೆ ಕೊನೆ ಪಕ್ಷ ಅರ್ಧ ಗಂಟೆಯಾದರೂ ನಾವು ಪ್ರೀತಿ ಮಾಡುವ, ಇಷ್ಟ ಪಡುವ, ವ್ಯಕ್ತಿಗಳಿಗೆ ನಮ್ಮ ಸಮಯವನ್ನು ನಾವು ಮೀಸಲಿಡುವುದು ಮುಖ್ಯ ಎಂದಿದ್ದಾರೆ.
ಆ 30 ನಿಮಿಷ ಸಂಪೂರ್ಣ ಗಮನ ನಮ್ಮ ಜೊತೆ ಇರುವ ವ್ಯಕ್ತಿಯ ಮೇಲಿರಬೇಕೆ ಹೊರತು ಆ ಕಡೆ ಈ ಕಡೆ ಹೋಗಬಾರದು ಎಂದು ಹೇಳಿರುವ ನಿವೇದಿತಾ, ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂದು ಹೇಳಿದ್ದಾರೆ. ಹೀಗಾದಾಗ ಸಂಬಂಧಗಳು ಚೆನ್ನಾಗಿರುತ್ತಾವೆ ಎಂದಿದ್ದಾರೆ. ಎಂದಿನಂತೆ ಹಲವರು ನಿವೇದಿತಾ ಗೌಡ ಅವರ ಈ ಮಾತುಗಳ ಬಗ್ಗೆಯೂ ಅಪಸ್ವರ ತೆಗೆಯುತ್ತಿದ್ದಾರೆ. ನಿವೇದಿತಾ ಗೌಡ ಅವರ ಕಾಲೆಳೆಯುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











