ಬರಿ 500ರೂಪಾಯಿಗಾಗಿ ಕೈಚಾಚಿದ ಚಾಮಯ್ಯ ಮೇಷ್ಟ್ರು!
'ನಾಗರಹಾವು" ಚಿತ್ರದ ಚಾಮಯ್ಯ ಮೇಷ್ಟ್ರು ಕಷ್ಟದಲ್ಲಿದ್ದಾರೆ! ಅನಾರೋಗ್ಯ ಒಂದು ಕಡೆಯಾದರೆ, ಹಣಕಾಸಿನ ಮುಗ್ಗಟ್ಟು ಇನ್ನೊಂದು ಕಡೆ.
ಹೌದು. ತಮ್ಮ ಪ್ರಬುದ್ಧ ಅಭಿನಯದಿಂದ ಮಿಂಚಿದ, ಸುಮಾರು 272 ಚಿತ್ರಗಳಲ್ಲಿ ಅಭಿನಯಿಸಿ, ಕನ್ನಡಿಗರ ಹೃದಯ ಗೆದ್ದ ನಟ ಕೆ.ಎಸ್.ಅಶ್ವಥ್ ಸದ್ಯದ ಆರ್ಥಿಕ ಪರಿಸ್ಥಿತಿ ಶೋಚನೀಯ. ಕೇವಲ 500ರೂಪಾಯಿಗಳ ಗೌರವ ಮಸಾಶನಕ್ಕಾಗಿ ಸರ್ಕಾರದ ಮುಂದೆ ಅವರು ನಿಂತಿದ್ದಾರೆ!
ಒಂದು ಸಮಾಧಾನದ ಸಂಗತಿಯೆಂದರೆ ಅಶ್ವಥ್ ಕಷ್ಟ ನೀಗಿಸಲು, ಸರ್ಕಾರ ಮುಂದೆ ಬಂದಿದೆ. ಮೈಸೂರಿನ ಅಶ್ವಥ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹೆಚ್.ಎಸ್.ಮಹದೇವ್ ಪ್ರಸಾದ್, ಪೂರಕ ಭರವಸೆಗಳನ್ನು ನೀಡಿದ್ದಾರೆ.
ಶೀಘ್ರವಾಗಿ ಆರೋಗ್ಯ ಸುಧಾರಿಸಲಿ ಎಂದು ಆಶಿಸಿರುವ ಸಚಿವರು, ವೈದ್ಯಕೀಯ ವೆಚ್ಚ ಮತ್ತು ಗೌರವ ಮಸಾಶನವನ್ನು ಪ್ರತಿತಿಂಗಳು ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಸೋಮವಾರವಷ್ಟೇ ತಮ್ಮ ಖಾತೆಯನ್ನು ವಹಿಸಿಕೊಂಡಿರುವ ಮಹದೇವ್ ಪ್ರಸಾದ್, ನಾಡಿನ ಹಿರಿಯ ನಟನ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಚಿತ್ರರಂಗದ ಈಗಿನ ವಾತಾವರಣ ಕಂಡು ನಟನೆಗೆ ವಿದಾಯ ಘೋಷಿಸಿದ್ದ ಅಶ್ವಥ್, ಅದ್ಯಾವ ಕಾರಣಕ್ಕೋ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದರು. ಅಶ್ವಥ್ ಅಭಿನಯದ 'ಭೂಪತಿ" ಚಿತ್ರ ಬಿಡುಗಡೆಗಾಗಿ ಕಾಯುತ್ತಿದೆ.
ಬಣ್ಣದ ಬದುಕಿನಲ್ಲಿ ಮೆರೆದ ಕಲಾವಿದರ ಬದುಕು ಹೀಗೂ ಆಗುತ್ತದೆ! ತಮ್ಮ ಅಭಿನಯದಿಂದ ನಮ್ಮೆಲ್ಲರನ್ನು ರಂಜಿಸಿದ ಅಶ್ವಥ್ಗೆ, ವೃದ್ಧಾಪ್ಯದ ಈ ಹೊತ್ತಿನಲ್ಲಿ ನಾವು-ನೀವು ಏನಾದರೂ ಮಾಡಲು ಸಾಧ್ಯವೇ? ಯೋಚಿಸೋಣ.


Click it and Unblock the Notifications