ನಿಷೇಧಿತ ಪ್ರದೇಶಗಳಲ್ಲಿ ಶೂಟಿಂಗ್ಗೆ ಅನುಮತಿ ನೀಡಲು ಸರ್ಕಾರದ ಸಮ್ಮತಿ
ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ಉದ್ಯಮದ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು , ಈ ಕುರಿತ ಆದೇಶವನ್ನು ಸರ್ಕಾರ ಶೀಘ್ರದಲ್ಲೇ ಹೊರಡಿಸಲಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ರಮೇಶ್ ಏಪ್ರಿಲ್ 29ರ ಮಂಗಳವಾರ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸ್ಯಾಂಡಲ್ವುಡ್ಗೆ ಉದ್ಯಮದ ಸ್ಥಾನಮಾನ ನೀಡುವ ಸರ್ಕಾರದ ಆದೇಶವನ್ನು ಶೀಘ್ರ ಹೊರಡಿಸುವುದಾಗಿ ಸಚಿವರು ಭರವಸೆ ನೀಡಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ ರಮೇಶ್ ಸಭೆಯ ಫಲಶ್ರುತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ರಾಜ್ಯದ ಕೆಲವು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ಹೇರಿರುವ ನಿರ್ಬಂಧವನ್ನು ವಾಪಸ್ಸು ಪಡೆಯಲು ಕೂಡ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಪ್ರತಿ ಚಿತ್ರಕ್ಕೆ ಕನಿಷ್ಠ ಏಳೂವರೆ ಲಕ್ಷ ರುಪಾಯಿ ಸಬ್ಸಿಡಿ ನೀಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು , ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ರಮೇಶ್ ತಿಳಿಸಿದರು.
ಉದ್ಯಮದ ಸ್ಥಾನಮಾನ ನೀಡುವುದರಿಂದ ಚಿತ್ರರಂಗಕ್ಕೆ ಹಲವು ರೀತಿಯ ಲಾಭವುಂಟಾಗುತ್ತದೆ ಎಂದು ರಮೇಶ್ ಅಭಿಪ್ರಾಯಪಟ್ಟರು.
ಸಚಿವರೊಂದಿಗೆ ನಡೆದ ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ, ಸಾ.ರಾ.ಗೋವಿಂದು ಮುಂತಾದವರು ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications