ಕ್ಯಾನ್ಸ್ ಚಲನಚಿತ್ರೋತ್ಸವಕ್ಕೆ ನಾಗತಿಹಳ್ಳಿಯ ‘ಮಾಮಾಮ’
ಬೆಂಗಳೂರು : ನಿರ್ದೇಶಕ ನಾಗತಿಹಳ್ಳಿಚಂದ್ರಶೇಖರ್ ಅವರ ‘ಮಾತಾಡ್ ಮಾತಾಡ್ ಮಲ್ಲಿಗೆ(ಮಾಮಾಮ)’ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕ್ಯಾನ್ಸ್ ಚಲನಚಿತ್ರೋತ್ಸವಕ್ಕೆ ಕಳಿಸಲಾಗುತ್ತಿದೆ.
ಮೇ 15ರಿಂದ ಪ್ರಾರಂಭವಾಗುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ವಿಷ್ಣುವರ್ಧನ್, ಸುಹಾಸಿನಿ ಹಾಗೂ ಸುದೀಪ್ ತಾರಾಗಣದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದ ಡಿವಿಡಿಯನ್ನು ಮಾರಾಟ ಮಾಡಲಾಗುವುದು .
ಡಬ್ಬಿಂಗ್ ಅಂತದಲ್ಲಿರುವ ಈ ಚಿತ್ರ ರಾಜ್ಯಾದ್ಯಾಂತ ಜೂನ್ ಅಂತ್ಯಕ್ಕೆ ಅಥವಾ ಜುಲೈ ಮೊದಲ ವಾರ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳು(ಎಂಎನ್ಸಿ), ಸಣ್ಣ ಹಳ್ಳಿಯನ್ನು ಹೇಗೆ ವಶಪಡಿಸಿಕೊಳ್ಳಲು ಹುನ್ನಾರ ನಡೆಸುತ್ತದೆ. ಸಾರ್ವಜನಿಕರ ಪ್ರತಿಭಟನೆ, ವಿಶೇಷ ಆರ್ಥಿಕ ವಲಯ, ಭೂ ಮಾಫಿಯಾ, ನಕ್ಸಲಿಸಂ, ಗಣಿಗಾರಿಕೆ, ರಾಜಕಾರಣಿಗಳ ಕುತಂತ್ರ ಮುಂತಾದ ಬಿಸಿಬಿಸಿ ವಿಷಯಗಳನ್ನು ಈ ಚಿತ್ರದ ಕಥಾವಸ್ತು ಹೊಂದಿದೆ. ಇದರ ಜೊತೆಗೆ 6 ಹಾಡುಗಳು, 6 ಜನ ಹೊಸ ಕಲಾವಿದರು ಚಿತ್ರದಲ್ಲಿದ್ದಾರೆ.
ಈ ಚಿತ್ರದ ಕಥೆ ಹೆಣೆಯಲು ಸುಮಾರು 3 ವರ್ಷಗಳ ಕಾಲ ಸಂಶೋಧನೆ ನಡೆಸಲಾಗಿದೆ. ಜಾಗತೀಕರಣ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ದಬ್ಬಾಳಿಕೆ ವಿರುದ್ಧ ದನಿಯೆತ್ತುವವರು ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಬೆದರಿಕೆ ಕರೆ :
ಈ ಚಿತ್ರವನ್ನು ನಿಲ್ಲಿಸುವಂತೆ ಅನೇಕ ಇ-ಮೇಲ್ಗಳು, ಅನಾಮಧೇಯ ದೂರವಾಣಿ ಕರೆಗಳು ಬಂದಿವೆ. ಕೆಲವರಂತೂ, ವಿಶ್ವಸಂಸ್ಥೆಯ ಪ್ರತಿನಿಧಿಗಳೆಂದು ಹೇಳಿಕೊಂಡು ಬೆದರಿಕೆ ಒಡ್ಡಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯಾಬ್ಬರಿಗೂ ತಮ್ಮ ಅಭಿಪ್ರಾಯ ಮಂಡಿಸುವ ಹಕ್ಕು ಇದೆ. ಬೆದರಿಕೆಗೆ ನಾನು ಜಗ್ಗುವುದಿಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications