ನಟನಾಗಿ ಸರಣಿ ಸೋಲುಣ್ಣುತ್ತಿರುವ ರಮೇಶ್ ವಿತರಕನಾಗಿ ಈಗಾಗಲೇ ಲಾಭ- ನಷ್ಟ ಅನುಭವಿಸಿರುವುದುಂಟು. ಈಗ ನಿರ್ದೇಶಕನಾಗಿ ತಮ್ಮ ವರಸೆ ಮೆರೆಯಲು ಅವರು ಸಜ್ಜಾಗಿದ್ದಾರೆ. ಚೆಂದದ ಕತೆ ಇದ್ದರೆ ಹೇಳಿ.
*ದಟ್ಸ್ಕನ್ನಡ ಬ್ಯೂರೋ
‘ಕತ್ತೆಗಳು ಸಾರ್ ಕತ್ತೆಗಳು’ ಮತ್ತು ‘ಕುಶಲವೇ ಕ್ಷೇಮವೇ’ ಚಿತ್ರಗಳು ತಾಚೊಂಡಿರುವ ಕಾರಣ ಸ್ಫುರದ್ರೂಪಿ ನಟ ರಮೇಶ್ ಹೊಸ ಹಾದಿ ಹಿಡಿಯುವ ಮನಸ್ಸು ಮಾಡಿದ್ದಾರೆ. ಯಾವುದೇ ನಟನಾಗಲೀ, ಚಿತ್ರ ನಿರ್ದೇಶಿಸಲು ಸೈ ಎನ್ನುತ್ತಿದ್ದಾರೆ.
ರಮೇಶ್ ಆಪ್ತರು ನೀವೇ ಯಾಕೆ ಚಿತ್ರ ನಿರ್ದೇಶಿಸಬಾರದು ಅಂತ ಒತ್ತಾಯ ಹೇರಿದ್ದರ ಫಲವಿದು. ಈ ಒತ್ತಾಯಕ್ಕೆ ಮಣಿದು ರಮೇಶ್ ಆತುರದ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಿಲ್ಲ. ನಿರ್ದೇಶಿಸಿದರೆ ತೀರಾ ವಿಭಿನ್ನವಾದ ಕತೆ ಇರುವ ಚಿತ್ರವನ್ನು ಮಾತ್ರ ಎನ್ನುವುದು ಅವರ ಸಂಕಲ್ಪ. ಅದಕ್ಕಾಗಿ ಅವರು ಕತೆಯ ಹುಡುಕಾಟ ಕೂಡ ನಡೆಸಿದ್ದಾರೆ. ಎಕ್ಸ್ಟ್ರಾರ್ಡಿನರಿ ಕತೆ ಸಿಕ್ಕರೆ, ಹಿಂದೂಮುಂದೂ ನೋಡದೆ ನಿರ್ದೇಶಿಸಲು ರೆಡಿ ಎಂದು ನಗುವ ರಮೇಶ್, ಆದರೂ ನಟನೆಯೇ ನನ್ನ ಪ್ರೀತಿಯ ಕೆಲಸ ಅಂತ ತಲೆ ನೇವರಿಸಿಕೊಳ್ಳುತ್ತಾ ನಗುತ್ತಾರೆ.
ಈಗಾಗಲೇ ಚಿತ್ರ ವಿತರಣೆಯ ಕೆಲಸಕ್ಕೆ ಕೈ ಹಾಕಿರುವ ರಮೇಶ್, ‘ಓಳು ಸಾರ್ ಓಳು’ ವಿತರಣೆಯಲ್ಲಿ ಮಾಡಿದ ಲಾಭ ‘ಕುಶಲವೇ ಕ್ಷೇಮವೇ’ದಲ್ಲಿ ಆದ ನಷ್ಟದ ಕಾರಣ ಕೈಗೆ ಹತ್ತಲಿಲ್ಲ. ಸುಮ್ಮನೆ ಕೂರದೆ ಏನಾದರೂ ಡಿಫರೆಂಟಾಗಿ ಮಾಡ್ತಿರಬೇಕು ಅನ್ನುವ ಫಿಲಾಸಫಿಯ ರಮೇಶ್ಗೆ ನಿರ್ದೇಶಕನಾಗಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವಿದೆ. ಚೆಂದದ ಕತೆ ಇರುವವರು ಟ್ರೆೃ ಮಾಡಬಹುದು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











