ಕೊಬ್ರಿ ಮಂಜು ಇಲೆಕ್ಷನ್ಗೆ ನಿಲ್ತಾರಂತೆ
*ದಟ್ಸ್ಕನ್ನಡ ಬ್ಯೂರೋ
ನವರಸ ನಾಯಕ ಜಗ್ಗೇಶ್ ಹಾಗೂ ನಿರ್ಮಾಪಕ ಕೊಬ್ರಿ ಮಂಜು ಅಂಗಿಯ ತೋಳು ಮಡಿಸುತ್ತಿದ್ದಾರೆ- ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಇವರಿಬ್ಬರೂ ಅಖಾಡಕ್ಕೆ ಇಳಿಯುವರೇ?
ವಿಷ್ಣುವರ್ಧನ್ ಲೇಟೆಸ್ಟ್ ಚಿತ್ರ ಹೃದಯವಂತದ ಚಿತ್ರೀರಣ ಪೂರ್ತಿಯಾಗಿರುವ ಸಂತೋಷ ಹಂಚಿಕೊಳ್ಳಲು ಇತ್ತೀಚೆಗೆ ಕೊಬ್ರಿ ಮಂಜು ಆಯೋಜಿಸಿದ್ದ ಕೂಟದಲ್ಲಿ ರಾಜಕೀಯದ ವಾಸನೆ ಬಡಿಯಿತು. ಜಗ್ಗಿಯಂತೆ ಮಂಜು ಕೂಡ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನವರು. ಮಂಜು ಜನತಾ ದಳ ಪಕ್ಷದಿಂದ ಟಿಕೇಟು ಪಡೆಯುವ ಆಸೆ ಹೊಂದಿದ್ದಾರೆ. ಜಗ್ಗಿ ಯಾವತ್ತಿದ್ದರೂ ಹಸ್ತದ ಗುರುತಿನ ಪಾರ್ಟಿ.
ಒಂದು ವೇಳೆ ಜಗ್ಗೇಶ್ ತುರುವೇಕೆರೆ ಕ್ಷೇತ್ರದಿಂದ ಅಸೆಂಬ್ಲಿ ಚುನಾವಣೆಗೆ ನಿಂತರೂ ನಾನು ಹಿಂದೇಟು ಹಾಕುವುದಿಲ್ಲ. ಬುದ್ಧಿಜೀವಿಗಳಿದ್ದುಕೊಂಡೂ ತುರುವೇಕೆರೆಯ ಉದ್ಧಾರ ಇನ್ನೂ ಆಗಿಲ್ಲ. ಅದನ್ನು ಮಾಡುವುದು ನನ್ನ ಸಂಕಲ್ಪ. ಒಂದು ವೇಳೆ ಚುನಾವಣೆ ದಿನಾಂಕ ತೀರಾ ಮುಂಚೆಯೇ ಪ್ರಕಟವಾದರೆ, ಚಿತ್ರಲೋಕಕ್ಕೆ ಅಲ್ಪ ವಿರಾಮ ಹಾಕುವೆ ಅಂತ ಮನಸ್ಸಿನ ತುಂಬಾ ಚುನಾವಣೆಯನ್ನೇ ತುಂಬಿಕೊಂಡಿರುವ ಮಂಜು ಮಿನಿ ರಾಜಕೀಯ ಭಾಷಣವನ್ನೇ ಹೊಡೆದುಬಿಟ್ಟರು.
ಅಂದಹಾಗೆ, ಮಂಜು ‘ಟೋ ಮಂಜು’ ಎಂಬ ಚಿತ್ರದ ಮೂಲಕ ನಾಯಕರಾಗುವ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಚುನಾವಣೆ ದಿನಾಂಕ ಪ್ರಕಟವಾಗುವ ಹೊತ್ತಿಗೆ ಈ ಚಿತ್ರ ಮುಗಿಸುವುದು ಅವರ ಹರೀಬರಿ. ಒಂದು ವೇಳೆ ಆಗದಿದ್ದರೂ ಚಿಂತಿಲ್ಲ. ಮೊದಲು ಇಲೆಕ್ಷನ್ನು, ಆಮೇಲೆ ಸಿನಿಮಾ ಟೆನ್ಷನ್ನು ಅಂತಾರೆ ಮಂಜು.
ಚುನಾವಣೆ ಬಗ್ಗೆ ಜಗ್ಗಿಯ ರೀಯಾಕ್ಷನ್ ಕೇಳೋಕೆ ನಡೆಸಿದ ಯತ್ನ ವಿಫಲವಾಯಿತು. ಅವರ ಮೊಬೈಲು ಸ್ವಿಚ್ ಆಫ್ ಆಗಿತ್ತು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications