ರಾಧಿಕಾ ಅನಾಥರಿಂದ ಅನಾಥಾಶ್ರಮಕ್ಕೆ..!
ಅಂದ ಹಾಗೆ ನಿನಗಾಗಿ ಚಿತ್ರದಿಂದ ನಮಗೆಲ್ಲರಿಗೂ ಪರಿಚಿತಳಾದ ರಾಧಿಕಾ, ಈಗ ನಮಗಾಗಿ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರ ನಿರ್ಮಾಪಕರ ಸಂಘದಲ್ಲಿ ತಮ್ಮ ಹೆಸರೂ ನೋಂದಾಯಿಸಿದ್ದಾರೆ. ಹೊಸ ಚಿತ್ರಕ್ಕೆ ಎಂ.ಡಿ.ಶ್ರೀಧರ್ ನಿರ್ದೇಶಕರಂತೆ, ಮುಂಗಾರುಮಳೆ ಗಣೇಶ ನಾಯಕನಂತೆ, ನಾಯಕಿ ಮಾತ್ರ ರಾಧಿಕಾ. ಇದನ್ನು ಖುದ್ದು ರಾಧಿಕಾನೇ ಹೇಳಿದ್ದು ಆದರೆ, ಗಣೇಶನ ಕಾಲ್ ಶೀಟ್ ಪಡೆಯಲು ವಿಘ್ನ ಎದುರಾಗಿದೆ. ಸ್ವಲ್ಪ ಸಮಯ ಕಾಯುವುದು, ಗಣೇಶೋತ್ಸವಕ್ಕೆ ಮುನ್ನ ಕಾಮಿಡಿ ಟೈಮ್ ಗಣೇಶನ ದರ್ಶನ ಆಗದೇ ಇದ್ದರೆ ನೆಕ್ಸ್ಟ್ ಚಾನ್ಸ್ ದರ್ಶನ್ಗಂತೆ!
ಆದಿತ್ಯ ನಾಯಕನಾಗಿರುವ ಈಶ್ವರ್ ಚಿತ್ರ , ಕುಂದಾಪುರ ಮೂಲದ ಹೀರೊ ಉಪೇಂದ್ರ ಮತ್ತು ದರ್ಶನ್ ನಟಿಸುತ್ತಿರುವ ಅನಾಥರು ರಾಧಿಕಾ ಅಭಿನಯದ ಸದ್ಯದ ಚಿತ್ರಗಳು. ಉಪೇಂದ್ರನ ಹುಟ್ಟು ಹಬ್ಬದ ದಿನ ಅನಾಥರು ತೆರೆ ಕಾಣಲಿದೆಯಂತೆ. ಈ ಅನಾಥರನ್ನು ಪ್ರೇಕ್ಷಕರು ನೂರು ದಿನವಾದರೂ ಸಾಕಬೇಕು ಎಂಬುದು ಅವರ ನಿರೀಕ್ಷೆ. ಯಾಕೆಂದರೆ ಅದೆಷ್ಟೋ ಕೋಟಿ ಸುರಿದು, ಚಿತ್ರದ ವಿತರಣೆ ಹಕ್ಕುಗಳನ್ನು ಅವರು ಖರೀದಿಸಿದ್ದಾರಂತೆ.
ರಾಧಿಕಾ ಮುಂದಿನ ಚಿತ್ರ ಅನಾಥಾಶ್ರಮ. ಕ್ಷಮಿಸಿ, ಚಿತ್ರವಲ್ಲ ಇದು ಅವರ ಕನಸು. ಇತ್ತೀಚಿನ ಸ್ಟಾರ್ ಗಳ ಟ್ರೆಂಡ್ನಂತೆ ಇವರೂ ಕೂಡಾ ಸಮಾಜ ಸೇವೆ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ. ತಬ್ಬಲಿ ಮಕ್ಕಳಿಗೆ ಅನಾಥಾಶ್ರಮ ನಿರ್ಮಾಣ ಮಾಡುವ ಫ್ಲಾನ್ ಇನ್ನೂ ಅಂತಿಮ ಗೊಂಡಿಲ್ಲ. ಆದರೆ ಮಾಡುವುದು ಖಂಡಿತ ಎಂದು ಘೋಷಿಸಿದ್ದಾರೆ.
ಮಂಗಳೂರಿನ ಬಗ್ಗೆ ನನಗೆ ತುಂಬಾ ಅಭಿಮಾನ ಎಂದರು ರಾಧಿಕಾ... ಇದು ನಿಜ, ಏಕೆಂದರೆ ಮೊನ್ನೆ ಇವರ ಮನೆ ಸಮೀಪದ ಪಾಣೆಮಂಗಳೂರಿನ ವ್ಯಾಯಾಮ ಶಾಲೆಯ ಎಲ್ಲ ಪೈಲ್ವಾನರಿಗೆ ಒಂದೊಂದು ವಾಚ್ ಕೊಡುಗೆಯಾಗಿ ನೀಡಿದ್ದಾರೆ. ಮಸಲ್ಸ್ ಮ್ಯಾನ್ಗಳ ದಪ್ಪದ ಕೈಗೆ ಈ ಕೈಗಡಿಯಾರ ಸಣ್ಣವಾದರೂ ದೊಡ್ಡ ಮನಸ್ಸಿನ ರಾಧಿಕಾ ಬಗ್ಗೆ ಅವರು ಕೊಂಡಾಡಿದ್ದಾರೆ. ಇಂಥ ಒಳ್ಳೆ ಗುಣಗಳೇ ಅಲ್ವೆ ರಾಧಿಕಾಳನ್ನು ದುಷ್ಟ ಶಕ್ತಿಯಿಂದ ರಕ್ಷಿಸುತ್ತಾ ಇರೋದು.


Click it and Unblock the Notifications