ನೆನಪಿರಲಿ ಪ್ರೇಮ್ ಗೆ ಬ್ರೇಕ್ ನೀಡುವನೇ ಈ ಗುಣವಂತ?
'ಪಲ್ಲಕ್ಕಿ'ಯಲ್ಲಿ ಪ್ರೇಮ್ ಬಿಟ್ಟರೇ ಬೇರೇನೂ ಇರಲಿಲ್ಲ. ಹೀಗಾಗಿ 'ಪಲ್ಲಕ್ಕಿ' ಹೆಚ್ಚುಕಾಲ ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ. ನಿರೀಕ್ಷೆಯಷ್ಟು ಯಶಸ್ಸನ್ನು ತಂದುಕೊಡಲಿಲ್ಲ. ಇನ್ನೂ ಆಮೇಲೆ ಬಂದ 'ಸವಿಸವಿನೆನಪು'ಸುಂದರವಾದ ಕಲಾಕೃತಿಯಂತಿತ್ತು. ವಿಮರ್ಶಕರು ಪುಟಗಟ್ಟಲೇ ಹೊಗಳಿದರೂ, ಚಿತ್ರ ನೋಡಬಲ್ ಆಗಿದ್ದರೂ, ಚಿತ್ರಮಂದಿರಕ್ಕೆ ಕಚ್ಚಿಕೊಳ್ಳಲಿಲ್ಲ. ಹೀಗಾಗಿ 'ನೆನಪಿರಲಿ', 'ಜೊತೆಜೊತೆಯಲಿ'ನಂತರ ಪ್ರೇಮ್ ಕ್ರೇಜ್ ಸಾಸಿವೆ ಕಾಳಿನಷ್ಟು ಕಡಿಮೆಯಾಯಿತು .
ಈಗ ಹೊಸ ಭರವಸೆಯೊಂದಿಗೆ ಪ್ರೇಮ್ ಮತ್ತೆ ಬಂದಿದ್ದಾರೆ. ಅವರ ಅಭಿನಯದ 'ಗುಣವಂತ'ಶುಕ್ರವಾರ(ನ.30) ರಾಜ್ಯದೆಲ್ಲೆಡೆ ತೆರೆಕಂಡಿದೆ. ಈ 'ಗುಣವಂತ'ಪ್ರೇಮ್ ಗೆ ಬ್ರೇಕ್ ನೀಡುವನೇ ಎಂಬುದು ಸದ್ಯದ ಕುತೂಹಲ. ಮುನಿರಾಜು ಮಲ್ಲೇಶ್ ಪಾಳ್ಯ ಚಿತ್ರದ ನಿರ್ಮಾಪಕರು. ಪ್ರೇಮ್ ಅಲಿಯಾಸ್ ಪ್ರೇಂಕುಮಾರ್ ಗೆ ನಾಯಕಿಯಾಗಿ ರೇಖಾ ಕ್ಷಮಿಸಿ ಅಕ್ಷರ ಅಭಿನಯಿಸಿದ್ದಾರೆ. ಕತೆ, ಚಿತ್ರಕತೆ ಬರೆದು ಚಿತ್ರವನ್ನು ರಘುವರ್ಧನ್ ನಿರ್ದೇಶಿಸಿದ್ದಾರೆ.
ಚಿಕ್ಕಮಗಳೂರು, ಕಾಸರಗೋಡು ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಚಿತ್ರದಲ್ಲಿ ಫ್ರೆಶ್ ನೆಸ್ ಎದ್ದು ಕಾಣುತ್ತಿದೆ. ಚಿತ್ರದ ಪ್ರೆಶ್ ನೆಸ್ ಹೆಚ್ಚಳಕ್ಕೆ ಹಂಸಲೇಖ ಹಾಡು ಮತ್ತು ಅವರ ಸಂಗೀತ ಕಾರಣವಾಗಿದೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದಿದ್ದಾರೆ. ಅವಿನಾಶ್, ರಂಗಾಯಣ ರಘು, ಚಿತ್ರಾಶೆಣೈ, ಪದ್ಮಜಾರಾವ್, ರಮೇಶ್ ಭಟ್, ಶರಣ್ ತಾರಾಗಣದಲ್ಲಿದ್ದಾರೆ.
ರಾಜಧಾನಿ ನಗರಿಯ ಮೇನಕಾ, ನಳಂದಾ, ನಂದಿನಿ, ಸಿದ್ದಲಿಂಗೇಶ್ವರ, ವೆಂಕಟೇಶ್ವರ, ಆದರ್ಶ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ತುಮಕೂರಿನ ಕೃಷ್ಣ, ಕೋಲಾರದ ಪಲ್ಲವಿ, ಮೈಸೂರಿನ ಶಾಂತಲ, ಹಾಸನದ ಭಾನು, ಮಂಡ್ಯದ ಸಿದ್ದಾರ್ಥ, ಚಿತ್ರದುರ್ಗದ ವೆಂಕಟೇಶ್ವರ, ಗುಲ್ಪರ್ಗದ ತ್ರಿವೇಣಿ, ಹುಬ್ಬಳ್ಳಿಯ ಶ್ರೀ ಪದ್ಮ ಚಿತ್ರಮಂದಿರಗಳಲ್ಲೂ ಇಂದು ಚಿತ್ರ ತೆರೆಕಂಡಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications