ಆಕೆಯೀಗ ಪಕ್ಕಾ ರಾಜಕಾರಣಿ. ಆಂಧ್ರವೇ ಉಸಿರು !
ಣ್ಣಾವ್ರ ಅಪಹರಣವಾದಾಗ ವೀರಪ್ಪನ್ ಬಳಿಗೆ ತಾನೇ ಹೋಗಿ, ಅವರನ್ನು ಬಿಟ್ಟುಬಿಡು ಎಂದು ಕೇಳಿಕೊಳ್ಳುವುದಾಗಿ ಗಾಳಿಪಟ ಹಾರಿಸಿದ್ದ ಜಯಪ್ರದ ಈಗ ಮತ್ತೆ ಕರ್ನಾಟಕದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈಗವರು ಅಕ್ಷರಶಃ ರಾಜಕೀಯ ಮುಖಿ ಹಾಗೂ ಸಮಾಜ ಮುಖಿ !
'ರೇಣುಕಾ ಮಹಾತ್ಮೆ" ಎಂಬ ಕನ್ನಡ ಸಿನಿಮಾ ಚಿತ್ರೀಕರಣಕ್ಕಾಗಿ ಧಾರಾನಗರಿಯಲ್ಲಿದ್ದ ಜಯಪ್ರದ ಮಾತು ಅಪ್ಪಟ ತೆಲುಗು ದೇಶಂ ಪಕ್ಷದ ಕಟ್ಟಾಳು ಎಂಬುದಕ್ಕೆ ಕನ್ನಡಿ ಹಿಡಿಯಿತು. ರಾಜ್ಯಸಭಾ ಸದಸ್ಯೆಯಾಗಿರುವ ಜಯಪ್ರದಾಗೆ ರಾಜಮುಂಡ್ರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೂ ನಿಲ್ಲುವಾಸೆ. ಈ ಆಸೆಯನ್ನು ಅವರು ಶೂಟಿಂಗ್ ಲೊಕೇಷನ್ನಲ್ಲಿ ರಿಹರ್ಸಲ್ಲೇ ಇಲ್ಲದೆ ಆರಾಮಾಗಿ ಹೇಳಿಬಿಟ್ಟರು.
ಆಮೇಲೆ ಜಯಪ್ರದ ಮಾತು ಶಿಫ್ಟಾದದ್ದು ಅತ್ಯಾಚಾರಿಗಳತ್ತ. ಅತ್ಯಾಚಾರಿಗಳಿಗೆ ಕಠಿಣಾತಿ ಕಠಿಣ ಸಜೆ ಕೊಡಬೇಕೆಂಬ ಅಡ್ವಾಣಿ ಹಾಗೂ ಫರ್ನಾಂಡಿಸ್ ನಿಲುವನ್ನು ನಗುನಗುತ್ತಾ ಸಮರ್ಥಿಸಿದ ಜಯಪ್ರದ, ಇದೇ ವಿಷಯವಾಗಿ ಮಾತನ್ನು ಕೊಂಚ ಮುಂದುವರೆಸಿದರು. ಅದು ಮಹಿಳಾ ವಾದವಾಗಿ ಗರಿಗೆದರಿದ್ದು ಹೀಗೆ..
'ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಮಗಳ ಮನಸ್ಸು ಶೂನ್ಯ ಸ್ಥಿತಿಯಲ್ಲಿರುತ್ತೆ. ಇಂಥಾ ಅಯೋಮಯ ಪರಿಸ್ಥಿತಿಯಲ್ಲಿ , ಅದೂ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಮೇಲಾದ ಅತ್ಯಾಚಾರಕ್ಕೆ ಪುರಾವೆ ಎಲ್ಲಿಂದ ತಂದಾಳು? ಹೆಣ್ಣಿಗೂ ಸಮಾನತೆ ಅನ್ನೋದು ಬರೀ ಪುಸ್ತಕದ ಬದನೆಕಾಯಿ. ದೌರ್ಜನ್ಯದ ವಿರುದ್ಧ ದನಿಯೆತ್ತುವ ಹೆಂಗಸರ ಸದ್ದಡಗಿಸುವ ಹುನ್ನಾರ ನಡೆಯುತ್ತಲೇ ಇರುತ್ತದೆ. ಅತ್ಯಾಚಾರಕ್ಕೆ ಒಳಗಾಗುವುದೇ ದೊಡ್ಡ ದುರಂತ. ಅಂಥಾ ಹೆಣ್ಣು ಮಕ್ಕಳನ್ನು ಬದುಕಲು ಬಿಡಿ. ಅಮ್ಮ ಅಥವಾ ಅತ್ತೆಯೇ ಅವಳನ್ನು ಮನೆಯಿಂದ ಹೊರಹಾಕುತ್ತಿದ್ದಾರೆ. ಇದು ಸಲ್ಲದು".
ಈಗ ಜಯಪ್ರದಾರ ಸಮಾಜ ಮುಖದ ಸಮಾಚಾರ...
ಸದ್ಯದಲ್ಲೇ ಜಯಪ್ರದಾ ಸೇವಾ ದತ್ತಿ ಹೈದರಾಬಾದಿನಲ್ಲಿ ಸ್ಥಾಪಿತವಾಗಲಿದೆ. ಆರೋಗ್ಯ ರಕ್ಷಣೆ, ಸ್ವ- ಉದ್ಯೋಗ ಒದಗಿಸುವಿಕೆ ಮತ್ತು ಮಹಿಳಾ ಶಿಕ್ಷಣ ಈ ದತ್ತಿಯ ಉಮೇದಿ. ಸದ್ಯಕ್ಕೆ ಏನೇ ಕೆಲಸ ಮಾಡುತ್ತಿದ್ದರೂ ಜಯಪ್ರದಾ ಕಣ್ಣತುಂಬಾ ಇದೇ ಕನಸು. ಇಷ್ಟಾಗಿ 'ರೇಣುಕಾ ಮಹಾತ್ಮೆ"ಯ ಬಗ್ಗೆ ಹೇಳುವಷ್ಟು ವ್ಯವಧಾನ ಜಯಪ್ರದಾರಲ್ಲಿ ಇರಲಿಲ್ಲ. ಅವರು ಬಣ್ಣ ಹಚ್ಚಲು ಮುಂದಾದರು.


Click it and Unblock the Notifications