ವಿದ್ಯಾಭೂಷಣರವರ ಪತ್ನಿ ರಮಾ ಚಿತ್ರರಂಗಕ್ಕೆ ಪಾದಾರ್ಪಣೆ
ಅಂದು ಸ್ವಾಮೀಜಿಯಾಗಿದ್ದ ಶ್ರೀ ವಿದ್ಯಾಭೂಷಣರನ್ನು ಸಂಸಾರನೌಕೆಯತ್ತ ಸೆಳೆದ ರಮಾರವರು , ಇಂದು ಕನ್ನಡ ಚಿತ್ರವೊಂದರಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಹೊಸ ಹಾದಿಗೆ ನಾಂದಿ ಹಾಡಿದ್ದಾರೆ.
ನಿರ್ದೇಶಕ ಕೃಷ್ಣನಾಡಿಗ ಅವರ 'ಕರೆಯೇ ಕೋಗಿಲೆ ಮಾಧವನಾ' ಚಿತ್ರಕ್ಕೆ ಸಹಿ ಹಾಕುವ ಮೂಲಕ ರಮಾರವರು , ಮಾಧ್ವ ಸಂಪ್ರದಾಯದ ಕಟ್ಟುನಿಟ್ಟನ್ನು ಬದಿಗೊತ್ತಿ ಆಧುನಿಕತೆ ಸಂಪ್ರದಾಯಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಪ್ರಥಮ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿರುವ 'ಕಕೋಮಾ' ಚಿತ್ರತಂಡ, ರಮಾ ಅವರ ಅಭಿನಯದ ಬಗ್ಗೆ ಮೆಚ್ಚುಗೆ ಸೂಚಿಸಿದೆ.
ವಿದ್ಯಾಭೂಷಣರ ಬಣ್ಣದ ಬದುಕು:
ಪತ್ನಿ ರಮಾ ಹಾಗೂ ಎರಡು ಮಕ್ಕಳೊಂದಿಗೆ ಸುಂದರ ಸಂಸಾರ ಸಾಗಿಸುತ್ತಿರುವ ವಿದ್ಯಾಭೂಷಣರು, ಮಾಧ್ವ ಸಂಸ್ಕೃತಿಯ ಪ್ರಚಾರಕ್ಕಾಗಿ ಅನೇಕ ಸಿಡಿ ಹಾಗೂ ಆಡಿಯೋ ಕ್ಯಾಸೆಟ್ ಗಳನ್ನು ಹೊರತಂದಿದ್ದಾರೆ. ಈ ಮುಂಚೆ ಕೆ.ಎಸ್. ಎಲ್ ಸ್ವಾಮಿ (ರವೀ) ಅವರ ಟೆಲಿ ಧಾರವಾಹಿ ಸೃಷ್ಠಿ ಗೆ ಸಂಗೀತ ಒದಗಿಸಿ, ಸುಶ್ರಾವ್ಯವಾಗಿ ಹಾಡಿದ್ದು ಬಿಟ್ಟರೆ, ಕಿರುತೆರೆ, ಹಿರಿತೆರೆಗಳ ಒಡನಾಟ ಅಷ್ಟಾಗಿ ಅಂಟಿರಲಿಲ್ಲ.. ರಮಾ ವಿದ್ಯಾಭೂಷಣರವರು ಕೌಟುಂಬಿಕ ಮಹತ್ವವನ್ನು ಸಾರುವ ಕಥೆಯಾದ್ದರಿಂದ ನಾನು ನಟಿಸಲು ಒಪ್ಪಿಕೊಂಡೆ. ನಿರ್ದೇಶಕರ ಅಗತ್ಯಕ್ಕೆ ತಕ್ಕಂತೆ ಅಭಿನಯಿಸುವುದಷ್ಟೇ ನನ್ನ ಕೆಲಸ ಎಂದು ಹೇಳಿದರು.
ಕಾದಂಬರಿ ಆಧಾರಿತ ಚಿತ್ರ:
ಸ್ನೇಹಾ ಕ್ರಿಯೇಷನ್ಸ್ ಲಾಂಛನದಲ್ಲಿ ಗಾಳಿಪಟ ಖ್ಯಾತಿಯ ದಿಗಂತ್, ಶೀತಲ್ , ಅವಿನಾಶ್, ರಾಮಕೃಷ್ಣ, ಪದ್ಮಾ ವಾಸಂತಿ ಮುಂತಾದವರ ಅಭಿನಯವಿರುವ 'ಕಕೋಮಾ' ಚಿತ್ರಕ್ಕೆ ಚಿತ್ರ ಕಥೆ , ಸಂಭಾಷಣೆಯನ್ನು ರಚಿಸಿ , ನಿರ್ದೇಶನದ ಹೊಣೆಯನ್ನು ಕೃಷ್ಣ ನಾಡಿಗರು ಹೊತ್ತಿದ್ದಾರೆ. ಉಷನವರತ್ನರಾಂ ರವರ 'ಹೊಸರಾಗ' ಕಾದಂಬರಿ ಆಧಾರಿಸಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ ಎಂದು ನಿರ್ದೇಶಕರು ಹೇಳಿದರು. ಕೊಳಲು ಮಾಂತ್ರಿಕ ಪ್ರವೀಣ್ ಗೊಡ್ಖಿಂಡಿ ಸಂಗೀತವಿರುವ ಈ ಚಿತ್ರದಲ್ಲಿ ವಿದ್ಯಾಭೂಷಣರು ಹಾಡುವರೇ ಇಲ್ಲವೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ತಮ್ಮ ಪತ್ನಿಯ ಅಭಿನಯದಿಂದ ಸಂತುಷ್ಟರಾದಂತೆ ವಿದ್ಯಾಭೂಷಣರು ಕಂಡು ಬಂದರು.


Click it and Unblock the Notifications