ಕನ್ನಡ ಚಿತ್ರರಂಗದ ವರ್ಷದ ನಟ ಯಾರು?

ಕೊನೆಯ ಪಕ್ಷ, ಕಳೆಕ ವರ್ಷ ಇಂಥವರೇ ಹೀರೋ, ಇಂಥವರೇ ವರ್ಷ ನಾಯಕಿ ಎಂದು ಸ್ಪಷ್ಟವಾಗಿ ಹೇಳಬಹುದಾಗಿತ್ತು. ಆದರೆ ಈ ವರ್ಷ ಅದು ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಿದೆ. ಶಿವರಾಜ್ ಕುಮಾರ್ ಅಭಿನಯದ ನಾಲ್ಕೂ ಚಿತ್ರಗಳೂ ಸೋತಿವೆ. ದರ್ಶನ್ ಅಭಿನಯದ ನಾಲ್ಕು ಚಿತ್ರಗಳಲ್ಲಿ 'ಗಜ' ಸೂಪರ್ ಹಿಟ್ ಆದರೆ, 'ಇಂದ್ರ', ಹಾಗೂ 'ಅರ್ಜುನ್' ಮಕಾಡೆ ಮಲಗಿದವು. 'ನವಗ್ರಹ' ಹೆಸರು ತಂದುಕೊಡುವುದರ ಜೊತೆಗೆ ಒಂದಿಷ್ಟು ಯಶಸ್ಸನ್ನು ತಂದುಕೊಟ್ಟಿದ್ದರಿಂದ ಅವರು ಬಚಾವಾಗಿದ್ದಾರೆ ಎನ್ನಬಹುದು.
ಗಣೇಶ್ ಹಾಗೂ ಸುದೀಪ್ ತಲಾ ಎರೆಡೆರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ ಗಣೇಶನದು ಒಂದು ಹಿಟ್, ಇನ್ನೊಂದು ಸುಮಾರು. ಸುದೀಪನದೂ ಅದೇ ಕತೆ, ಪುನೀತ್ ಹಾಗೂ ವಿಜಯ್ ತಲಾ ಎರಡೆರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ಓಕೆ, ಇನ್ನೊಂದು ಢಮಾರು. ಪ್ರಜ್ವಲ್ ದೇವರಾಜ್ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡರು. ಎರಡೂ ಸೋತಿವೆ.
ಕಳೆದ ವರ್ಷ ಬಿಡುಗಡೆಯಾದ ಅಷ್ಟೂ ಚಿತ್ರಗಳು ಸೋಲುವ ಮೂಲಕ ಕಂಗೆಟ್ಟಿದ್ದ ಸೂಪರ್ ಸ್ಟಾರ್ ಉಪೇಂದ್ರ, ಈ ವರ್ಷ ಅವರಿಗೆ ತುಸು ನೆಮ್ಮದಿಯ ವರ್ಷವೇ ಆಗಿದೆ. ಈ ವರ್ಷ ಅವರ ನಾಯಕತ್ವದ 'ಬುದ್ಧವಂತ' ಒಂದೇ ಚಿತ್ರ ಬಿಡುಗಡೆಯಾದರೂ ಹಿಟ್ ಆಗಿದೆ. ಅವರನ್ನು ಹೀರೋ ಎಂದು ಕರೆದರೆ ಅವರಿಗೇ ಅವಮಾನ. ಕಾರಣ ಅವರ ಸಾಮರ್ಥ್ಯಕ್ಕೆ ಬುದ್ಧವಂತ ಏನೇನೂ ಅಲ್ಲ. ಇದು ತಾಜ್ ಮಹಲ್ ನಾಯಕ ಅಜಯ್ ರಾವ್ ಕೂಡ ಇದೇ ಸಾಲಲ್ಲಿ ಬಂದು ನಿಲ್ಲುತ್ತಾರೆ.
ಇನ್ನು ವಿಜಯ್ ರಾಘವೇಂದ್ರ, ಶ್ರೀಮುರಳಿ, ನಾಗಕಿರಣ್, ದಿಗಂತ್, ಸೂರಜ್, ದೀಪಕ್, ಧ್ಯಾನ್, ಪ್ರೇಮ್, ಅಕುಲ್, ಬಾಲಾಜಿ, ತರುಣ್, ಮಿಥುನ್ ತೇಜಸ್ವಿ ಸೇರಿ ಅನೇಕರು ಹೇಳಹೆಸರಿಲ್ಲದಂತಾದರು. ರವಿಚಂದ್ರನ್, ಜಗ್ಗೇಶ್, ಹಾಗೂ ರಮೇಶ್ ಅವರ ನಸೀಬು ಖರಾಬಾಗಿದೆ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಒಂದೂ ಚಿತ್ರಗಳು ಈ ವರ್ಷ ಬಿಡುಗಡೆಯಾಗಿಲ್ಲ ಎನ್ನುವುದು ಈ ವರ್ಷದ ಸಮಾಧಾನಗ ಸಂಗತಿ.
(ದಟ್ಸ್ ಕನ್ನಡ ಸಿನಿ ವಾರ್ತೆ)
2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ


Click it and Unblock the Notifications











