ಮುಂಗಾರು ಮಳೆ(ಭಾಗ-2) : ಸಂಜನಾ ಬದಲಿಗೆ ರಮ್ಯಾ!
ಗಾಳಿಮಾತು, ಬೀದಿ ಮಾತು, ಮನಸ್ಸಿನ ಮಾತು ಮೇಳೈಸಿ ಅಂತಿಮವಾಗಿ ‘ಮುಂಗಾರು ಮಳೆ(ಭಾಗ-2)’ ಸುರಿಸಲು ಸಿದ್ಧತೆಗಳು ನಡೆದಿವೆ!
ಹೊಸಬರ ಬೆಳೆಸುವ ಜವಾಬ್ದಾರಿ ಹೊತ್ತಿರುವ ನಿರ್ಮಾಪಕ ಕೃಷ್ಣಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ಮುಂಗಾರು ಮಳೆ ನಿರ್ದೇಶಿಸಿದ್ದ ಯೋಗರಾಜ್ ಭಟ್, ಚಿತ್ರದ ನಿರ್ಮಾಪಕರು. ಚಿತ್ರದ ಟೈಟಲ್ಗೆ ಈಗಾಗಲೇ ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೈಟಲ್ ಸಿಗದೇ ಹೋದರೆ, ‘ಪ್ರೀತಂ ಪ್ರೇಮ್ ಕಹಾನಿ’ ಹೆಸರಲ್ಲಿ ಚಿತ್ರ ಸೆಟ್ಟೇರಲಿದೆ.
‘ಮುಂಗಾರು ಮಳೆ’ ಚಿತ್ರದಲ್ಲಿ ನಾಯಕನ ಹೆಸರು ಪ್ರೀತಂ ಹೀಗಾಗಿ, ಚಿತ್ರಕ್ಕೆ ಲಿಂಕ್ ಸಿಗಲಿದೆ ಎನ್ನುವ ಲೆಕ್ಕಾಚಾರ ಚಿತ್ರತಂಡದ್ದು. ‘ಮುಂಗಾರು ಮಳೆ’ ಚಿತ್ರಕ್ಕೆ ಕತೆ ಬರೆದಿದ್ದ ಪ್ರೀತಂ, ಮುಂಗಾರು ಮಳೆ ಎರಡನೇ ಭಾಗದ ನಿರ್ದೇಶಕರು. ಅವರು ಈಗಾಗಲೇ ಚಿತ್ರಕತೆ ಬರೆಯಲು ಕೂತುಬಿಟ್ಟಿದ್ದಾರೆ.
ಚಿತ್ರದ ನಾಯಕ ಎಂದಿನಂತೆ ಗಣೇಶ್. ಆದರೆ ನಾಯಕಿ ಪಾತ್ರಕ್ಕೆ ಸಂಜನಾ ಬದಲಿಗೆ ರಮ್ಯಾ ಬಂದಿದ್ದಾರೆ! ‘ಮುಂಗಾರುಮಳೆ’ ತಂತ್ರಜ್ಞರ ತಂಡವೇ ಎರಡನೇ ಭಾಗದಲ್ಲೂ ಇರಲಿದೆ. ಜುಲೈನಲ್ಲಿ ಚಿತ್ರ ಸೆಟ್ಟೇರಲಿದೆ.
ಹಣದ ಸುರಿಮಳೆ : ಈಗಾಗಲೇ ‘ ಮುಂಗಾರು ಮಳೆ’ 150 ದಿನ ಪೂರೈಸಿದೆ. 35ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.


Click it and Unblock the Notifications