ಮೂರು ಚಿತ್ರ ನೂರು ಕೋಟಿ ಮುಂಬೈ ಚರಂಡಿಪಾಲು
ನಟ ಇರಲಿ, ರಾಜಕಾರಣಿ ಇರಲಿ, ದೇವರೇ ಆಗಿರಲಿ ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ಅಮಾಯಕತೆಯೇ ಇರಲಿ, ಹುಂಬತನವೇ ಇರಲಿ ಅಪರಾಧ ಅಪರಾಧವೇ. ಭೂಗತ ಜಗತ್ತಿನೊಂದಿಗೆ ಎಂದೂ ಅಳಿಸಲಾರದ ಸಂಬಂಧ ಹೊಂದಿರುವ ಹಿಂದಿ ಚಿತ್ರರಂಗಕ್ಕೆ ಇದು ನ್ಯಾಯಾಲಯ ಕಲಿಸಿದ ತಕ್ಕ ಪಾಠ.
ಸಂಜಯ್ ದತ್ಗೆ ವಿಧಿಸಿದ ಶಿಕ್ಷೆ ನ್ಯಾಯಸಮ್ಮತವೆ?
ಹಿಂದಿ ಚಿತ್ರರಂಗ ಮತ್ತು ಸಂಜಯ್ ದತ್ ಅವರ ಕಟ್ಟಾ ಬೆಂಬಲಿಗರನ್ನು ಹೊರತಾಗಿ ಯಾರನ್ನೇ ಕೇಳಿದರೂ ಅದು ನ್ಯಾಯಸಮ್ಮತ ಎಂಬ ಧ್ವನಿ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಾರ್ಚ್ 12 1993ರಂದು ಸತ್ತ 257 ಜನರ ಕುಟುಂಬದ ಆಕ್ರಂದನ, ಗಾಯಗೊಂಡ ನೂರಾರು ಜನರ ರೋದನ, ಭಯೋತ್ಪಾದನೆಯಿಂದ ದೇಶಕ್ಕೆ ಒದಗಿದ್ದ ಅಭದ್ರತೆಯ ಒಂದು ಚಿತ್ರ ಕಣ್ಣ ಮುಂದೆ ಬಂದರೆ 100ಕ್ಕೂ ಹೆಚ್ಚು ಆರೋಪಿಗಳು ಯಾವುದೇ ಕ್ಷಮೆಗೆ ಅರ್ಹರಲ್ಲ ಎಂದು ನ್ಯಾಯಾಧೀಶ ಖೋಡೆ ಹೇಳಿದ ಮಾರ್ಮಿಕ ಮಾತು ಉತ್ಪ್ರೇಕ್ಷೆಯಲ್ಲ ಎಂಬುದು ಮನವರಿಕೆಯಾಗುತ್ತದೆ.
ನಟ ಇರಲಿ, ರಾಜಕಾರಣಿ ಇರಲಿ, ದೇವರೇ ಆಗಿರಲಿ ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ಅಮಾಯಕತೆಯೇ ಇರಲಿ, ಹುಂಬತನವೇ ಇರಲಿ ಅಪರಾಧ ಅಪರಾಧವೇ. ಭೂಗತ ಜಗತ್ತಿನೊಂದಿಗೆ ಎಂದೂ ಅಳಿಸಲಾರದ ಸಂಬಂಧ ಹೊಂದಿರುವ ಹಿಂದಿ ಚಿತ್ರರಂಗಕ್ಕೆ ಇದು ನ್ಯಾಯಾಲಯ ಕಲಿಸಿದ ತಕ್ಕ ಪಾಠ. ದಾವೂದ್ ಇಬ್ರಾಹಿಂ, ಅಬು ಸಲೇಂರೊಂದಿಗೆ ಹೊಂದಿದ್ದ ಸಖ್ಯದಿಂದಾಗಿ ತಕ್ಕ ಬೆಲೆ ತೆತ್ತಿದ್ದಾರೆ ಸಂಜಯ್.
ಈಗ ಆಕ್ರಂದಿಸುತ್ತಿರುವವರು ಸಂಜಯ್ ದತ್ ಮೇಲೆ 100 ಕೋಟಿ ಬಂಡವಾಳ ಹೂಡಿರುವ ನಿರ್ಮಾಪಕರು. ಇದರಲ್ಲಿ ಶೇ.50ರಷ್ಟು ಹಣ ಭೂಗತ ಜಗತ್ತಿಗೆ ಸೇರಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ.
ಮುನ್ನಾಭಾಯ್ ಸರಣಿಯ ಮೂರನೇ ಚಿತ್ರ ಮುನ್ನಾಭಾಯ್ ಚಲೆ ಅಮೆರಿಕಾ ಚಿತ್ರದ ನಿರ್ಮಾಣವನ್ನು ನಿರ್ಮಾಪಕ ವಿಧು ವಿನೋದ ಚೋಪ್ರಾ ಒಂದು ವರ್ಷದವರೆಗೆ ಮುಂದೂಡಿದ್ದಾರೆ.
ಧಮಾಲ್, ಮಿ.ಫ್ರಾಡ್, ಕಿಡ್ನಾಪ್, ಅಲಿಬಾಗ್ ಚಿತ್ರದ ನಿರ್ಮಾಪಕರು ಈಗಾಗಲೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಅಬ್ಬಾಸ್ ಮಸ್ತಾನ್ರ ಮಿ.ಫ್ರಾಡ್, ಸಂಜಯ್ ಗುಪ್ತಾರ ಅಲಿಬಾಗ್ ಮತ್ತು ಸಂಜಯ್ ಘಾಡ್ವಿ ಅವರ ಕಿಡ್ನಾಪ್ ಚಿತ್ರಗಳಲ್ಲಿ ಸಂಜಯ್ ಅಭಿನಯಿಸುತ್ತಿದ್ದರು. ಕಿಡ್ನಾಪ್ ಶೇ.50ರಷ್ಟು ಶೂಟಿಂಗ್ ಮುಗಿಸಿದೆ. ಈ ಮೂರು ಚಿತ್ರಗಳ ಮೇಲೆ 100 ಕೋಟಿ ಸುರಿಯಲಾಗಿದೆ. ಶಿಕ್ಷೆ ಪ್ರಕಟಣೆಯ ದಿನಾಂಕ ನಿಗದಿಪಡಿಸಿದ್ದರಿಂದ ಸುಮಾರು ಹದಿನೈದು ದಿನಗಳಿಂದ ಎಲ್ಲ ಶೂಟಿಂಗ್ಗಳನ್ನು ಸಂಜಯ್ ರದ್ದುಗೊಳಿಸಿದ್ದರು.
ಮುನ್ನಾಭಾಯ್ ಸರಣಿಯ ಸರ್ಕಿಟ್ ಅರ್ಶದ್ ವಾರ್ಸಿಯೊಂದಿಗೆ ನಟಿಸಿದ್ದ ಇಂದ್ರಕುಮಾರ್ರ ಧಮಾಲ್ ಚಿತ್ರೀಕರಣ ಹೆಚ್ಚೂಕಡಿಮೆ ಮುಗಿದಿದ್ದು ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆಗೆ ಕಾದಿತ್ತು. ಇನ್ನೊಂದು ಚಿತ್ರ ಏಳು ವರ್ಷಗಳಿಂದ ಡಬ್ಬಿಯಲ್ಲಿ ಕೂತಿದ್ದ ಮೆಹಬೂಬಾ ದೀಪಾವಳಿ ವೇಳೆಯಲ್ಲಿ ಬಿಡುಗಡೆಯಾಗಲಿತ್ತು. ಸದ್ಯಕ್ಕೆ ಇಡೀ ಹಿಂದಿ ಚಿತ್ರರಂಗಕ್ಕೆ ಕತ್ತಲು ಕವಿದಂತಾಗಿದೆ. ಈಗ ಶಿಕ್ಷೆ ಪ್ರಕಟಣೆಯಿಂದ ಚಿತ್ರದ ಮೇಲೆ ಯಾವ ಪರಿಣಾಮ ಬೀರಬಹುದೆಂದು ಚಿತ್ರಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಮುನ್ನಾಭಾಯ್ ಎಂಬಿಬಿಎಸ್ ಮತ್ತು ಲಗೇ ರಹೋ ಮುನ್ನಾಭಾಯ್ ಯಶಸ್ವಿಯಾಗಿದ್ದರೂ ಅವರ ಇತ್ತೀಚಿನ ಚಿತ್ರಗಳಾದ ಶೂಟೌಟ್ ಅಟ್ ಲೋಖಂಡವಾಲಾ, ಸರಹದ್ ಪಾರ್, ನೆಹಲೆ ಪೆ ದೆಹಲಾ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ್ದವು. ಚಿತ್ರ ಸೋತಿದ್ದರೂ ಸಂಜಯ್ ದತ್ ಬೇಡಿಕೆ ಕುಂದದಿರುವುದು ಅವರ ಮೇಲೆ ಚಿತ್ರನಿರ್ಮಾಪಕರು ಇಟ್ಟ ನಂಬಿಕೆಗೆ ಸಾಕ್ಷಿ.
ತನ್ನ ತಂದೆ ಸುನೀಲ್ ದತ್ ನೆನಪಿನಲ್ಲಿ ತಮ್ಮದೇ ಪ್ರೊಡಕ್ಷನ್ನಲ್ಲಿ ತಯಾರಿಸಬೇಕಾಗಿದ್ದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ ಬೀಹಾದ್ ನಿರ್ಮಾಣ ಸದ್ಯಕ್ಕೆ ನಿಂತಿದೆ. ಈಗಾಗಲೆ ಅಭಿನಯಿಸುತ್ತಿದ್ದ ಚಿತ್ರಗಳ ಚಿತ್ರೀಕರಣ ಮುಗಿದನಂತರ ಬೀಹಾದನ್ನು ನಿರ್ಮಿಸಬೇಕೆಂದು ಅವರು ನಿರ್ಧರಿಸಿದ್ದರು.


Click it and Unblock the Notifications