ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?
ಮುಂದಿನ ತಿಂಗಳು.. ಅಂದ್ರೆ, ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. 'ದಾಸ' ದರ್ಶನ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾ ಬಂದಿದ್ದಾರೆ.
''ಪಟಾಕಿ, ಕೇಕ್, ಹಾರ ತಂದು ಬರ್ತಡೇ ವಿಶ್ ಮಾಡುವ ಬದಲು, ಅದೇ ದುಡ್ಡಲ್ಲಿ ಧವಸ-ಧಾನ್ಯಗಳನ್ನು ತಂದರೆ, ಅದನ್ನೆಲ್ಲ ಅನಾಥಾಶ್ರಮಗಳಿಗೆ ತಲುಪಿಸುವೆ'' ಎಂದು ಕಳೆದ ವರ್ಷ ನಟ ದರ್ಶನ್ ಹೇಳಿದ್ದರು. ದರ್ಶನ್ ಮಾತಿಗೆ ಓಗೊಟ್ಟು, ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ನೀಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 42ನೇ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಸೆಲೆಬ್ರೇಟ್ ಮಾಡಿದ್ದರು.
ಈ ವರ್ಷವೂ ಗ್ರ್ಯಾಂಡ್ ಬರ್ತಡೇಗೆ ಬ್ರೇಕ್ ಹಾಕಿರುವ ನಟ ದರ್ಶನ್ ಅಭಿಮಾನಿಗಳಲ್ಲಿ ಪ್ರೀತಿಯಿಂದ ಒಂದು ಮನವಿ ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ,

ಕೇಕ್ ಮತ್ತು ಹಾರಗಳನ್ನು ತರಬೇಡಿ
''ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು'' ಎಂದು ಪ್ರೀತಿಯ ಅಭಿಮಾನಿಗಳಲ್ಲಿ ನಟ ದರ್ಶನ್ ಮನವಿ ಮಾಡಿದ್ದಾರೆ.

ಅನುಚಿತ ವರ್ತನೆ ನಡೆಯಬಾರದು.!
''ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು. ಇಂತಹ ಅನುಚಿತ ವರ್ತನೆ ನಡೆಯಬಾರದು'' ಎಂದು ಅಭಿಮಾನಿಗಳಿಗೆ ದರ್ಶನ್ ತಿಳಿಸಿದ್ದಾರೆ.

ದರ್ಶನ್ ಕೋರಿಕೆಯನ್ನ ನಡೆಸಿಕೊಡುವಿರಾ.?
''ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ'' ಎಂದು ಪತ್ರದ ಮೂಲಕ ನಟ ದರ್ಶನ್ ವಿನಂತಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳ ಅರ್ಥಪೂರ್ಣ ಸೆಲೆಬ್ರೇಷನ್
ದರ್ಶನ್ ಹುಟ್ಟುಹಬ್ಬದಂದು, ಚಾಲೆಂಜಿಂಗ್ ಸ್ಟಾರ್ ಹೆಸರಿನಲ್ಲಿ ಅಭಿಮಾನಿಗಳು ಕೂಡ ಒಂದೊಳ್ಳೆ ಕೆಲಸ ಮಾಡಲು ಸಜ್ಜಾಗಿದ್ದಾರೆ. ದೇವನಹಳ್ಳಿಯ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗು ಚೈತನ್ಯ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಹೀಗಾಗಿ, ವಿಜಯಪುರ ಸಂಘದ ವತಿಯಿಂದ ಚಕ್ರವರ್ತಿ ದರ್ಶನ್ ಅಭಿಮಾನಿಗಳ ಸಂಘ ಚೈತನ್ಯಗೆ ಹಣ ಸಹಾಯ ಮಾಡುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಲು ಮುಂದಾಗಿದ್ದಾರೆ.


Click it and Unblock the Notifications











