ಆತಂಕದಲ್ಲಿದ್ದ ಚಿತ್ರರಂಗಕ್ಕೆ ನಿರಾಳತೆ ತಂದ ಯಡಿಯೂರಪ್ಪ ಟ್ವೀಟ್
ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಬಿಬಿಎಂಪಿಯು ಸರ್ಕಾರಕ್ಕೆ ಕೆಲವು ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಚಿತ್ರಮಂದಿರಗಳಲ್ಲಿ ಶೇ 50% ಸೀಟು ಮಾತ್ರವೇ ಭರ್ತಿ ಮಾಡುವಂತೆ ಆದೇಶ ಹೊರಡಿಸಬೇಕೆಂಬ ಅಂಶವೂ ಪ್ರಸ್ತಾವನೆಯಲ್ಲಿ ಎಂಬ ಸುದ್ದಿ ಹರಿದಾಡಿ ಚಿತ್ರರಂಗದಲ್ಲಿ ಆತಂಕ ಎಬ್ಬಿಸಿತ್ತು.
ನಟ ಪುನೀತ್ ರಾಜ್ಕುಮಾರ್, ದುನಿಯಾ ವಿಜಯ್ ಸೇರಿದಂತೆ ಹಲವರು ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ಚಿತ್ರಮಂದಿರ ಪೂರ್ಣ ಭರ್ತಿ ಮಾಡುವ ಆದೇಶವನ್ನೇ ಮುಂದುವರೆಸಬೇಕು, 50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡುವ ಆದೇಶವನ್ನು ಸರ್ಕಾರ ಹೊರಡಿಸಬಾರದು' ಎಂದು ಒತ್ತಾಯಿಸಿದ್ದರು.
ಈ ವಿಷಯದ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, 'ರಾಜ್ಯದಲ್ಲಿ ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು, 'ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ' ಎಂದು ಮನವಿ ಮಾಡಿದ್ದಾರೆ ಯಡಿಯೂರಪ್ಪ.
ಫೆಬ್ರವರಿ ತಿಂಗಳಿನಿಂದ ರಾಜ್ಯದಲ್ಲಿ ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಧ್ರುವ ಸರ್ಜಾ ನಟನೆಯ 'ಪೊಗರು', ದರ್ಶನ್ ನಟನೆಯ 'ರಾಬರ್ಟ್' ಸೇರಿದಂತೆ ಕೆಲವು ಸಿನಿಮಾಗಳು ಬಿಡುಗಡೆ ಆಗಿ ಒಳ್ಳೆಯ ಕಲೆಕ್ಷನ್ ಸಹ ಮಾಡಿವೆ.
ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರಗಳು ತೆರೆದಿದ್ದರಿಂದ ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ಕುಮಾರ್, ದುನಿಯಾ ವಿಜಯ್ ಇನ್ನೂ ಹಲವಾರು ನಟರು ತಮ್ಮ-ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಸಜ್ಜಾಗಿ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದರು.
ಈ ನಡುವೆ ಇಂದು 50% ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂಬ ಸುದ್ದಿ ಹೊರಬಿದ್ದು ಚಿತ್ರರಂಗದಲ್ಲಿ ಆತಂಕ ಮನೆಮಾಡಿತ್ತು. ಆದರೆ ಈಗ ಸಿಎಂ ಯಡಿಯೂರಪ್ಪ ಅವರ ಟ್ವೀಟ್ನಿಂದ ನಿರಾಳವಾಗಿದ್ದಾರೆ.


Click it and Unblock the Notifications











