ಗಾಂಧಿನಗರಕ್ಕೆ ಬಂದ ಎಂಬಿಬಿಎಸ್ ಡಾಕ್ಟರ್ ಭಾರತಿ
ಕನ್ನಡ ಚಿತ್ರೋದ್ಯಮಕ್ಕೆ ಲೇಡಿ ಡಾಕ್ಟರ್ ಒಬ್ಬರ ಆಗಮನವಾಗಿದೆ. ಆದರೆ ಅವರು ಬಂದಿರುವುದು ರೋಗಿಗಳ ಎದೆ ಮೇಲೆ ಸ್ಟೆತಸ್ಕೋಪ್ ಇಡೋದಕ್ಕೂ ಅಲ್ಲ, ಇಂಜೆಕ್ಷನ್ ಚುಚ್ಚೋದಕ್ಕೂ ಅಲ್ಲ. ಚಿತ್ರರಸಿಕ ಹೃದಯಕ್ಕೆ ನೇರವಾಗಿ ಲಗ್ಗೆ ಹಾಕಲು ಬರುತ್ತಿದ್ದಾರೆ.
ಹೆಸರು ಡಾ.ಭಾರತಿ ವೀರಣ್ಣ. ಓದಿದ್ದು ಎಂಬಿಬಿಎಸ್, ಆದರೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಬಣ್ಣದ ಜಗತ್ತು. ಆದಿಚುಂಚನಗಿರಿ ಕಾಲೇಜಲ್ಲಿ ವೈದ್ಯ ಪದವಿಯನ್ನು ಪಡೆದಿರುವ ಅವರು, ಅಭಿನಯ ನನ್ನ ಮುಖ್ಯ ವೃತ್ತಿಯಲ್ಲ. ವೈದ್ಯಕೀಯವೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ.
ಅಭಿನಯನದ ಮೇಲಿನ ಅಪಾರ ಆಕರ್ಷಣೆ ಅವರನ್ನು ಬಣ್ಣ ಜಗತ್ತಿಗೆ ಎಳೆದು ತಂದಿದೆ. ಅಭಿನಯ ತರಂಗದಲ್ಲಿ ನಟನೆಯ ಅ ಆ ಇ ಈ ಕೂಡ ಅಭ್ಯಾಸ ಮಾಡಿದ್ದಾರೆ. ಅಷ್ಟೇ ಅಲ್ಲ ಡಾ.ಭಾರತಿ ಅವರು ಭರತನಾಟ್ಯ ಕಲಾವಿದೆಯೂ ಹೌದು.
ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿರುವ 'ಕೃಷ್ಣ ಸನ್ ಆಫ್ ಸಿಎಂ' ಚಿತ್ರದಲ್ಲಿ ನಾಯಕಿಯಾಗಿ ಡಾ. ಭಾರತಿ ಕಾಣಿಸಲಿದ್ದಾರೆ. ಈಗಾಗಲೆ ಬೀದರ್ ಸುತ್ತಮುತ್ತ 21 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಯೋಗಿಶ್ ಹುಣಸೂರು ನಿರ್ಮಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











