65ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಬ್ಲಾಕ್ ಲೇಡಿ' ಹಿಡಿದು ನಗೆ ಬೀರಿದ ಕನ್ನಡಿಗರ ಪಟ್ಟಿ ಇಲ್ಲಿದೆ
ಹೈದರಾಬಾದ್ ನ ನೊವೋಟೆಲ್ ಕನ್ವೆನ್ಷನ್ ಸೆಂಟರ್ ನಿನ್ನೆ ಸಿನಿಮಾ ಹಬ್ಬಕ್ಕೆ ಸಾಕ್ಷಿ ಆಯಿತು. ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಅತ್ಯುತ್ತಮ ತಾರೆಯರಿಗೆ ಭೇಷ್ ಎನ್ನುವ ವೈಭವೋಪೇತ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ (ಜೂನ್ 16) ಸಂಜೆ ಮುತ್ತಿನ ನಗರಿಯಲ್ಲಿ ಜರುಗಿತು.
65ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಲಾಕ್ ಲೇಡಿ (ಕಪ್ಪು ಸುಂದರಿ)ಯನ್ನು ಹಿಡಿದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಗೆ ಬೀರಿದರು.
ಈ ಬಾರಿ ಕನ್ನಡ ಚಿತ್ರರಂಗದ ಕಡೆಯಿಂದ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾದ ಪ್ರತಿಭಾವಂತರ ಸಂಪೂರ್ಣ ಪಟ್ಟಿ ಇಲ್ಲಿದೆ. ನೋಡಿ...

ಅತ್ಯುತ್ತಮ ನಟ ಅಪ್ಪು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಯಾರಿಗ್ತಾನೆ ಇಷ್ಟ ಆಗಲಿಲ್ಲ ಹೇಳಿ.? ಸೂಪರ್ ಡ್ಯೂಪರ್ ಹಿಟ್ ಆದ ಈ ಚಿತ್ರದಲ್ಲಿನ ನಟನೆಗಾಗಿ ಸದ್ಯ ಅಪ್ಪುಗೆ 'ಫಿಲ್ಮ್ ಫೇರ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿ' ಬಂದಿದೆ.

ಅತ್ಯುತ್ತಮ ನಟಿ ಶ್ರುತಿ ಹರಿಹರನ್
ಜಯತೀರ್ಥ ನಿರ್ದೇಶನದ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಶ್ರುತಿ ಹರಿಹರನ್ ರಾಜ್ಯ ಪ್ರಶಸ್ತಿ ಪಡೆದಿದ್ದರು. ಈಗ ಇದೇ ಸಿನಿಮಾದಲ್ಲಿನ ನಟನೆಗಾಗಿ 'ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ' ಸ್ವೀಕರಿಸಿದ್ದಾರೆ ನಟಿ ಶ್ರುತಿ ಹರಿಹರನ್.

ಅತ್ಯುತ್ತಮ ಚಿತ್ರ ಯಾವುದು ಗೊತ್ತಾ.?
ಎಲ್ಲರಿಂದ 'ಮೊಟ್ಟೆ' ಅಂತ ಕರೆಯಿಸಿಕೊಂಡು ಅಪಹಾಸ್ಯಕ್ಕೆ ಒಳಗಾಗುವ, ಮದುವೆ ಆಗಲು ಹೆಣ್ಣು ಸಿಗದೆ ಗೊಳೋ ಎನ್ನುವ ಬೋಳು ತಲೆಯ ವ್ಯಕ್ತಿಯ ಕಥೆ 'ಒಂದು ಮೊಟ್ಟೆಯ ಕಥೆ'. ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದ್ದ ಸದಭಿರುಚಿಯ 'ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ 'ಫಿಲ್ಮ್ ಫೇರ್ ಅತ್ಯುತ್ತಮ ಚಿತ್ರ' ಪ್ರಶಸ್ತಿ ಲಭಿಸಿದೆ.

ಕ್ರಿಟಿಕ್ಸ್ ಅವಾರ್ಡ್
'ಅಲ್ಲಮ' ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ನಟ ಧನಂಜಯ ರವರಿಗೆ 'ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್' ವಿಭಾಗದಲ್ಲಿ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿದೆ. ಇನ್ನೂ 'ಆಪರೇಶನ್ ಅಲಮೇಲಮ್ಮ' ಚಿತ್ರದಲ್ಲಿನ ನಟನೆಗಾಗಿ ನಟಿ ಶ್ರದ್ಧಾ ಶ್ರೀನಾಥ್ ಗೆ 'ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್' ವಿಭಾಗದಲ್ಲಿ 'ಅತ್ಯುತ್ತಮ ನಟಿ' ಪ್ರಶಸ್ತಿ ಸಿಕ್ಕಿದೆ.

ತರುಣ್ ಸುಧೀರ್ ಗೆ ಒಲಿದ ಅದೃಷ್ಟ
'ಚೌಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ತರುಣ್ ಸುಧೀರ್ 'ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ' ಪಡೆದಿದ್ದಾರೆ.

ರವಿಶಂಕರ್ ಗೂ ಬಂತು ಅವಾರ್ಡ್
'ಕಾಲೇಜ್ ಕುಮಾರ್' ಚಿತ್ರದಲ್ಲಿನ ನಟನೆಗಾಗಿ ಪಿ.ರವಿಶಂಕರ್ ರವರಿಗೆ 'ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ' ಸಿಕ್ಕಿದೆ. 'ಊರ್ವಿ' ಚಿತ್ರಕ್ಕಾಗಿ ಭವಾನಿ ಪ್ರಕಾಶ್ 'ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ' ಸ್ವೀಕರಿಸಿದ್ದಾರೆ.

ಗಾನ ಕೋಗಿಲೆಗಳಿಗೆ ಗೌರವ
'ಚಕ್ರವರ್ತಿ' ಚಿತ್ರದ 'ಒಂದು ಮಳೆಬಿಲ್ಲು' ಹಾಡಿಗೆ ಅರ್ಮಾನ್ ಮಲ್ಲಿಕ್ 'ಫಿಲ್ಮ್ ಫೇರ್ ಅತ್ಯುತ್ತಮ ಗಾಯಕ ಪ್ರಶಸ್ತಿ' ಪಡೆದುಕೊಂಡಿದ್ದಾರೆ. 'ಚೌಕ' ಚಿತ್ರದ 'ಅಪ್ಪ ಐ ಲವ್ ಯು' ಹಾಡಿಗೆ ಅನುರಾಧಾ ಭಟ್ ಗೆ 'ಫಿಲ್ಮ್ ಫೇರ್ ಅತ್ಯುತ್ತಮ ಗಾಯಕಿ ಪ್ರಶಸ್ತಿ' ಲಭಿಸಿದೆ. 'ಅಪ್ಪ ಐ ಲವ್ ಯು' ಹಾಡಿಗೆ ಸಾಹಿತ್ಯ ಬರೆದ ವಿ.ನಾಗೇಂದ್ರ ಪ್ರಸಾದ್ 'ಫಿಲ್ಮ್ ಫೇರ್ ಅತ್ಯುತ್ತಮ ಗೀತ ಸಾಹಿತಿ ಪ್ರಶಸ್ತಿ' ಪಡೆದಿದ್ದಾರೆ. ಇನ್ನೂ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಸಂಗೀತ ಸಂಯೋಜನೆಗೆ ಬಿ.ಜೆ.ಭರತ್ 'ಫಿಲ್ಮ್ ಫೇರ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.


Click it and Unblock the Notifications











