ಕಣ್ಣಿಗಾಗಿ ಕಣ್ಣುಗಳ ಹುಡುಕಾಟದ ಹೋರಾಟ: ರಾಷ್ಟ್ರ ಪ್ರಶಸ್ತಿ ಗೆದ್ದ 'ಅಕ್ಷಿ' ಸಿನಿಮಾ
''ಅಕ್ಷಿ ಸಿನಿಮಾ ಒಂದು ಕುಟುಂಬದ ಹೋರಾಟ. ಆ ಹೋರಾಟದ ಮೂಲಕ ಜನರಿಗೆ ನೇತ್ರದಾನದ ಮಹತ್ವ ಹಾಗೂ ಅರಿವು ಮೂಡಿಸಲು ಹೊರಟಿದ್ದೇವೆ. ಇದಕ್ಕೆ ಪ್ರೇರಣೆ ಡಾ ರಾಜ್ ಕುಮಾರ್'' ಎಂದು ನಿರ್ದೇಶಕ ಮನೋಜ್ ಕುಮಾರ್ ರಾಷ್ಟ್ರ ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ಹಂಚಿಕೊಂಡಿದ್ದಾರೆ.
67ನೇ ಸಾಲಿನ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, 'ಅಕ್ಷಿ' ಚಿತ್ರಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ದೊರೆತಿದೆ. ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದ 'ಅಕ್ಷಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ನಿರ್ದೇಶಕರಿಗೆ ಬಹಳ ಖುಷಿ ತಂದಿದೆ.
''ಬಹಳ ಖುಷಿಯಾಗುತ್ತಿದೆ. ಹತ್ತು ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದೀನಿ. ಇದು ನನ್ನ ಮೊದಲ ಚಿತ್ರ. ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ಹೇಗೆ ಸಂಭ್ರಮಿಸಬೇಕು ಎಂದು ತಿಳಿಯುತ್ತಿಲ್ಲ'' ಎಂದು ನಿರ್ದೇಶಕ ಮನೋಜ್ ಕುಮಾರ್ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ.

''ಸಮಾಜಕ್ಕೆ ಒಂದು ಗಟ್ಟಿ ಸಂದೇಶ ರವಾನಿಸಬೇಕು, ಅದು ಕಮರ್ಷಿಯಲ್ ಆಗಿ ತಯಾರಿಸಬೇಕು ಎಂಬ ಉದ್ದೇಶದಿಂದ ನಿರ್ಮಿಸಿದ ಚಿತ್ರ. ಇದಕ್ಕೆ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್, ರಮೇಶ್, ಮಂಡ್ಯದ ರವಿ ಶಕ್ತಿಯಾಗಿ ನಿಂತರು. ಗೋವಿಂದೇ ಗೌಡ, ಇಳಾ ವಿಟ್ಲ ಮತ್ತು ಇಬ್ಬರು ಮಕ್ಕಳ ಅಭಿನಯ ಇದಕ್ಕೆ ಕಾರಣ'' ಎಂದು ಮನೋಜ್ ಸಂತಸ ವ್ಯಕ್ತಪಡಿಸಿದ್ದಾರೆ.
'ಅಕ್ಷಿ' ಸಿನಿಮಾದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸುಮಾರು 50 ದಿನ ಶೂಟಿಂಗ್ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆದಿದೆ. ಇದುವರೆಗೂ ಬೇರೆ ಯಾವುದೇ ಚಲನಚಿತ್ರೋತ್ಸಗಳಲ್ಲಿ ಅಕ್ಷಿ ಸಿನಿಮಾ ಪಾಲ್ಗೊಂಡಿಲ್ಲ.

ಮನೋಜ್ ಕುಮಾರ್ ಮೂಲತಃ ಹಾಸನದವರು. ಓದಿದ್ದು ಚಿಕ್ಕಮಗಳೂರು. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಬಳಿ ಹತ್ತು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿದ್ದರು. ಶಿವರಾಜ್ ಕುಮಾರ್ ಅಭಿನಯದ ಶಿವ, ದುನಿಯಾ ವಿಜಯ್ ಅಭಿನಯದ ಭೀಮಾತೀರದಲ್ಲಿ, ದರ್ಶನ್ ನಟನೆಯ ಯೋಧ, ಪ್ರಿನ್ಸ್ ಅಂತಹ ಸಿನಿಮಾಗಳಲ್ಲಿ ಮನೋಜ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.
''ಓಂ ಪ್ರಕಾಶ್ ರಾವ್ ನನಗೆ ಕೆಲಸ ಕಲಿಸಿಕೊಟ್ಟ ಗುರು. ಅವರಿಂದಲೇ ನಾನು ಈ ಮಟ್ಟಿಗೆ ಕೆಲಸ ತಿಳಿದುಕೊಂಡಿದ್ದೇನೆ. ಇಂದು ನನ್ನ ಈ ರಾಷ್ಟ್ರ ಪ್ರಶಸ್ತಿ ಪಡೆದಿದ್ದೇನೆ ಅಂದ್ರೆ ಅದರಲ್ಲಿ ಅವರದ್ದು ಪಾಲಿದೆ'' ಎಂದು ಮನೋಜ್ ಕುಮಾರ್ ಗುರುವಂದನೆ ಸಲ್ಲಿಸಿದರು.
''ಗೋವಿಂದೇ ಗೌಡ(ಜಿಜಿ) ಮತ್ತು ಇಳಾ ವಿಟ್ಲ ಅವರಿಗೆ ನಾನು ಜೀವನ ಪರ್ಯಾಂತ ಆಭಾರಿ. ತುಂಬಾ ಸಹಕಾರ ಕೊಟ್ಟಿದ್ದಾರೆ. ಇವರ ಜೊತೆ ಮಾಸ್ಟರ್ ಮಿಥುನ್, ಮಾಸ್ಟರ್ ಸೌಮ್ಯ ಅದ್ಭುತವಾಗಿ ನಟಿಸಿದ್ದಾರೆ. ಜಿಜಿ ಅವರದ್ದು ಬಹಳ ವಿಶೇಷ ಪಾತ್ರ. ಬರಿ ಕಾಮಿಡಿ ಪಾತ್ರಗಳಲ್ಲಿ ನೋಡಿದ್ದ ಅವರನ್ನು ಗಂಭೀರವಾದ ಪಾತ್ರದಲ್ಲಿ ತೋರಿಸಲಾಗಿದೆ. ಪ್ರೇಕ್ಷಕರ ಕಣ್ಣಲ್ಲಿ ಅಳು ತರಿಸುತ್ತಾರೆ. ಅವರ ಅಭಿನಯ ಅದ್ಭುತ'' ಎಂದು ನಿರ್ದೇಶಕ ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಷಿ ಚಿತ್ರತಂಡದ ಬಗ್ಗೆ....
ಕಲಾದೇಗುಲ ಶ್ರೀನಿವಾಸ್, ಮಿಥುನ್.ಎಂ.ವೈ, ಸೌಮ್ಯ ಪ್ರಭು, ನಾಗರಾಜ್ ರಾವ್, ಪ್ರದೀಪ್, ಕಲ್ಯಾಣಿ ಪ್ರದೀಪ್, ನಾಗೇ ಗೌಡ, ಕಸ್ತೂರಿ ಮೂಲಿಮನಿ, ದೇವೇಂದ್ರ ನಾಯ್ಡು, ರೂಪಶ್ರೀ, ಶಶಿ ಕಿರಣ್, ಚಿಕ್ಕೇಗೌಡ ಸೇರಿದಂತೆ ಹಲವರು ತಾರಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಕಲಾದೇಗುಲ ಶ್ರೀನಿವಾಸ್ ಅವರೇ ಸಂಗೀತ ಸಂಯೋಜನೆ ಮಾಡಿದ್ದು, ಮುಕುಲ್ ಗೌಡ ಛಾಯಾಗ್ರಹಣವಿದೆ.
ವಿಶೇಷ ಅಂದ್ರೆ ದಿವಂಗತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಇದು ಅವರ ಕೊನೆಯ ಸಾಂಗ್ ಎಂದು ಹೇಳಬಹುದು.


Click it and Unblock the Notifications











