ಲೈವ್ ಬಂದ ಯಶ್ : ಬಾಡಿಗೆ ಗಲಾಟೆ ಬಿಟ್ಟು ಹೇಳಿದ 7 ಮಾತುಗಳು
ನಟ ಯಶ್ ಇಂದು ಮದ್ಯಾಹ್ನ 4 ಗಂಟೆಗೆ ತಮ್ಮ ಫೇಸ್ ಬುಕ್ ಪೇಜ್ ಮೂಲಕ ಲೈವ್ ಬಂದಿದ್ದರು. ಮನೆ ಬಾಡಿಗೆ ವಿಚಾರದಲ್ಲಿ ನಿನ್ನೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಾಕಿಯಿರುವ ಬಾಡಿಗೆ ಹಣ 9 ಲಕ್ಷದ 60 ಸಾವಿರ ಪಾವತಿಸಿ, ಮೂರು ತಿಂಗಳ ಒಳಗಾಗಿ ಮನೆ ಖಾಲಿ ಮಾಡಬೇಕು ಎಂದು ಆದೇಶ ನೀಡಿತ್ತು. ಪದೇ ಪದೇ ಕೇಳಿ ಬರುತ್ತಿರುವ ಈ ಬಾಡಿಗೆ ಮನೆ ಗಲಾಟೆಯ ಬಗ್ಗೆ ಯಶ್ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಬಾಡಿಗೆ ಮನೆ ವಿವಾದದ ಬಗ್ಗೆ ಮಾತನಾಡಿದ ಯಶ್ ಅದರ ಜೊತೆಗೆ ಅವರ ಅಭಿಮಾನಿಗಳು ಕೇಳಿದ ಇತರ ಪ್ರಶ್ನೆಗಳಿಗೆ ಸಹ ಉತ್ತರ ನೀಡಿದರು. ಯಶ್ ಯಾವ ಪಕ್ಷದ ಪರ ಚುನಾವಣೆ ಪ್ರಚಾರ ಮಾಡುತ್ತಾರೆ?, ಕನ್ನಡ ಕೋಟ್ಯಾಧಿಪತಿ ನಿರೂಪಣೆ, ದರ್ಶನ್, ಸುದೀಪ್ ಜೊತೆಗೆ ಸಿನಿಮಾ, ಹೋಮ್ ಬ್ಯಾನರ್, ಮತ್ತೆ ರಾಧಿಕಾ ಜೊತೆಗೆ ಸಿನಿಮಾ ಈ ಎಲ್ಲ ವಿಷಯಗಳ ಕುರಿತು ಯಶ್ ಮಾತನಾಡಿದ್ದಾರೆ.
ತಮ್ಮ ಪೇಸ್ ಬುಕ್ ಖಾತೆಯಲ್ಲಿ ಲೈವ್ ಬಂದ ಸಂದರ್ಭದಲ್ಲಿ ಬಾಡಿಗೆ ಮನೆ ಗಲಾಟೆ ಬಿಟ್ಟು ಯಶ್ ಆಡಿದ 7 ಮಾತುಗಳು ಮುಂದಿದೆ ಓದಿ...

ಚುನಾವಣೆ ಪ್ರಚಾರ
''ಚುನಾವಣೆ ಪ್ರಚಾರವನ್ನು ಯಾರಿಗೆ ಮಾಡಬೇಕು?. ಒಂದು ಪಾರ್ಟಿ.. ಒಂದು ಪಕ್ಷ.. ಎನ್ನುವ ಕ್ಲಾರಿಟಿ ನನಗೆ ಇಲ್ಲ. ರಾಜಕೀಯದಲ್ಲಿ ಇರುವ ಅನೇಕ ಸ್ನೇಹಿತರು ಬಂದು ಕೇಳುತ್ತಾರೆ. ಆದರೆ ನಾನು ಹೇಳುವುದು ಒಂದೇ. ಇಂದು ನಿಮಗೆ ಪ್ರಚಾರ ಮಾಡುತ್ತೇನೆ ನಾಳೆ ನೀವು ಏನು ಕೆಲಸ ಮಾಡಿಲ್ಲ ಅಂದರೆ ಜನ ನನಗೆ ಕೇಳುತ್ತಾರೆ ಆಗ ನಾನು ಅವರಿಗೆ ಏನು ಉತ್ತರ ನೀಡಲಿ ಅಂತ. ಚುನಾವಣಾ ಪ್ರಚಾರದ ಬಗ್ಗೆ ನನ್ನ ನಿಲುವನ್ನು ಸದ್ಯದಲ್ಲಿಯೇ ಹೇಳುತ್ತೇನೆ.'' - ಯಶ್, ನಟ

ನನಗೆ ಸಹ ರಾಜಕೀಯ ಬೇಡ
''ನನಗೆ ಸಹ ರಾಜಕೀಯ ಬೇಡ. ನಾನೇನು ಎಲೆಕ್ಷನ್ ನಲ್ಲಿ ನಿಂತುಕೊಂಡು ಎಂ ಎಲ್ ಎ ಆಗಬೇಕು ಅಂತ ಅಲ್ಲ. ಆದರೆ ಎಲ್ಲ ಸೋಷಿಯಲ್ ವರ್ಕ್ ಹೇಗೆ ಮಾಡುತ್ತೀರಾ. ಯಾವುದೇ ಕೆಲಸ ಮಾಡಬೇಕು ಅಂದರೆ ಅಲ್ಲಿ ಸರ್ಕಾರದಿಂದನೇ ಕೆಲಸ ನೆಡೆಯಬೇಕು. ಸರ್ಕಾರ ಇಲ್ಲದೆ ಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇವೆ. ನನಗೆ ರಾಜಕೀಯಕ್ಕೆ ಬರಬೇಕು ಎನ್ನುವುದು ಇಲ್ಲ. ಆದರೆ ನಮ್ಮ ಮಾತು ಕೇಳುವ ಕೆಲವು ರಾಜಕಾರಣಿಗಳು ಸಿಕ್ಕರು ಕೆಲಸ ಮಾಡಬಹುದು.'' - ಯಶ್, ನಟ

ಡಿ ಬಾಸ್ ಜೊತೆಗೆ ಒಂದು ಸಿನಿಮಾ
''ಡಿ ಬಾಸ್ ಜೊತೆಗೆ ಒಂದು ಸಿನಿಮಾ ಮಾಡಿ ಅಂತ ಒಬ್ಬರು ಕೇಳಿದ್ದಾರೆ. ಖಂಡಿತ ಮಾಡುತ್ತೇನೆ. ಆ ರೀತಿಯ ಒಂದು ಕಥೆ ಸಿಗಬೇಕು. ಚೆನ್ನಾಗಿದೆ ಅನಿಸಿದರೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತೇವೆ.'' - ಯಶ್, ನಟ

'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ
''ನನಗೆ ಈಗ 'ಕನ್ನಡದ ಕೋಟ್ಯಾದಿಪತಿ' ಕಾರ್ಯಕ್ರಮ ನಿರೂಪಣೆ ಮಾಡುವುದು ಕಷ್ಟ ಆಗುತ್ತದೆ. ಈಗ ಸಿನಿಮಾಗಳ ಕೆಲಸ ಇದೆ. ಮೂರ್ನಾಕು ಸ್ಕ್ರಿಪ್ಟ್ ಗಳನ್ನು ರೆಡಿ ಮಾಡುತ್ತಾ ಇದ್ದೇವೆ. ಒಂದುವರೆ ವರ್ಷ ತಡ ಆಗಿದೆ. ಇನ್ನೂ ತಡ ಆಗಬಾರದು ಅಂತ ಆಂಕರಿಂಗ್ ಕಡೆ ಅಷ್ಟು ಗಮನ ನೀಡುತ್ತಿಲ್ಲ. ಅದಕ್ಕೆ 'ಕನ್ನಡದ ಕೋಟ್ಯಾಧಿಪತಿ'ಗೆ ಇಲ್ಲ ಅಂತ ಹೇಳಿದ್ದೇನೆ. ಆದರೆ ಮುಂದೆ ನೋಡೋಣ.'' - ಯಶ್, ನಟ

ರಾಧಿಕಾ - ಯಶ್ ಸಿನಿಮಾ
''ರಾಧಿಕಾ ಮತ್ತು ನನ್ನ ಕಾಂಬಿನೇಶನ್ ಸಿನಿಮಾಗಾಗಿ ಕಾಯುತ್ತಿದ್ದೇವೆ ಅಂತ ಕೇಳುತ್ತಿದ್ದಾರೆ. ನಾವು ಖಂಡಿತ ಮತ್ತೆ ಸಿನಿಮಾ ಮಾಡುತ್ತೇವೆ. ಆದರೆ ಅದಕ್ಕೆ ಒಳ್ಳೆಯ ಸ್ಕ್ರಿಪ್ಟ್ ಸಿಗಬೇಕು. ಸುಮ್ಮನೆ ನಾವು ಗಂಡ ಹೆಂಡತಿ ಒಟ್ಟಿಗೆ ನಟನೆ ಮಾಡಬೇಕು ಅಂತ ಸಿನಿಮಾ ಮಾಡಲ್ಲ. ಮುಂಚೆಯಿಂದ ಅಷ್ಟೆ ಒಳ್ಳೆಯ ಕಥೆ ಸಿಕ್ಕರೆ ಮಾತ್ರ ನಾವು ಒಂದಾಗಿ ಸಿನಿಮಾ ಮಾಡಿದ್ದೇವೆ. ಈಗಲೂ ಅದನ್ನೇ ಮುಂದುವರೆಸುತ್ತೇವೆ.'' - ಯಶ್, ನಟ

ಹೋಮ್ ಬ್ಯಾನರ್
''ಬಹಳಷ್ಟು ದಿನದಿಂದ ಒಂದು ಪ್ರೊಡಕ್ಷನ್ ಕಂಪನಿ ಶುರು ಮಾಡಬೇಕು ಎಂಬ ಆಸೆ ಇದೆ. ನಾವು ಇಷ್ಟು ವರ್ಷ ಕೆಲಸ ಮಾಡಿರುವ ಎಲ್ಲ ಬ್ಯಾನರ್ ಸಹ ನಮ್ಮ ಬ್ಯಾನರ್ ತರನೇ ಕೆಲಸ ಮಾಡುತ್ತಿದ್ದೇನೆ. ಜಯಣ್ಣ ಆಗಬಹುದು, ರಾಕ್ ಲೈನ್ ವೆಂಕಟೇಶ್ ಆಗಬಹುದು, ಅಧವಾ ವಿಜಯ್ ಕಿರಂದೂರ್ ಆಗಬಹುದು ನನಗೆ ಎಲ್ಲರೂ ಫ್ರೆಂಡ್ಸ್. ನನಗೆ ಕೆಲವು ಸಹ ನಿರ್ದೇಶಕರು ಒಳ್ಳೆಯ ಕಥೆ ಇದೆ ನಿಮ್ಮ ಬ್ಯಾನರ್ ನಲ್ಲಿ ಮಾಡೋಣ ಅಂತ ಕೇಳುತ್ತಿರುತ್ತಾರೆ. ನನಗೆ ಸಹ ಆ ಆಸೆ ಇದೆ. ಮುಂದೆ ನನ್ನ ಸಿನಿಮಾಗಳು ಸಹ ನನ್ನ ಪ್ರೊಡಕ್ಷನ್ ನಲ್ಲಿ ಮಾಡುವ ಇಷ್ಟವಿದೆ.'' - ಯಶ್, ನಟ

ಸುದೀಪ್ ಜೊತೆಗೆ ಸಿನಿಮಾ
''ಸುದೀಪ್ ಜೊತೆ ಆಗಬಹುದು, ಅಪ್ಪು, ದರ್ಶನ್ ಜೊತೆಗೆ ಆಗಬಹುದು ಸದ್ಯ ಅವರು ಅವರವರ ಸಿನಿಮಾಗಳನ್ನು ಮಾಡುತ್ತಾ ಇರುತ್ತಾರೆ. ಅವರ ಜೊತೆಗೆ ಸಿನಿಮಾ ಮಾಡುವುದಕ್ಕೆ ಸರಿಯಾದ ಕಥೆ ಸಿಗಬೇಕು. ಒಳ್ಳೆಯ ಸಬ್ಜೆಟ್ ತೆಗೆದುಕೊಂಡು ಯಾರಾದರೂ ಬಂದರೆ ನೋ ಅಂತ ಯಾರು ಹೇಳುವುದಿಲ್ಲ. ಕಥೆ, ಡೈರೆಕ್ಷನ್ ಮತ್ತು ಪ್ರೊಡಕ್ಷನ್ ಚೆನ್ನಾಗಿ ಇರಬೇಕು. ಹಾಗೆ ಇದ್ದರೆ ನಿಜವಾಗಿ ಒಟ್ಟಿಗೆ ಸಿನಿಮಾ ಮಾಡುತ್ತೇವೆ.'' - ಯಶ್, ನಟ


Click it and Unblock the Notifications











