ಗುರುವಿನಿಂದ ಗುರುವಿಗಾಗಿ ಗುರುವಿಗೋಸ್ಕರ ಜಗ್ಗೇಶ್
ಗುರುರಾಜ ಫಿಲಂಸ್ ದ್ವಿತೀಯ ಚಿತ್ರ ಅದ್ವಿತೀಯ ಚಿತ್ರವಾಗಲು ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರಮ ಭಕ್ತ ಹೆಸರಾಂತ ನಟ, ಸ್ನೇಹ ಜೀವಿ, ಸಹೃದಯಿ, ರಾಜಕಾರಣಿ ಜಗ್ಗೇಶ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.
ಜಗ್ಗೇಶ್ ಪುತ್ರ ಗುರುರಾಜ್ ನಾಯಕ ನಟರಾಗಿ ಅಭಿನಯಿಸಲಿರುವ 'ಗುರು' ಚಿತ್ರಕ್ಕೆ ಮಂತ್ರಾಲಯದ ಮೂಲ ಬೃಂದಾವನ ಹಾಗೂ ಅದೇ ಸ್ಥಳದಲ್ಲಿರುವ ಶ್ರೀ ಆಂಜನೇಯನ ಗುಡಿಯನ್ನು ಜಗ್ಗೇಶ್ ಅವರು ವಿಶೇಷ ಅನುಮತಿಯೊಂದಿಗೆ ಚಿತ್ರದ ಟೈಟಲ್ ಕಾರ್ಡ್ಗಾಗಿ ಚಿತ್ರೀಕರಿಸಿಕೊಂಡು ಬಂದಿದ್ದಾರೆ.
ನಟ ಜಗ್ಗೇಶ್ ನಿರ್ದೇಶಕರಾಗುತ್ತಿರುವ ಈ ಹೊತ್ತಿನಲ್ಲಿ ಚಿತ್ರರಂಗದಲ್ಲಿ 30 ವಸಂತಗಳನ್ನು ಸದ್ಯದಲ್ಲೇ ಕಾಣಲಿದ್ದಾರೆ. ಆ ಸವಿನೆನಪಿಗಾಗಿ ಅವರ ಪುತ್ರನ ನಾಯಕತ್ವದಲ್ಲಿ ತಾವೇ ನಿರ್ದೇಶಕರೂ ಆಗಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕಳೆದ ಗುರುವಾರ ಮಂತ್ರಾಲಯದಲ್ಲಿ ಜನಸ್ತೋಮದ ನಡುವೆ ವೇದಘೋಷಗಳ ಪಠನವನ್ನು ದೇವಸ್ಥಾನದ ಸುತ್ತಮುತ್ತ ಭಕ್ತರ ಒಡನಾಟವನ್ನು ಛಾಯಾಗ್ರಾಹಕ ರಮೇಶ ಬಾಬು ಚಿತ್ರಿಸಿಕೊಂಡಿದ್ದಾರೆ.
ಜೂನ್ ತಿಂಗಳಲ್ಲಿ ಸೆಟ್ಟೇರಲಿರುವ 'ಗುರು' ಚಿತ್ರಕ್ಕಾಗಿ ಗುರುರಾಜ್ ವಿಶೇಷ ತರಬೇತಿಗಳನ್ನು ಪಡೆಯುತ್ತಿದ್ದಾರೆ. ತೂಕ ಇಳಿಸುವುದರಿಂದ ಹಿಡಿದು ಕಿಕ್ ಬಾಕ್ಸಿಂಗ್ವರೆಗೆ ಅನೇಕ ವಿಶೇಷಣಗಳನ್ನು ಅಪ್ಪನ ನಿರ್ದೇಶನದಲ್ಲಿ ತುಂಬಲು ಗುರುರಾಜ್ ಶ್ರಮಿಸುತ್ತಿದ್ದಾರೆ. ಇವರ ಸಹೋದರ ಯತಿರಾಜ್ ಕೂಡ 'ಗುರು' ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಆನಂದ್ ಅವರ ಸಹ ನಿರ್ದೇಶನ, ವಿನಯ್ ಚಂದ್ರ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ, ರವಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಚಿತ್ರದ ನಾಯಕಿ ಹಾಗೂ ಇನ್ನಿತರ ಪಾತ್ರ ವರ್ಗದ ಆಯ್ಕೆಯಲ್ಲಿದ್ದಾರೆ ಜಗ್ಗೇಶ್. (ಒನ್ಇಂಡಿಯಾ ಕನ್ನಡ)


Click it and Unblock the Notifications











