'777 ಚಾರ್ಲಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಸರ್ಕಾರ
ಕೆಲವು ದಿನಗಳ ಹಿಂದಷ್ಟೆ '777 ಚಾರ್ಲಿ' ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ರಕ್ಷಿತ್ ಶೆಟ್ಟಿ ನಟಿಸಿ, ಕಿರಣ್ ಕುಮಾರ್ ನಿರ್ದೇಶಿಸಿರುವ '777 ಚಾರ್ಲಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿರುವುದಾಗಿ ಅಧಿಕೃತ ರಾಜ್ಯ ಪತ್ರದಲ್ಲಿ ಹೊರಡಿಸಲಾಗಿದೆ. ರಕ್ಷಿತ್ ಶೆಟ್ಟಿ ಹಾಗೂ ಪರಮ್ವಹ ಸ್ಟುಡಿಯೋಸ್ ಮೂಲಕ '777 ಚಾರ್ಲಿ' ಸಿನಿಮಾಕ್ಕೆ 100% ತೆರಿಗೆ ವಿನಾಯಿತಿ ನೀಡುವಂತೆ ಮಾಡಲಾಗಿದ್ದ ಮನವಿಗೆ ಪ್ರತಿಯಾಗಿ ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ.
ಇನ್ಬ್ರೀಡಿಂಗ್ನಿಂದಾಗಿ ಶ್ವಾನಗಳ ಮೇಲಾಗುವ ಅಡ್ಡಪರಿಣಾಮ ಹಾಗೂ ಪ್ರಾಣಿ ಹಿಂಸೆಯ ವಿರುದ್ಧ ಸಂದೇಶವನ್ನು ಸಿನಿಮಾ ಒಳಗೊಂಡಿದೆ ಹಾಗೂ ಬೀದಿ ನಾಯಿಗಳನ್ನು ದತ್ತು ಪಡೆಯುವ ಕುರಿತಾಗಿ ಸಂದೇಶ ಸಾರುತ್ತಿದೆ ಎಂದು ಸರ್ಕಾರವು ರಾಜ್ಯ ಪತ್ರದಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿನ ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ '777 ಚಾರ್ಲಿ' ಸಿನಿಮಾಕ್ಕೆ ನಾಳಿನಿಂದ (ಜೂನ್ 19) ರಿಂದ ಮುಂದಿನ ಆರು ತಿಂಗಳ ಕಾಲ ಜಿಎಸ್ಟಿ ಹಿಂಪಾವತಿ ಸೌಕರ್ಯವನ್ನು ಕೆಲವು ಷರತ್ತುಗಳೊಟ್ಟಿಗೆ ಸರ್ಕಾರ ನೀಡಿದೆ.

ಚಿತ್ರಮಂದಿರಗಳು ಜಿಎಸ್ಟಿ ಸಂಗ್ರಹಿಸುವಂತಿಲ್ಲ
'777 ಚಾರ್ಲಿ' ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳು ಜಿಎಸ್ಟಿ ರಹಿತವಾಗಿ ಟಿಕೆಟ್ಗಳನ್ನು ಮಾರತಕ್ಕದ್ದು, ಪ್ರೇಕ್ಷಕರಿಂದ ಜಿಎಸ್ಟಿ ಹಣವನ್ನು ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್ಗಳು ಸಂಗ್ರಹಿಸುವಂತಿಲ್ಲ.
ಜಿಎಸ್ಟಿ ಸಂಗ್ರಹಿಸದೇ ಇದ್ದರು ಚಿತ್ರಮಂದಿರಗಳು/ ಮಲ್ಟಿಫ್ಲೆಕ್ಸ್ಗಳು ಜಿಎಸ್ಟಿಯನ್ನು ಈ ಹಿಂದಿನಂತೆಯೇ ಅಥವಾ ಇತರ ಚಿತ್ರಗಳಿಗೆ ತುಂಬುವಂತೆಯೇ ತಮ್ಮ ಸಂಪನ್ಮೂಲದಿಂದಲೇ ತುಂಬಿ ಆ ಬಳಿಕ ಜಿಎಸ್ಟಿ ಹಿಂಪಾವತಿಗೆ ಕ್ಲೇಮ್ ಮಾಡತಕ್ಕದ್ದು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಮುಂದಿನ ಆರು ತಿಂಗಳಿಗೆ ತೆರಿಗೆ ವಿನಾಯಿತಿ
'777 ಚಾರ್ಲಿ' ಸಿನಿಮಾಕ್ಕೆ ರಾಜ್ಯ ಜಿಎಸ್ಟಿ ರದ್ದಾಗಿದ್ದು, ಕೇಂದ್ರ ಜಿಎಸ್ಟಿ ಜಾರಿಯಲ್ಲಿರಲಿದೆ. ರಾಜ್ಯದ ಪಾಲನ್ನು ಮಾತ್ರವೇ ಸರ್ಕಾರ ಬಿಟ್ಟುಕೊಟ್ಟಿದೆ. ಮುಂದಿನ ಆರು ತಿಂಗಳ ಕಾಲ '777 ಚಾರ್ಲಿ' ಸಿನಿಮಾದ ಟಿಕೆಟ್ಗಳ ಮೇಲೆ ರಾಜ್ಯ ಜಿಎಸ್ಟಿ ಇರುವುದಿಲ್ಲ. ಕೆಲವು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದ ಹಿಂದಿ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್'ಗೆ ರಾಜ್ಯ ಸರ್ಕಾರ ಇದೇ ರೀತಿ ಆರು ತಿಂಗಳ ಕಾಲ ತೆರಿಗೆ ವಿನಾಯಿತಿ ಘೋಷಿಸಿತ್ತು. ಇದೀಗ '777 ಚಾರ್ಲಿ' ಸಿನಿಮಾಕ್ಕೆ ವಿನಾಯಿತಿ ಘೋಷಣೆ ಮಾಡಲಾಗಿದೆ.

ಸಿನಿಮಾ ವೀಕ್ಷಿಸಿದ್ದ ಸಿಎಂ ಬೊಮ್ಮಾಯಿ
'777 ಚಾರ್ಲಿ' ಸಿನಿಮಾ ಬಿಡುಗಡೆ ಆಗಿ ಎಂಟು ದಿನವಾಗಿದೆ. ಈಗಾಗಲೇ ಹಲವಾರು ಮಂದಿ ಸಿನಿಮಾ ನೋಡಿದ್ದಾರೆ. ಇನ್ನು ಮುಂದೆ ಸಿನಿಮಾ ನೋಡುವ ಪ್ರೇಕ್ಷಕರಿಗೆ ಟಿಕೆಟ್ಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ. ಜೂನ್ 13 ರಂದು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್, ಸುಧಾಕರ್, ನಾಗೇಶ್, ರಾಜ್ಯಸಭೆ ಸದಸ್ಯ ಜಗ್ಗೇಶ್ ಇನ್ನಿತರರು ಒರಾಯಿನ್ ಮಾಲ್ನಲ್ಲಿ '777 ಚಾರ್ಲಿ' ಸಿನಿಮಾ ನೋಡಿದ್ದರು. ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಅಗಲಿದ ನಾಯಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದರು. ಸಿಎಂ ಕಣ್ಣೀರು ಹಾಕಿದ ಚಿತ್ರಗಳು ಬಹಳ ವೈರಲ್ ಆಗಿದ್ದವು.

ಸಿನಿಮಾ ನೋಡಿ ಅತ್ತಿದ್ದ ಬೊಮ್ಮಾಯಿ
ಸಿನಿಮಾವನ್ನು ಬಹುವಾಗಿ ಹೊಗಳಿದ್ದ ಸಿಎಂ, ''ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಹೇಳಲಾಗಿದೆ. ಅದರಲ್ಲಿಯೂ ಶ್ವಾನ, ಮನುಷ್ಯನನ್ನು ಅತಿಯಾಗಿ ಪ್ರೀತಿಸುವ ಪ್ರಾಣಿ, ಅದರ ಬಗ್ಗೆ ಕತೆ ಮಾಡಲಾಗಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಮಾರ್ಮಿಕವಾಗಿ, ಸೂಕ್ಷ್ಮವಾಗಿ ಹಾಗೂ ಭಾವನಾತ್ಮಕವಾಗಿ ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ. ಪ್ರಾಣಿಗಳನ್ನು ಹಿಂಸಿಸಬಾರದು, ದೂಷಿಸಬಾರದು, ನೋಯಿಸಬಾರದು. ಪ್ರಾಣಿಗಳನ್ನು ರಕ್ಷಣೆ ಮಾಡಬೇಕು, ಸಾಧ್ಯವಾದರೆ ಅನಾಥ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬೇಕು, ಇದರಿಂದ ನಮಗೆ ಹೆಚ್ಚು ಪ್ರೀತಿ, ಸಂತೋಶ ಧಕ್ಕುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂಬ ಸಂದೇಶ ಸಿನಿಮಾದಲ್ಲಿದೆ'' ಎಂದಿದ್ದರು.


Click it and Unblock the Notifications











