ಸದ್ಯಕ್ಕೆ ಸಿಗುವುದಿಲ್ಲ ಅಭಿಮಾನಿಗಳಿಗೆ ದರ್ಶನ, ಇನ್ನೂ 14 ದಿನ ದಾಸನಿಗೆ ಜೈಲೇ ಗತಿ..!
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿ ಮೂರು ತಿಂಗಳಾಗಿವೆ. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗಿದ್ದಾರೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂಬ ಪ್ರಾರ್ಥನೆಯನ್ನೂ ಮಾಡುತ್ತಿದ್ದಾರೆ. ಆದರೆ ಆ ಪ್ರಾರ್ಥನೆಗೆ ಫಲ ಸಿಕ್ತಿಲ್ಲ. ದರ್ಶನ್ ಜೈಲುವಾಸ ಮುಗಿತಾ ಮುಗಿಯುತ್ತಿಲ್ಲ.
ಹೌದು, ಇಂದು ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನೆಲೆ, ದರ್ಶನ್ ಮತ್ತು ಸಹಚರರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿತ್ತು.ಬಳ್ಳಾರಿ ಸೆಂಟ್ರಲ್ ಜೈಲಿನಿಂದ ದರ್ಶನ್, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಪವಿತ್ರಾಗೌಡ ಹಾಜರಾಗಿದ್ದರು. ಉಳಿದಂತೆ ತುಮಕೂರು, ಮೈಸೂರು, ಧಾರವಾಡ, ಕಲಬುರಗಿ, ವಿಜಯಪುರ, ಹಿಂಡಲಗಾ ಜೈಲಿನಿಂದ ಆರೋಪಿಗಳು ಹಾಜರಾಗಿದ್ದರು.

ಸರಕಾರಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಪಟ್ಟ ತಾಂತ್ರಿಕ ಸಾಕ್ಷ್ಯಾಧಾರಗಳು ಹಾಗೂ ಸಿಎಫ್ಎಸ್ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಆ ನಂತರ ವಾದ ಆರಂಭಿಸಿದ ದರ್ಶನ್ ಪರ ವಕೀಲರು, ಬಳ್ಳಾರಿ ಜೈಲಿನಲ್ಲಿ ತಮ್ಮ ಕಕ್ಷಿದಾರರಿಗೆ ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸಿಲ್ಲ. ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಕುರ್ಚಿಯನ್ನೂ ಕೂಡ ನೀಡಿಲ್ಲ ಎಂದರು. ದರ್ಶನ್ ಅವರಿಗೆ ಬ್ಯಾಕ್ಪೇನ್ ಇದೆ. ಚೇರ್ ಕೊಡುವಂತೆ ಕೇಳಿದ್ದು, ಚೇರ್ ಕೊಟ್ಟಿಲ್ಲ ಎಂದು ಹೇಳಿದರು.
ಕುಟುಂಬ, ಸ್ನೇಹಿತರ ಭೇಟಿಗೆ ಕೂಡ ಅವಕಾಶ ಕೊಡುತ್ತಿಲ್ಲ ಎಂದು ಸಹ ದೂರಿದ ದರ್ಶನ್ ಪರ ವಕೀಲರು, ಯಾವ ಆಧಾರದಲ್ಲಿ ಕಾನೂನು ಮಾಡ್ಕೊಂಡ್ರು ಇವರು? ಬೆಳಗಾವಿ ಜೈಲು ನಿಯಮಗಳ ಪ್ರಕಾರ ರೂಲ್ಸ್ ಮಾಡಿಕೊಂಡಿದ್ದಾರೆ. ಕೋರ್ಟ್ ಪರ್ಮಿಷನ್ ಇಲ್ದೆ ಹೇಗೆ ನಿಯಮ ಮಾಡ್ಕೊಂಡ್ರು ಇವ್ರು? ಸ್ನೇಹಿತರು, ಕುಟುಂಬದವರು ಭೇಟಿಯಾಗೋದು ತಪ್ಪಾ? ಯಾರನ್ನೂ ಬಿಡ್ತಿಲ್ಲ ಅವರು. ಯಾವ ಪ್ರೊಸೀಜರ್ ಫಾಲೋ ಮಾಡ್ತಿದ್ದಾರೆ ಅವ್ರು? ದರ್ಶನ್ ಏನು ಕೋಕಾ ಅಪರಾಧಿನಾ? ಅವರು ಕೊಲೆ ಆರೋಪಿ ಅಷ್ಟೆ ಎಂದು ವಾದವನ್ನು ಮಂಡಿಸಿದರು.

ದರ್ಶನ್ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಕುಟುಂಬದ ಸ್ನೇಹಿತರಿಗೆ ಭೇಟಿ ಮಾಡಲು ಅವಕಾಶ ಕೊಡಿ ಎಂದು ತಿಳಿಸಿದರು. ಜೊತೆಗೆ, ಅಗತ್ಯ ವಸ್ತುಗಳನ್ನು ಒದಗಿಸುವಂತೆ ಸೂಚಿಸಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ.30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದರು.
ಉಳಿದಂತೆ ಇಂದು ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದರು. ದರ್ಶನ್ ಪರ ವಕೀಲರು ಕೊರಿಯರ್ ಮೂಲಕ ಒಂದು ಲೆಟರ್ ಕಳುಹಿಸಿದ್ದರು. ಎರಡು ಬ್ಯಾಗ್ ಜೊತೆಗೆ ದರ್ಶನ್ ಅವರು ವಕೀಲರು ಕಳುಹಿಸಿದ ಲೆಟರ್ಗೆ ಸಹಿ ಮಾಡಿ ಪತ್ನಿ ವಿಜಯಲಕ್ಷ್ಮಿ ಅವರಿಗೆ ನೀಡಿದರು. ಇನ್ನೂ ಕೇವಲ ವಿಜಯಲಕ್ಷ್ಮಿ ಮಾತ್ರವಲ್ಲದೆ ಅವರ ಜೊತೆ ಇಂದು ಧನ್ವೀರ್ ಮತ್ತು ದರ್ಶನ್ ಅವರ ಆಪ್ತ ಹೇಮಂತ್ ಕೂಡ ಬಳ್ಳಾರಿಯ ಜೈಲಿಗೆ ತೆರಳಿದ್ದರು. ದರ್ಶನ್ ಅವರನ್ನು ಮಾತನಾಡಿಸಿಕೊಂಡು ಆರೋಗ್ಯ ವಿಚಾರಿಸಿಕೊಂಡು ತೆರಳಿದರು. ಸಂದರ್ಶಕರ ಕೊಠಡಿಯಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ 25 ನಿಮಿಷಗಳ ಕಾಲ ಚರ್ಚೆಯನ್ನು ಮಾಡಿದರು.


Click it and Unblock the Notifications











