ಚಿರಂಜೀವಿ ಮಗನಾದ ನೀವೂ ಸ್ಟಾರ್, ಬಸ್ ಡ್ರೈವರ್ ಮಗ ಯಶ್ ಕೂಡ ಸ್ಟಾರ್ ಎಂದಾಗ ರಾಮ್ ಚರಣ್ ಹೇಳಿದ್ದೇನು?
ರಾಮ್ ಚರಣ್ ಆರ್ ಆರ್ ಆರ್ ಚಿತ್ರದಲ್ಲಿ ನಟಿಸಿದಾಗಿನಿಂದಲೂ ಸಾಲು ಸಾಲು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿಯೂ ಇತ್ತೀಚೆಗಷ್ಟೆ ನಡೆದ ಪ್ರತಿಷ್ಠಿತ ಆಸ್ಕರ್ ಅವಾರ್ಡ್ಸ್ನಲ್ಲಿ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಬಂದ ಮೇಲೆ ರಾಮ್ ಚರಣ್ ಹಲವು ಸಂದರ್ಶನಗಳಲ್ಲಿ ಭಾಗವಹಿಸಿ ಆಸ್ಕರ್ ಕುರಿತು ತಮ್ಮ ಅನುಭವ ಹಾಗೂ ಪ್ರಶಸ್ತಿ ಗೆದ್ದದ್ದರ ಕುರಿತು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿಯೂ ಸಹ ಭಾಗವಹಿಸಿದ ರಾಮ್ ಚರಣ್ ನಾಟು ನಾಟು ಹಾಡಿಗೆ ಆಸ್ಕರ್ ಬಂದದ್ದರ ಕುರಿತು ಹಾಗೂ ಸಿನಿಮಾದ ಇತರೆ ವಿಷಯಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ನಿಲ್ಲಬೇಕೆಂದರೆ ಏನು ಮುಖ್ಯ ಎಂಬ ವಿಷಯದ ಬಗ್ಗೆ ಸಹ ಚರ್ಚೆ ನಡೆದಿದೆ. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಉದಾಹರಣೆಗೆ ತೆಗೆದುಕೊಂಡ ನಿರೂಪಕರು ಓರ್ವ ಬಸ್ ಡ್ರೈವರ್ ಮಗ ಇಂದು ಸ್ಟಾರ್ ಆಗಿದ್ದಾರೆ, ನೀವೂ ಸಹ ಸ್ಟಾರ್ ಆಗಿದ್ದೀರ ಎಂದು ಹೋಲಿಕೆ ರಾಮ್ ಚರಣ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ ಹಾಗೂ ಇದಕ್ಕೆ ರಾಮ್ ಚರಣ್ ನೀಡಿದ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಹೌದು, ನಿರೂಪಕರು 'ಐದಾರು ತಿಂಗಳ ಹಿಂದೆ ಇದೇ ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿದ್ದರು. ಆತ ಒಬ್ಬ ಬಸ್ ಡ್ರೈವರ್ನ ಮಗ. ಈಗ ನೀವು ಬಂದಿದ್ದೀರಿ, ನೀವು ಚಿರಂಜೀವಿ ಅವರ ಮಗ. ಈಗ ನೀವಿಬ್ಬರೂ ಸ್ಟಾರ್ಗಳಾಗಿದ್ದೀರ. ಪ್ರೇಕ್ಷಕರು ಒಪ್ಪಿಕೊಂಡರೆ ಮಾತ್ರ ನೀವು ಸೂಪರ್ ಸ್ಟಾರ್ ಆಗಲು ಸಾಧ್ಯ' ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ರಾಮ್ ಚರಣ್ 'ನಾನೂ ಸಹ ಯಶ್ ಅವರ ಎಪಿಸೋಡ್ ನೋಡಿದ್ದೇನೆ. ಅಂತಿಮವಾಗಿ ಪ್ರತಿಭೆ ಮಾತನಾಡುತ್ತೆ. ಆದ್ದರಿಂದ ಯಶ್ ಅವರು ಪ್ರತಿಭೆ ಇದ್ದ ಕಾರಣ ಇಂದು ಯಶಸ್ಸು ಸಾಧಿಸಿದ್ದಾರೆ. ಯಶ್ ಮಾತ್ರವಲ್ಲ ಯಾವ ನಟನಾದರೂ ಸಹ ಪ್ರತಿಭೆ ಇದ್ದರೆ ಮಾತ್ರ ಸೂಪರ್ ಸ್ಟಾರ್ ಆಗಲು ಸಾಧ್ಯ' ಎಂದು ಹೇಳಿಕೆ ನೀಡಿದ್ದಾರೆ.

ಈ ಮೂಲಕ ಯಾರಾದರೂ ಸರಿ ಟ್ಯಾಲೆಂಟ್ ಇದ್ದರೆ ಮಾತ್ರ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ನಿಲ್ಲಬಹುದು, ಸ್ಟಾರ್ ನಟನ ಮಗನಾಗಿ ಚಿತ್ರರಂಗ ಪ್ರವೇಶಿಸಿದರೂ ಸಹ ತನ್ನಲ್ಲಿ ಪ್ರತಿಭೆ ಇದ್ದರೆ ಮಾತ್ರ ಆ ನಟ ಸ್ಟಾರ್ ಆಗಲು ಸಾಧ್ಯ ಎಂಬುದನ್ನು ರಾಮ್ ಚರಣ್ ಹೇಳಿಕೊಂಡಿದ್ದಾರೆ.
ಇನ್ನು ಮೆಗಾಸ್ಟಾರ್ ಚಿರಂಜೀವಿ ಮಗನಾದ ರಾಮ್ ಚರಣ್ ಸಹ ಫ್ಯಾಮಿಲಿ ಬ್ಯಾಕ್ಗ್ರೌಂಡ್ನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ತಮ್ಮದೇ ಆದ ಟ್ಯಾಲೆಂಟ್ನಿಂದ ಬೆಳೆದು ನಿಂತವರು. ರಾಮ್ ಚರಣ್ ಮಾತ್ರವಲ್ಲದೇ ತೆಲುಗು ಇಂಡಸ್ಟ್ರಿಯ ಬಹುತೇಕ ನಟರದ್ದು ಇದೇ ಹಾದಿ. ಮಹೇಶ್ ಬಾಬು, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ರೀತಿಯ ದೊಡ್ಡ ಸ್ಟಾರ್ ನಟರೆಲ್ಲರೂ ಫ್ಯಾಮಿಲಿ ಬ್ಯಾಕ್ಗ್ರೌಂಡ್ನಿಂದ ಚಿತ್ರರಂಗ ಪ್ರವೇಶಿಸಿ ಈಗ ತಮ್ಮದೇ ಆದ ಸ್ವಂತ ಬ್ರಾಂಡ್ ಸೃಷ್ಟಿಸಿಕೊಂಡಿದ್ದಾರೆ.
ಇತ್ತ ಕನ್ನಡ ಚಿತ್ರರಂಗದಲ್ಲೂ ಸಹ ರಾಜ್ಕುಮಾರ್ ಪುತ್ರರಾದ ಶಿವ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಸ್ಟಾರ್ ನಟರ ಮಕ್ಕಳಾಗಿ ಎಂಟ್ರಿ ಕೊಟ್ಟು ತಮ್ಮದೇ ಬ್ರಾಂಡ್ ಸೃಷ್ಟಿಸಿಕೊಂಡಿದ್ದಾರೆ ಹಾಗೂ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಈ ರೀತಿ ಸ್ಟಾರ್ ನಟರ ಮಕ್ಕಳು ನಟರಾಗಿ ಚಿತ್ರರಂಗವನ್ನು ಪ್ರವೇಶಿಸುವುದನ್ನು ಕೆಲವರು ನೆಪೋಟಿಸಂ ಎಂಬ ಹೆಸರಿನಿಂದ ಟ್ರೋಲ್ ಮಾಡುತ್ತಾರೆ. ಅಂತಿಮವಾಗಿ ಪ್ರೇಕ್ಷಕ ಮಹಾಪ್ರಭು ಟ್ಯಾಲೆಂಟ್ ಇದ್ದವರನ್ನು ಮಾತ್ರ ಕೈಹಿಡಿಯಲಿದ್ದು, ಟ್ಯಾಲೆಂಟ್ ಇಲ್ಲದಿದ್ದರೆ ಸ್ಟಾರ್ ನಟರ ಮಕ್ಕಳೂ ಗೆಲ್ಲಲಾಗುವುದಿಲ್ಲ, ಹಣವಂತರ ಮಕ್ಕಳೂ ಸಹ ಸ್ಟಾರ್ಗಳಾಗಲು ಸಾಧ್ಯವಿಲ್ಲ. ಟ್ಯಾಲೆಂಟ್ ಈಸ್ ಕಿಂಗ್ ಅಷ್ಟೇ..


Click it and Unblock the Notifications











