ಅಶ್ವಿನಿ ಪುನೀತ್ ರಾಜ್ಕುಮಾರ್ ಕುರಿತ ಅವಹೇಳನಕಾರಿ ಪೋಸ್ಟ್ ನೋಡಿ ನಟ ದರ್ಶನ್ ಹೇಳಿದ್ದೇನು?
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕುರಿತು ಕಿಡಿಗೇಡಿಯ ಅವಹೇಳಕಾರಿ ಪೋಸ್ಟ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೀಗ ಈ ಪೋಸ್ಟ್ ವಿಚಾರ ನಟ ದರ್ಶನ್ ಗಮನಕ್ಕೂ ಬಂದಿದೆ. ಸದ್ಯ ನಟ ದರ್ಶನ್ ಎಡಗೈಗೆ ಶಸ್ತ್ರಚಿಕಿತ್ಸೆ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ.
'ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್ಸಿಬಿ ಪದೇ ಪದೆ ಸೋಲುತ್ತಿದೆ" ಎಂದು ಕಿಡಿಗೇಡಿಯೊಬ್ಬ ಮಾಡಿರುವ ಪೋಸ್ಟ್ ಸಖತ್ ವೈರಲ ಆಗುತ್ತಿದೆ. ಆ ಪೋಸ್ಟ್ನಲ್ಲಿ ಬಳಸಿರುವ ಪದಗಳು ಬಹಳ ಕೀಳುಮಟ್ಟದ್ದಾಗಿದ್ದು ಈ ಬಾರಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಫ್ಯಾನ್ಸ್ ವಾರ್ ಏನೇ ಇದ್ದರೂ ಇಷ್ಟು ಕೀಳುಮಟ್ಟಕ್ಕಿಳಿದು ಕಾಮೆಂಟ್ ಮಾಡುವುದು ಸರಿಯಲ್ಲ. ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಇಂತಹ ಅವಹೇಳಕಾರಿ ಪೋಸ್ಟ್ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತವಾಗುತ್ತಿದೆ.

'ಗಜಪಡೆ' ಹೆಸರಿನ ಟ್ವಿಟರ್ ಪೇಜ್ನಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಆಗಿದೆ. ನಟ ದರ್ಶನ್ ಅಭಿಮಾನಿ ಪೋಸ್ಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಾಗಾಗಿ ಅಪ್ಪು ಅಭಿಮಾನಿಗಳು ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಸದ್ಯ ಈ ಪೋಸ್ಟ್ ಬಗ್ಗೆ ಡಿ ಕಂಪನಿ ತಂಡದ ಪ್ರಮುಖ ಅಡ್ಮಿನ್ ಹಾಗೂ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ(ರಿ)ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನೀತ್ ದರ್ಶನ್ ಗೌಡ್ರು ಫಿಲ್ಮಿಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಈ ಪೋಸ್ಟ್ ನಟ ದರ್ಶನ್ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಫೋನ್ ಮಾಡಿ ಮಾತನಾಡಿ ಬೇಸರ ವ್ಯಕ್ತಪಡಿಸಿದರು. ಯಾರೇ ಆಗಿದ್ದರೂ ಈ ರೀತಿ ಮಾಡುವುದು ತಪ್ಪು. ಇದು ಯಾರು ಮಾಡಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಿ. ಬೇರೆ ಯಾರೋ ಮಾಡಿ ನಮ್ಮ ಮೇಲೆ ಹೇಳುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿ" ಎಂದು ದರ್ಶನ್ ಹೇಳಿರುವುದಾಗಿ ಪುನೀತ್ ತಿಳಿಸಿದ್ದಾರೆ.
"ಸೋಶಿಯಲ್ ಮೀಡಿಯಾವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ತಪ್ಪಾಗಿ ಅದನ್ನು ಬಳಸಬಾರದು. ಯಾರಾದರೂ ಏನಾದರೂ ಹೇಳಿದರೆ ಅದಕ್ಕೆ ಉತ್ತರಿಸಲು ಸೋಶಿಯಲ್ ಮೀಡಿಯಾ ಬಳಸಬಾರದು ಎಂದಿದ್ದಾರೆ" ಎಂದು ಪುನೀತ್ ವಿವರಿಸಿದ್ದಾರೆ.
ಏಪ್ರಿಲ್ 3ರಂದು ಮೊದಲಿಗೆ 'ಗಜಪಡೆ' ಹೆಸರಿನ ಟ್ವಿಟರ್ ಪೇಜ್ನಿಂದಲೇ ಪೋಸ್ಟ್ ಆಗಿತ್ತು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸುದೀಪ್ ಅಭಿಮಾನಿ ಎಂದು ಪೇಜ್ ಹೆಸರು ಹಾಗೂ ಡಿಪಿ ಬದಲಿಸಲಾಗಿತ್ತು. ಆದರೂ ಕೆಲವರು ಅಸಲಿ ಪೋಸ್ಟ್ ಸ್ಕ್ರೀನ್ ಶಾಟ್ ತೆಗೆದು ವೈರಲ್ ಮಾಡುತ್ತಿದ್ದಾರೆ. ಕ್ಷಮೆಗೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆಯೂ ದರ್ಶನ್ ಅಭಿಮಾನಿ ಪುನೀತ್ ಮಾತನಾಡಿದ್ದಾರೆ.
"ಆತ ಯಾರು ಎನ್ನುವುದು ನಮಗೂ ಗೊತ್ತಿಲ್ಲ. ಆತನ ಟ್ವಿಟ್ಟರ್ ಖಾತೆಯ ಹೆಸರು ಬದಲಾಗಿದೆ. ಯಾರ್ಯಾರೋ ಫೇಕ್ ಖಾತೆ ಸೃಷ್ಟಿಸಿ ಈ ರೀತಿ ಪೋಸ್ಟ್ ಮಾಡುತ್ತಾರೆ. ಎಲ್ಲವನ್ನು ದರ್ಶನ್ ಅಭಿಮಾನಿಗಳ ಮೇಲೆ ಹಾಕುತ್ತಾರೆ" ಎಂದು ದರ್ಶನ್ ಅಭಿಮಾನಿ ಪುನೀತ್ ಹೇಳಿದ್ದಾರೆ.

ಇನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಕುರಿತಾಗಿ ಕೀಳುಮಟ್ಟದ ಪೋಸ್ಟ್ ವೈರಲ್ ಬೆನ್ನಲ್ಲೇ ಕೆಲವರು ವಿಜಯಲಕ್ಷ್ಮಿ ದರ್ಶನ್ ಹಾಗೂ ಮೀನಾ ತೂಗುದೀಪ ಬಗ್ಗೆಯೂ ಇದೇ ರೀತಿಯ ಪದಗಳನ್ನು ಬಳಸಿ ಪೋಸ್ಟ್ ಮಾಡುತ್ತಿದ್ದಾರೆ. ಆ ಬಗ್ಗೆ ದರ್ಶನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications










