ಟಾಲಿವುಡ್ ನಲ್ಲಿ ಅಬ್ಬರಿಸಲಿದ್ದಾರೆ 'ಆ ದಿನಗಳು' ಚೇತನ್
Recommended Video

'ಆ ದಿನಗಳು' ಖ್ಯಾತಿಯ ನಟ ಚೇತನ್ ಈಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಚೇತನ್ ಈಗ ತೆಲುಗು ಚಿತ್ರಪ್ರಿಯರ ಮನಗೆಲ್ಲಲು ಸಜ್ಜಾಗಿದ್ದಾರೆ.
ಅಥಿರತ ಚಿತ್ರದ ನಂತರ ಚೇತನ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿಲ್ಲ. ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿರುವ ಚೇತನ್ ಅತ್ತ ಕಡೆಯೇ ಹೆಚ್ಚು ಗಮನ ಹರಿಸುತ್ತಿದ್ದರು. ಹೋರಾಟಗಳ ನಡುವೆಯೂ ಸಿನಿಮಾ ಮಾಡುವುದನ್ನ ಬಿಡದ ನಟ ಬಣ್ಣದ ಲೋಕದ ಜೊತೆಯೂ ಸಾಗುತ್ತಿದ್ದಾರೆ.
ಚೇತನ್ ಅಭಿನಯದ ಸಿನಿಮಾಗಳ ಸಂಖ್ಯೆ ಕಮ್ಮಿ ಇದ್ದರು ತೂಕವಾದ ಪಾತ್ರ ಮತ್ತು ಒಂದೊಳ್ಳೆ ಸಂದೇಶ ನೀಡುವ ಸಿನಿಮಾಗಳಾಗಿರುತ್ತವೆ. ಇತ್ತೀಗಷ್ಟೇ ಚೇತನ್ ಅಭಿನಯದ ಮುಂದಿನ ಸಿನಿಮಾ 'ರಣಂ' ಘೋಷಣೆಯಾಗಿತ್ತು. ಇದೇ ಸಿನಿಮಾ ಮೂಲಕ ಚೇತನ್ ತೆಲುಗು ಚಿತ್ರಂಗಕ್ಕೆ ಕಾಲಿಡುತ್ತಿದ್ದಾರೆ. 'ರಣಂ' ಚಿತ್ರದಲ್ಲಿ ಚೇತನ್ ಇದುವರೆಗೂ ಕಾಣಿಸಿಕೊಳ್ಳದಂತಹ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಮುಂದೆ ಓದಿ....

ವಿ.ಸಮುದ್ರ ನಿರ್ದೇಶನದಲ್ಲಿ ಚೇತನ್
'ರಣಂ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಚೇತನ್ ಗೆ ಟಾಲಿವುಡ್ ನಿರ್ದೇಶಕ ವಿ ಸಮುದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನಲ್ಲಿ 20ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿರುವ ವಿ ಸಮುದ್ರ, 'ರಣಂ' ಮೂಲಕ ಕನ್ನಡ ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಅಂದ್ರೆ 'ರಣಂ' ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲು ತಯಾರಾಗುತ್ತಿದೆ

ಆಕ್ಷನ್ ಹೀರೋ ಆಗಿ ಮಿಂಚಿಂಗ್
'ರಣಂ' ಟೈಟಲ್ ಹೇಳುವ ಹಾಗೆ ಇದೊಂದು ಮಾಸ್ ಸಿನಿಮಾ. ಆಕ್ಷನ್ ಹೀರೋ ಆಗಿ ಚೇತನ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಲುಕ್ ರಿವೀಲ್ ಆಗಿದ್ದು ಚೇತನ್ ಉದ್ದ ಕೂದಲು ಮತ್ತು ಉದ್ದ ದಾಡಿ ಬಿಟ್ಟು ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಚೇತನ್ ಇದುವರೆಗೂ ಕಾಣಿಸಿಕೊಳ್ಳದಂತಹ ಗೆಟಪ್ ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ರೋಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚಾಗಿ ಮಿಂಚುತ್ತಿದ್ದ ಚೇತನ್ ಈ ಬಾರಿ ಮಾಸ್ ಲುಕ್ಕಲ್ಲಿ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಚೇತನ್ ಬದುಕಿಗೆ ಹತ್ತಿರವಾದ ಸಿನಿಮಾ
ವಿಶೇಷ ಅಂದ್ರೆ 'ರಣಂ' ಸಿನಿಮಾ ನಟ ಚೇತನ್ ಬದುಕಿಗೆ ತುಂಬ ಹತ್ತಿರವಾದ ಸಿನಿಮಾ ಅಂತೆ. ಚೇತನ್ ನೈಜ ಬದುಕಿನ ಹಾಗೆ ಸಿನಿಮಾದಲ್ಲೂ ಸಾಮಾಜಿಕ ಹೋರಾಟ, ರೈತಪರ ಕಾಳಜಿ ಇರುವಂತಹ ನಾಯಕನ ಪಾತ್ರ ಇದಾಗಿದೆಯಂತೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುವ ಚೇತನ್ ಈ ಬಾರಿ ಕೂಡ ಒಂದು ತೂಕದ ಪಾತ್ರದ ಮೂಲಕ ಬರ್ತಿದ್ದಾರೆ.

ಚೇತನ್ ಗೆ ವರಲಕ್ಷ್ಮಿ ನಾಯಕಿ
'ರಣಂ'ನಲ್ಲಿ ಚೇತನ್ ಗೆ ನಾಯಕಿಯಾಗಿ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ವರಲಕ್ಷ್ಮಿ ಕೂಡ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಜೊತೆ 'ಮಾಣಿಕ್ಯ' ಚಿತ್ರದಲ್ಲಿ ಅಭಿನಯಿಸಿದ್ದ ವರಲಕ್ಷ್ಮಿ ನಂತರ ಅರ್ಜುನ್ ಸರ್ಜಾ ಅಭಿನಯದ 'ವಿಸ್ಮಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ 'ರಣಂ' ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ.

ಪ್ರಮುಖ ಪಾತ್ರದಲ್ಲಿ ಚಿರುಸರ್ಜಾ
ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಪ್ರಮುಖ ಪಾತ್ರದಲ್ಲಿ ನಟ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಚಿರು ಈ ಸಿನಿಮಾ ಮೂಲಕ ತೆಲುಗಿನಲ್ಲೂ ಮಿಂಚಲಿದ್ದಾರೆ. ಅಂದ್ಹಾಗೆ 'ರಣಂ' ಬಿಗ್ ಬಜೆಟ್ ನ ಸಿನಿಮಾವಾಗಿದ್ದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ.


Click it and Unblock the Notifications











