ಒಂದೇ ಸೂರಿನಡಿ ಅಪ್ಪು - ಅಂಬಿಗೆ ಪೂಜೆ; ಇದು ಅಭಿಮಾನದ ದೇವಸ್ಥಾನ
ಅಂಬರೀಶ್ ಹಾಗೂ ಪುನೀತ್ ರಾಜ್ ಕುಮಾರ್ ಈ ಇಬ್ಬರು ಖ್ಯಾತ ನಟರು ಇಂದು ನಮ್ಮೊಂದಿಗಿಲ್ಲ. ಆದರೆ ಈ ಇಬ್ಬರು ನಟರ ನೆನಪು ಮಾತ್ರ ಇಂದಿಗೂ ಅಭಿಮಾನಿಗಳನ್ನು ಕಾಡುತ್ತಿದೆ.
ಅನೇಕ ಅಭಿಮಾನಿಗಳು ಈ ನಟರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ತಾವೂ ಸಹ ಮಾಡುವುದರ ಮೂಲಕ ಇನ್ನೂ ತಮ್ಮ ನೆಚ್ಚಿನ ನಟರನ್ನು ಜೀವಂತವಾಗಿರಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಇನ್ನೂ ಕೆಲವರು ಈ ನಟರುಗಳ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ಆರಾಧಿಸುತ್ತಿದ್ದಾರೆ. ಅದೇ ರೀತಿ ಮಂಡ್ಯದ ಅಭಿಮಾನಿಯೋರ್ವ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಗಳನ್ನು ಸ್ಥಾಪಿಸಿ ಪುಟ್ಟ ಗುಡಿಯೊಂದನ್ನು ಕಟ್ಟಿ ಪೂಜಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಅಂಬಿ - ಅಪ್ಪು ಗುಡಿಯನ್ನು ಉಮೇಶ್ ಸಿ ಎಂಬ ಅಭಿಮಾಬಿ ಸ್ಥಾಪಿಸಿದ್ದು, ಈ ಗುಡಿಯ ಚಿತ್ರ ದಿವಂಗತ ಅಂಬರೀಶ್ ಅವರ ನಾಲ್ಕನೇ ವರ್ಷದ ಪುಣ್ಯತಿಥಿಯಂದು ( ನವೆಂಬರ್ 24 ) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಲಿಯುಗ ಕರ್ಣರಾದ ಈ ಇಬ್ಬರು ನಟರ ಪುತ್ಥಳಿಗಳನ್ನು ಒಂದೇ ಸೂರಿನಡಿ ನಿರ್ಮಿಸಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಇನ್ನು ಅಂಬರೀಶ್ ನಾಲ್ಕನೇ ವರ್ಷದ ಪುಣ್ಯತಿಥಿ ಪ್ರಯುಕ್ತ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸ್ಮಾರಕಕ್ಕೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ಸ್ಮಾರಕದ ದರ್ಶನ ಪಡೆದು, ನಮಸ್ಕರಿಸಿ ಅಗಲಿದ ನೆಚ್ಚಿನ ನಟನನ್ನು ಮತ್ತೆ ನೆನೆದರು. ಇನ್ನು ಅಂಬಿ ಸ್ಮಾರಕದ ದರ್ಶನ ಪಡೆದ ಅಭಿಮಾನಿಗಳು ಪಕ್ಕದಲ್ಲೇ ಇರುವ ಪುನೀತ್ ರಾಜ್ ಕುಮಾರ್, ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸ್ಮಾರಕಗಳಿಗೂ ಭೇಟಿ ನೀಡಿ ದರ್ಶನ ಪಡೆದರು.


Click it and Unblock the Notifications











