ಹೂ ತರ ಇದ್ಲು, ಹೂಕೋಸು ತರ ಆಗೋದ್ಲು ; ಲವ್ ಮಾಕ್ಟೇಲ್ನಲ್ಲಿ ನನ್ನ ದೇಹಾಕೃತಿ ಹಂಗಿಸಿದರು- ಗೀತಾ ಭಾರತಿ ಭಟ್ ಭಾವುಕ
ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ.
ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೂಡ ಮಾಡುತ್ತಾರೆ. ಮತ್ತೂ ಕೆಲ ಒಮ್ಮೆ ವಿರಳಾತಿ ವಿರಳ ಸಂದರ್ಭದಲ್ಲಿ ಜಾಗೃತಿ ಮೂಡಿಸಬೇಕಾದ ಚಿತ್ರರಂಗದವರೇ ಮಹಿಳೆಯ ದೇಹಾಕೃತಿಯನ್ನು ಟೀಕಿಸುತ್ತಾರೆ. ಉದಾಹರಣೆಗೆ ''ಲವ್ ಮಾಕ್ಟೇಲ್'' ಸಿನಿಮಾ ಮತ್ತು ಗೀತಾ ಭಟ್ ಅವರನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಿ.

ಹೌದು, ''ಲವ್ ಮಾಕ್ಟೇಲ್''.. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಕನಸಿನ ಕೂಸು. ಹೆಚ್ಚು ಕಡಿಮೆ ಐದು ವರ್ಷದ ಹಿಂದೆ ತೆರೆಗೆ ಬಂದ ಈ ಚಿತ್ರ ಹಲವು ದಾಖಲೆಗಳನ್ನು ಬರೆದಿತ್ತು. ಕೊರೊನಾ ಕಾರಣದಿಂದ ಹೈರಾಣಾಗಿ ಮನೆಯಲ್ಲಿ ಕುಂತಿದ್ದ ಹಲವರ ಮನ ತಣಿಸಿತ್ತು. ಇದೇ ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಿದ್ದರು ''ಬ್ರಹ್ಮಗಂಟು'' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್.
ಸದ್ಯ ಈ ಚಿತ್ರ ತೆರೆಗೆ ಬಂದು ಹೋಗಿ ಐದು ವರ್ಷಗಳಾಗಿವೆ. ಇದರ ನಡುವೆ ಎರಡನೇ ಭಾಗ ಕೂಡ ಬಿಡುಗಡೆಯಾಗಿದ್ದು ಮೂರನೇ ಭಾಗದ ತಯಾರಿಯನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಾಡುತ್ತಿದ್ದಾರೆ. ಹೀಗಿರುವಾಗ ದಿಗ್ಗನೆ ಎದ್ದು ಬಂದ ಗೀತಾ ಭಾರತಿ ಭಟ್ ನನಗೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ''ಲವ್ ಮಾಕ್ಟೇಲ್'' ಚಿತ್ರದಲ್ಲಿ ಬಾಡಿ ಶೇಮಿಂಗ್ ಮಾಡಲಾಗಿದೆ ಎಂದು ಹೇಳಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕುತ್ತಲೇ ಆ ಚಿತ್ರ ಮಾಡಲೇಬಾರದಿತ್ತು ಎಂಬರ್ಥದಲ್ಲಿ ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ.
ಈ ಕುರಿತು ''ರಾಜೇಶ್ ಗೌಡ'' ಅವರಿಗೆ ನೀಡಿದ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ಗೀತಾ ಭಾರತಿ ಭಟ್ ಅದು ''ಲವ್ ಮಾಕ್ಟೇಲ್'' ಎನ್ನುವ ಸಿನಿಮಾ. ಆ ಸಿನಿಮಾ ಮಾಡಿದಾಗ ನನಗೆ ವ್ಯೆಯಕ್ತಿಕವಾಗಿ ಬಾಡಿ ಶೇಮಿಂಗ್ ಅನುಭವ ಆಯ್ತು ಎಂದು ಹೇಳಿದ್ದಾರೆ.
ಆ ಚಿತ್ರದಲ್ಲಿ ನಾನೊಂದು ಪಾತ್ರ ಮಾಡಿದ್ದೆ, ಒಂದು ದೃಶ್ಯದಲ್ಲಿ ಒಂದು ಡೈಲಾಗ್ ಬರುತ್ತೆ. ''ಹೂವು ತರ ಇದ್ದಳು ಹೂಕೋಸು ತರ ಆಗೋದಳು'' ಎನ್ನುವ ಡೈಲಾಗ್ ಅದು ಎಂದು ಹೇಳಿರುವ ಗೀತಾ ಭಟ್ ಆ ಕ್ಷಣದಲ್ಲಿ ನನಗೆ ಮುಖಕ್ಕೆ ಹೊಡೆದಂತೆ ಬಾಡಿ ಶೇಮಿಂಗ್ ಮಾಡಿದಂತಾಯ್ತು ಎಂದು ಹೇಳಿದ್ದಾರೆ. ಬಾಡಿ ಶೇಮಿಂಗ್ ಮಾಡಲು ನಾನ್ಯಾಕೆ ಅನುಮತಿ ನೀಡಿದೆ, ಆ ಪಾತ್ರ ಮಾಡುವ ಅವಶ್ಯಕತೆಯಾದರೂ ನನಗೇನು ಇತ್ತು ಎನ್ನುವ ಪ್ರಶ್ನೆ ನನಗೆ ಈಗಲೂ ಕಾಡುತ್ತೆ ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಈ ಬಾಡಿ ಶೇಮಿಂಗ್ ನನ್ನ ಜೀವನದಲ್ಲಿ ಬಂದ ಅತಿಥಿ ತರ ಆಗಿದೆ. ನಿಜ ಹೇಳಬೇಕು ಅದರೆ ಈಗಲೂ ಆ ಅತಿಥಿ ನನ್ನ ಜೊತೆ ಇದೆ ಎಂದು ಹೇಳಿರುವ ಗೀತಾ ಭಾರತಿ ಭಟ್ಈ ಮೂಲಕ ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ. ಆಸೆ ಪಟ್ಟು ಸಿಹಿ ತಿಂಡಿ ಕೇಳುವ ಹಾಗೇ ಇಲ್ಲ ಎಂದು ಬಿಕ್ಕಿದ್ದಾರೆ. ದಪ್ಪಗೆ ಇರೋರು ಈ ಭೂಮಿ ಮೇಲೇನೆ ಇರಬಾರದು. ಅವರು ಹೋಗಿ ಬಿಡ್ಬೇಕು ಅನ್ನುವ ಹಾಗೇನೆ ಮಾತಾಡ್ತಾರೆ, ಜನ ಕೂಡ ಹಾಗೇ ಇದ್ದಾರೆ. ಸ್ವಲ್ಪ ದಪ್ಪ ಆಗೋ ಹಾಗಿಲ್ಲ. "ಏನ್ ಮ್ಯಾಡಂ ದಪ್ಪ ಆಗಿಬಿಟ್ಟಿದ್ದೀರಾ ಎಂದು ಕೇಳ್ತಾರೆ ಎಂದು ತಮ್ಮ ಮನದ ಬೇಸರವನ್ನು ಗೀತಾ ಭಾರತಿ ಭಟ್ ಹೊರ ಹಾಕಿದ್ದಾರೆ.
ಗೀತಾ ಭಾರತಿ ಭಟ್ ಅವರ ಈ ಮನದ ಮಾತುಗಳಿಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ಮುಂದೆ ಈ ಕುರಿತು ಪ್ರಶ್ನೆ ಎದುರಾಗಿಯೇ ಆಗಲಿದೆ. ಆಗ ಗೀತಾ ಭಟ್ ಅವರ ಈ ಮಾತುಗಳಿಗೆ ಇಬ್ಬರು ಉತ್ತರ ಕೊಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











