ದೇಶದ ವ್ಯವಸ್ಥೆ ಬದಲಾಯಿಸಲು ಸಿನಿಮಾ ಮಾಡಿದ ರೈತ
ಇಂದಿನ ರಾಜಕೀಯ ವ್ಯವಸ್ಥೆ ಹಾಳಾಗಿದೆ, ಪ್ರಜಾಪ್ರಭುತ್ವ ಸರಿಯಲ್ಲ. ರಾಜಕಾರಣಿಗಳು ಭ್ರಷ್ಟಚಾರಿಗಳಾಗಿದ್ದಾರೆ. ಚುನಾವಣೆ ಬಂತಂದ್ರೆ, ಹಣ, ಎಣ್ಣೆ, ಹೆಣ್ಣಿಗೆ ದಾಸರಾಗುತ್ತಿದ್ದಾರೆ. ಹಣವಿದ್ದರೇ ಮಾತ್ರ ಎಲೆಕ್ಷನ್ ಎಂಬ ಆರೋಪ, ಅಪವಾದ ಎಲ್ಲವೂ ಇದೆ. ಇಂತಹ ವ್ಯವಸ್ಥೆಯನ್ನ ಬದಲಾಯಿಸಲು ಯಾರೂ ಮುಂದಾಗಲಿಲ್ಲ. ಆದ್ರೆ, ಇಲ್ಲೊಂದು ಚಿತ್ರತಂಡ ತಮ್ಮಿಂದ ಸಾಧ್ಯವಾದಷ್ಟು ಬದಲಿಸುತ್ತೇವೆ ಎಂದು ಒಂದು ಸಿನಿಮಾ ಮಾಡಿದ್ದಾರೆ. ಆ ಚಿತ್ರ ಇದೇ ವಾರ ತೆರೆಕಾಣುತ್ತಿದೆ.
ಪ್ರಜಾಪ್ರಭುತ್ವವನ್ನ ಸರಿ ಮಾಡಬೇಕು ಎಂಬ ಆಶಯದಲ್ಲಿ ತಯಾರಾಗಿರುವ ಚಿತ್ರ 'ಆ ಒಂದು ದಿನ'. ಈ ಚಿತ್ರದಲ್ಲಿ ಪ್ರಸ್ತುತ ರಾಜಕೀಯ, ರಾಜಕಾರಣಿಗಳ ನಿಜಬಣ್ಣವನ್ನ ಬಯಲು ಮಾಡಲಾಗಿದೆ. ಜನರಿಗೆ ತಿಳಿವಳಿಕೆ ನೀಡುವ ದೃಷ್ಠಿಯಲ್ಲಿ ಚಿತ್ರಕತೆ ಮಾಡಲಾಗಿದೆ.

ಧಾರವಾಡ ಮೂಲದ ಬಾಂಬೆಯಲ್ಲಿ ಡಾನ್ಸರ್ ಆಗಿರುವ ಸಿಮ್ರಾನ್ ಈ ಚಿತ್ರದ ನಾಯಕಿ. ರವೀಂದ್ರಗೌಡ ಎನ್.ಪಾಟೀಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ನಿರ್ದೇಶಕ ಸಂಜಯ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀಹರ್ಷ ಅವರ ಸಂಗಿತವಿದೆ. ಒಂದು ಹಳ್ಳಿ, ಆ ಹಳ್ಳಿಯಲ್ಲಿ ನಡೆಯುವ ಚುನಾವಣೆಯ ಭರಾಟೆ. ಅಲ್ಲಿನ ಗೌಡರ ನಡುವೆ ನಡೆಯುವ ಜಿದ್ದಾ ಜಿದ್ದಿ ಸ್ಪರ್ಧೆ. ಹಳ್ಳಿಯಲ್ಲಿರುವ ಎರಡು ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯಗಳು ಏನೆಲ್ಲ ಅನಾಹುತಗಳಿಗೆ ಎಡೆಮಾಡಿಕೊಡುತ್ತದೆ ಎನ್ನುವುದೇ ಚಿತ್ರದ ಕಥೆ.

ಅಂದ್ಹಾಗೆ, ಈ ಸಿನಿಮಾ ನಿರ್ಮಾಣ ಮಾಡಿರುವುದು ರವೀಂದ್ರ ಗೌಡ ಪಾಟೀಲ್. ರಿಯಲ್ ಎಸ್ಟೇಟ್ ಉದ್ಯಮಿಗಳು ಸಿನಿಮಾ ಮಾಡುತ್ತಿರುವ ಈ ಕಾಲದಲ್ಲಿ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರೊಬ್ಬರು ಸಿನಿಮಾ ಮಾಡಿರುವುದು ನಿಜಕ್ಕೂ ವಿಶೇಷವೇ ಸರಿ. ಮೂಲತಃ ಕೃಷಿಕರಾಗಿದ್ದ ರವೀಂದ್ರ ಗೌಡ ಪಾಟೀಲ್ 'ಆ ಒಂದು ದಿನ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ದೇಶಕ್ಕೆ ಏನಾದರೂ ಮಾಡಬೇಕು ಎಂಬ ಆಸೆ ಹೊಂದಿರುವ ಇವರು ಈ ಸಿನಿಮಾ ಮೂಲಕ ಒಂದು ಒಳ್ಳೆಯ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.

ನಿರೀಕ್ಷೆಯಂತೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಫೆಬ್ರವರಿ 2 ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನೇನೂ ಕೆಲವು ತಿಂಗಳಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಎಲೆಕ್ಷನ್ ಗೂ ಮುಂಚೆ ಈ ಚಿತ್ರವನ್ನ ಒಮ್ಮೆ ನೋಡಿ. ಬಹುಶಃ ನಿಮ್ಮಲ್ಲೇನಾದರೂ ಬದಲಾವಣೆ ಮೂಡಬಹುದು.


Click it and Unblock the Notifications











