'ಗ್ಲೋಬಲ್' ಸಿನಿಮಾ 'ಮಾರ್ಟಿನ್' ಮೇಲೆ ಪರಿಣಾಮ ಬೀರಿದ 'ಲೋಕಲ್' ಗಲಾಟೆ, ಚಿತ್ರದಿಂದ ಡೈರೆಕ್ಟರ್ ಎಪಿ ಅರ್ಜುನ್ ಔಟ್...!
ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಇನ್ನೇನು ಈ ಅಕ್ಟೋಬರ್ ಹನ್ನೊಂದಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ನಿರೀಕ್ಷೆಗಳಿವೆ. ಚಿತ್ರ ಗೆಲ್ಲುತ್ತೆ ಎನ್ನುವ ಭರವಸೆ ಕೂಡ ಗಾಂಧಿನಗರಕ್ಕಿದೆ. ಆದರೆ, ದುರಂತ.. ಈ ಸಮಯದಲ್ಲಿ ಜೊತೆಯಾಗಿರಬೇಕಿದ್ದ ತಂಡದಲ್ಲಿ ಬಿರುಕು ಮೂಡಿದೆ. ಚಿತ್ರದ ಪ್ರಚಾರದಿಂದ ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅವರನ್ನೇ ದೂರ ಇಡಲಾಗಿದೆ.
ಹೌದು, ನಿಮಗೆ ನೆನಪಿದ್ದರೆ.. ಕಳೆದ ಕೆಲ ದಿನಗಳ ಹಿಂದೆ ಮಾರ್ಟಿನ್ಗೆ ಮಹಾದ್ರೋಹ ಎಸೆಯಲಾದ ವಿಚಾರ ಜಗಜ್ಜಾಹೀರಾಗಿತ್ತು. ಚಿತ್ರದ ಹೆಸರಿನಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಅವರಿಗೆ ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ ಅವರಿಂದನೇ ಮೋಸವಾಗಿದೆ ಎನ್ನುವ ಸುದ್ದಿ ಹೊರ ಬಂದಿತ್ತು. ಬರೀ ಸಿಜಿ ವಿಎಫ್ ಎಕ್ಸ್ ಒಂದರಲ್ಲೇ ಎಪ್ಪತ್ತಮೂರು ಲಕ್ಷ ಅವ್ಯವಹಾರ ನಡೆದಿದೆ ಅಂದರೆ, ನೂರು ಕೋಟಿ ಬಜೆಟ್ಟಿನ ಮಾರ್ಟಿನ್ ಹೆಸರಲ್ಲಿ ಇನ್ನೂ ಎಲ್ಲೆಲ್ಲಿ, ಯಾರೆಲ್ಲಾ ಬಗೆದು ಮುಕ್ಕಿದ್ದಾರೋ ಏನೋ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಅನೇಕರನ್ನು ಕಾಡಿತ್ತು. ಚಿತ್ರವನ್ನು ನಿರ್ದೇಶಿಸಲು ಒಂದು ಕೋಟಿ ಎಂಭತ್ತು ಲಕ್ಷ ರೂಪಾಯಿ ಸಂಭಾವನೆ ಸಂದಾಯ ಮಾಡಲಾಗಿದೆಯಂತೆ. ಸಿನಿಮಾದ ಗಳಿಕೆಯಿಂದ ಬಂದ ಹಣದಲ್ಲೂ ಹದಿನೆಂಟು ಪರ್ಸೆಂಟ್ ಬರೆದುಕೊಟ್ಟಿದ್ದಾರಂತೆ ಆದರೂ ಎ.ಪಿ.ಅರ್ಜುನ್ ಅವರ ಹಣದ ದಾಹಕ್ಕೆ ಇಡೀ ಚಿತ್ರ ಬಲಿ ಆಯಿತು ಎಂಬ ಮಾತು ಕೂಡ ಕೇಳಿ ಬಂತು.ಮುಂದುವರೆದು ಒಂದು ವರ್ಗ ಎ.ಪಿ.ಅರ್ಜುನ್ ಅವರಿಗೆ ಕಮಿಷನ್ ಡೈರೆಕ್ಟರ್ ಎಂಬ ಬಿರುದನ್ನೂ ಕೂಡ ನೀಡಿತ್ತು.

ಸದ್ಯದ ಸಮಾಚಾರ ಏನೆಂದರೆ ಈ ಎಲ್ಲ ವಾದ ವಿವಾದಗಳಿಂದ ನಿರೀಕ್ಷಿಸಿದಂತೆ ನಿರ್ಮಾಪಕ ಉದಯ್ ಮೆಹ್ತಾ ಮತ್ತು ಎಪಿ ಅರ್ಜುನ್ ನಡುವೆ ಸಂಬಂಧ ಹಳಸಿದೆ. ಇದಕ್ಕೆ ಸ್ಪಷ್ಟವಾದ ಕೈಗನ್ನಡಿ ಎಂಬಂತೆ ಮಾರ್ಟಿನ್ ಚಿತ್ರದ ಪ್ರಚಾರದಿಂದ ಎಪಿ ಅರ್ಜುನ್ ಅವರನ್ನು ದೂರ ಇಡುವ ತೀರ್ಮಾನಕ್ಕೆ ಇಡೀ ತಂಡ ಬಂದಿದೆ. ಈ ಕುರಿತು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಿರ್ಮಾಪಕ ಉದಯ್ ಮೆಹ್ತಾ ವಿಚಾರ ನ್ಯಾಯಾಲಯದಲ್ಲಿದೆ ಬಹಿರಂಗವಾಗಿ ಈಗ ನಾನೇನು ಮಾತನಾಡಲಾರೆ ಎಂದಿದ್ದಾರೆ. ಚಿತ್ರ ಬಿಡುಗಡೆಯಾಗಲಿ ಆ ನಂತರ ನಾನು ಮಾತನಾಡುತ್ತೇನೆ ಎಂದಿದ್ದಾರೆ. ತಮ್ಮದೇ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಎಪಿ ಅರ್ಜುನ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು ಆದರೆ ಆ ಅರ್ಜಿ ವಜಾ ಆಗಿದೆ ಎಂದು ಹೊಸ ಬಾಂಬ್ ಕೂಡ ಉದಯ್ ಮೆಹ್ತಾ ಸಿಡಿಸಿದ್ದಾರೆ.
ಇನ್ನೂ ಧ್ರುವಾ ಮತ್ತು ಎಪಿ ಅರ್ಜುನ್ ಮೊದಲಿಂದ ಗಳಸ್ಯ ಕಂಠಸ್ಯ ಸ್ನೇಹಿತರು. ಆದರೆ ಈಗ ಸ್ನೇಹಿತರ ಕನಸೊಂದು ನನಸಾಗುತ್ತಿದೆ. ಈ ಸಮಯದಲ್ಲಿ ತಮ್ಮ ಸ್ನೇಹಿತನನ್ನೂ ನಿರ್ಮಾಪಕ ದೂರ ಮಾಡಿದ್ದಾರೆ. ಈ ಕಾರಣಕ್ಕೆ ನಿರ್ಮಾಪಕ ಮತ್ತು ನಿರ್ದೇಶಕರ ಈ ಕಲಹದಿಂದ ಧ್ರುವ ಮತ್ತು ಎ ಪಿ ಅರ್ಜುನ್ ನಡುವೆ ಸಂಬಂಧ ಕೂಡ ಬಿರುಕು ಮೂಡಿರಬಹುದು ಎನ್ನುವ ಅನುಮಾನ ಅನೇಕರದ್ದು. ಇದಕ್ಕೆ ಉತ್ತರವನ್ನು ನೀಡಿರುವ ಧ್ರುವ ಸರ್ಜಾ ನಿರ್ದೇಶಕ ಮತ್ತು ನಿರ್ಮಾಪಕರ ನಡುವೆ ಇರುವ ಮನಸ್ತಾಪದ ಕಥೆ ಎಲ್ಲರಿಗೆ ಗೊತ್ತಿರುವಂತಹದ್ದೇ ಎಂದಿದ್ದಾರೆ. ವಿಷಯ ನ್ಯಾಯಾಲಯದಲ್ಲಿಯೂ ಇದೆ. ಫಿಲ್ಮ್ ಚೆಂಬರ್ನಲ್ಲಿಯೂ ಇದೆ. ಚೆಂಬರ್ಕ್ಕಿಂತ ನಾನು ದೊಡ್ಡವನಲ್ಲ. ನಾನು ಯಾರನ್ನೂ ಅವಾಯ್ಡ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಉಳಿದಂತೆ ಹುಬ್ಬಳ್ಳಿಯಲ್ಲಿ ಈ ಐದನೇ ತಾರೀಖಿಗೆ ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಇನ್ನೂ ಈ ಅಕ್ಟೋಬರ್ ಆರರಂದು ಚಿತ್ರದ ಫ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ನಿರ್ಮಾಪಕ ಉದಯ್ ಮೆಹ್ತಾ 08ರಂದು ಮುಂಬೈನಲ್ಲೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ಧಾರೆ. ಒಟ್ನಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಬೇಕಿದ್ದ ''ಮಾರ್ಟಿನ್'' ಚಿತ್ರತಂಡದಲ್ಲಿ ಚಿತ್ರ ಬಿಡುಗಡೆಗೆ ಮುನ್ನವೇ ಬಿರುಕು ಮೂಡಿದೆ. ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅವರನ್ನೇ ಚಿತ್ರದಿಂದ ಕಿಕ್ ಔಟ್ ಮಾಡಲಾಗಿದೆ. ಚಿತ್ರದ ಬಿಡುಗಡೆಯ ನಂತರ ಉದಯ್ ಮೆಹ್ತಾ ಮತ್ತು ನಿರ್ದೇಶಕ ಎಪಿ ಅರ್ಜುನ್ ಅವರ ಈ ವಿವಾದ ಎಲ್ಲಿಗೆ ತಲುಪುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











