ಮುಖಕ್ಕೆ ಮಸಿ ಬಳಿದು 45 ದಿನ ಶೂಟಿಂಗ್ ಮಾಡಿದ ಬಳಿಕ ಈ ಪ್ಯಾನ್ ಇಂಡಿಯಾ ಚಿತ್ರದಿಂದ ಹೊರಹಾಕಿದ್ರು: ರಘುರಾಮ್ ಆರೋಪ
ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ಸಹನಟನಾಗಿ ನಟಿಸಿ, ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಕಲಾವಿದ ರಘುರಾಮ್ ಸದ್ಯ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಆರಂಭಿಸಿ ಹಲವಾರು ಕಲಾವಿದರ ಸಂದರ್ಶನಗಳನ್ನು ಮಾಡುವುದರಲ್ಲಿ ನಿರತರಾಗಿದ್ದಾರೆ. ಅದರಲ್ಲಿಯೂ ರಘುರಾಮ್ ಅವರು ಕನ್ನಡ ಸಿನಿಮಾಗಳಲ್ಲಿ ಮಿಂಚಿ ಖ್ಯಾತಿಯನ್ನು ಪಡೆದು ಸದ್ದಿಲ್ಲದೇ ಮರೆಯಾದ ಕಲಾವಿದರನ್ನು ಹುಡುಕಿ 'ನೂರೊಂದು ನೆನಪು' ಎಂಬ ಟೈಟಲ್ನ ಅಡಿಯಲ್ಲಿ ಸಂದರ್ಶನ ಮಾಡುತ್ತಿದ್ದು, ಅವುಗಳಿಂದಲೇ ಸಿಕ್ಕಾಪಟ್ಟೆ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ಅವರ ಯುಟ್ಯೂಬ್ ಚಾನೆಲ್ ಲಕ್ಷ ಚಂದಾದಾರರನ್ನು ಪೂರೈಸಿದ ಕಾರಣ ರಘುರಾಮ್ ಅವರೇ ಸಂದರ್ಶನದಲ್ಲಿ ಅತಿಥಿಯಾಗಿ ಆಗಮಿಸಿದ್ದಾರೆ. ರಘುರಾಮ್ ಅವರ ಪುತ್ರಿ ಸಂದರ್ಶನವನ್ನು ಮಾಡಿದ್ದು, ರಘುರಾಮ್ ತಮ್ಮ ಸಿನಿ ಜೀವನ ಹೇಗಿತ್ತು, ಅಲ್ಲಿ ತಾವು ಕಂಡ ಏಳು ಬೀಳುಗಳೇನು ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೇ ಚಿತ್ರತಂಡವೊಂದು ತಮಗೆ ಮೋಸ ಮಾಡಿದ್ದರ ಬಗ್ಗೆ ನಟ ರಘುರಾಮ್ ಹೇಳಿಕೊಂಡಿದ್ದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ತಮ್ಮ ಯುಟ್ಯೂಬ್ ವಿಡಿಯೊಗಳಿಗೆ ಬರುವ ನೆಗೆಟಿವ್ ಹಾಗೂ ಪಾಸಿಟಿವ್ ಕಾಮೆಂಟ್ಗಳ ಕುರಿತು ಮಾತನಾಡಿದ ರಘುರಾಮ್ ಈ ಸಂದರ್ಭದಲ್ಲಿ ಚಿತ್ರತಂಡ ಮಾಡಿದ ಮೋಸವನ್ನು ಹೇಳಿಕೊಳ್ಳಲು ಇದೇ ಸರಿಯಾದ ಸಮಯ, ಇದಕ್ಕಾಗಿ ನಾನು ಕಾದು ಕುಳಿತುಕೊಂಡಿದ್ದೆ ಎಂದು ಮಾತನ್ನು ಆರಂಭಿಸಿದ ರಘುರಾಮ್ ಅದು ಅವಮಾನಕರ ಹಾಗೂ ಅಸಹ್ಯಕರ ಘಟನೆ ಎಂದೂ ಸಹ ಉಲ್ಲೇಖಿಸಿದರು.
"ಒಂದು ದೊಡ್ಡ ಸೋ ಕಾಲ್ಡ್ ಪ್ಯಾನ್ ಇಂಡಿಯಾ ಚಿತ್ರ ಅಂತ ರಿಲೀಸ್ ಆಯಿತು, ಇತ್ತೀಚೆಗೆ. ಆ ಸಿನಿಮಾದಲ್ಲಿ ನನ್ನನ್ನು 45 ದಿವಸ ದುಡಿಸಿಕೊಂಡಿದ್ದಾರೆ. ಒಂದಿಷ್ಟು ಸಂಭಾವನೆ ಕೂಡ ನನಗೆ ಸಿಕ್ತು. ಆದರೆ ಹೇಳದೇ ಕೇಳದೇ ಆ ಚಿತ್ರದಿಂದ, ಆ ಪಾತ್ರದಿಂದ ನನ್ನನ್ನು ಕಿತ್ತು ಬಿಸಾಕಿದ್ರು. ಇವತ್ತು ಆ ಸಿನಿಮಾ ನೋಡಿದ್ರೆ ಎಲ್ಲೋ ಒಂದು ಕಡೆ, ಎಲ್ಲೋ ಒಂದು ಮೂಲೇಲಿ ಒಂದು ಶಾಟ್ ಹೀಗೆ ಬಂದು ಹೋಗ್ತೀನಂತೆ. ನಾನು ಇನ್ನೂ ಆ ಸಿನಿಮಾ ನೋಡಿಲ್ಲ. ಆ ಸಿನಿಮಾ ನೋಡದಕ್ಕೂ ನನಗೆ ಮನಸ್ಸಿರಲಿಲ್ಲ. ಏಕೆಂದರೆ, ಅವರೆಲ್ಲರೂ ದೊಡ್ಡ ಡೈರೆಕ್ಟರ್, ಪ್ಯಾನ್ ಇಂಡಿಯಾ ಲೆವೆಲ್ ಡೈರೆಕ್ಟರ್ಸ್. ಅವರು ಕಳುಹಿಸಿರುವ ವಾಟ್ಸಪ್ ಮೆಸೇಜ್ಗಳಿವೆ. ಇದನ್ನು ನಾನು ಏನಕ್ಕೆ ಹೇಳ್ತೀನಿ ಅಂತಂದ್ರೆ, ಇದು ನನಗಾದಂತಹ ಅವಮಾನ. ನಾನು ದೊಡ್ಡ ಸಾಧಕ ಅಲ್ಲ, ನಾನೊಬ್ಬ ದೊಡ್ಡ ನಟ ಅಲ್ಲ, ನಾನೊಬ್ಬ ದೊಡ್ಡ ನಿರ್ದೇಶಕ ಅಲ್ಲ. ನಾನು ಸಾಮಾನ್ಯದಲ್ಲೇ ಸಾಮಾನ್ಯ" ಎಂದರು.

ಇನ್ನೂ ಮುಂದುವರಿದು ಮಾತನಾಡಿದ ರಘುರಾಮ್ "ಕರೆದು ಪಾತ್ರ ಕೊಟ್ರಿ. ಕಣ್ಣಿಗೆ ಒತ್ತಿಕೊಂಡು ಪಾತ್ರ ಮಾಡಿದೆ. ರಾತ್ರಿ ಹಗಲು ದುಡಿದಿದ್ದೀನಿ. ಗೆಟಪ್ಗಳು ಹಾಕಿಸಿದ್ರಿ, ವಿಗ್ಗಳನ್ನು ಹಾಕಿಸಿದ್ರಿ, ಕೆಸರಿಗೆ ಇಳಿಸಿದ್ರಿ, ಟೈರ್ ಸುಡಿಸಿದ್ರಿ. ಯಾವುದೇ ಚಕಾರ ಎತ್ತದೇ ಬೆಳಗ್ಗೆ ಒಂಬತ್ತು ಗಂಟೆಗೆ ಹೋಗಿ ರಾತ್ರಿ ಎರಡು ಗಂಟೆವರೆಗೂ ದುಡಿದಿದ್ದೀವಿ. ದುಡಿದುಕೊಂಡು ಬಂದಮೇಲೆ ನೀವು ಈ ಚಿತ್ರದಲ್ಲಿಲ್ಲ, ಈ ಪಾತ್ರದಲ್ಲಿಲ್ಲ, ನೀವು ಮಾಡೋ ಹಾಗಿಲ್ಲ, ಈ ತರಹ ಹೇಳೋ ಅಷ್ಟು ಸಣ್ಣ ಪ್ರಮೇಯ ಕೂಡ ನಿಮಗಿರಲಿಲ್ಲ. ತುಂಬಾ ತಪ್ಪದು. ನನಗೆ ಅಂತಲ್ಲ, ಯಾವುದೇ ಕಲಾವಿದರಿಗಾಗಲಿ ಕರೆದು ಪಾತ್ರ ಮಾಡಿಸಿ ಈ ತರಹ ಮಾಡೋಕೆ ಹೋಗಬೇಡಿ, ಅದು ಎಥಿಕ್ಸ್ ಅಲ್ಲ" ಎಂದು ಹೇಳಿಕೊಂಡರು.
ಅಲ್ಲದೇ "ನಿಮಗೆ ತುಂಬಾ ಚೆನ್ನಾಗಿ ಗೊತ್ತು. ನಿಮ್ಮ ಸಿನಿಮಾಗೆ ನಟನೆ ಮಾಡುವಾಗ ನನಗೆ ಬಿಗ್ ಬಾಸ್ ಆಫರ್ ಬಂದಿತ್ತು. ದುಡ್ಡಿನ ಅವಶ್ಯಕತೆ ಇತ್ತು. ಹೋಗಿಬಿಡೋಣ್ವ ಒಳ್ಳೆ ದುಡ್ಡು ಸಿಗುತ್ತೆ, ಮೂರು ತಿಂಗಳು ಹೋಗಿಬಿಡೋಣ ಅಂತ ಮನಸ್ಸಲ್ಲಿ ತೀರ್ಮಾನ ಮಾಡಿದ್ದೆ. ಆದರೆ ನಾನು ಈ ಸಿನಿಮಾ ಬಿಟ್ಟು ಮೂರು ತಿಂಗಳು ಹೋಗಿ ಕುಳಿತುಕೊಂಡುಬಿಟ್ಟರೆ ಚಿತ್ರಕ್ಕೆ ನನ್ನಿಂದ ತೊಂದರೆ ಆಗುತ್ತೆ ಅಂತ ನಾನು ಅದನ್ನು ಒಪ್ಪಲಿಲ್ಲ. ಇಷ್ಟೆಲ್ಲಾ ಗೊತ್ತಿದ್ರೂ, ಹೇಳದೇ ಕೇಳದೇ ನನ್ನನ್ನು ತೆಗೆದಿದ್ದು, ಇದು ನೀವು ಮಾಡಿರುವ ಅವಮಾನ ನನಗೆ. ನಾನು ಎಲ್ಲೂ ಇದರ ಬಗ್ಗೆ ಮಾತನಾಡಲ್ಲ, ತಾಕತ್ತಿದೆಯಾ ಎದುರಗಡೆ ಬನ್ನಿ. ಫೇಸ್ ಟು ಫೇಸ್ ಮಾತಾಡಣ. ಇದರ ಬಗ್ಗೆ ಸಾವಿರ ಜನ ಸಾವಿರ ಮಾತನಾಡಬಹುದು. ಇನ್ನೂ ನೀವು ನೂರು ಸಿನಿಮಾ ಅಲ್ಲ, ಇನ್ನೂ ಪ್ಯಾನ್ ವರ್ಲ್ಡ್ ಸಿನಿಮಾ ನೀವು ಮಾಡಬಹುದು, ಆದರೆ ಇದು ಒಬ್ಬ ನಿರ್ಮಾಪಕನಾಗಿ, ನಿರ್ದೇಶಕನಾಗಿ ನಿಮ್ಮ ಖುರ್ಚಿಗೆ, ನಿಮ್ಮ ಕೆಲಸಕ್ಕೆ ನೀವು ಮಾಡಿರುವ ಅಸಹ್ಯ. ನನಗೆ ಮಾಡಿದ ಹಾಗೆ ಬೇರೆ ಯಾರಿಗೂ ಮಾಡಬೇಡಿ. ಹೆಸರು ಹೇಳೋಕೆ ಇಷ್ಟಪಡಲ್ಲ, ಹೆಸರು ಹೇಳೋಕೆ ಧೈರ್ಯ ಇಲ್ಲ ಅಂತಲ್ಲ. ಸಮಯ ಬಂದಾಗ ಹೆಸರನ್ನೂ ಸಹ ಹೇಳುತ್ತೇನೆ" ಎಂದರು.


Click it and Unblock the Notifications











