ರಕ್ತಸ್ರಾವ, ಹೃದಯದ ಬಡಿತ, ಟೈಮ್ ಬಾಂಬ್ ; ಮಗು ಕಳೆದುಕೊಂಡ ನೋವು ಹಂಚಿಕೊಂಡ ಭಾವನಾ ರಾಮಣ್ಣ
ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ. ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಇದರ ನಡುವೆ ಎಷ್ಟೇ ದೃಢ ನಿರ್ಧಾರ ಮಾಡಿದರು.. ಜೀವನ ಸಂಗಾತಿಯೇ ಬೇಡ ಎಂದು ಅಂದುಕೊಂಡರು.. ಕೆಲ ಮಹಿಳೆಯರಲ್ಲಿ ತಾಯ್ತನದ ಹಂಬಲ ಮಾತ್ರ ಇದ್ದೇ ಇರುತ್ತೆ. ಹೀಗಾಗಿಯೇ ''ಐವಿಎಫ್'' ಅಂದರೆ ''ಇನ್ ವಿಟ್ರೊ ಫರ್ಟಿಲೈಸೇಶನ್'' ಸಹಾಯದಿಂದ ಅನೇಕರು ತಾಯಿಯಾಗುತ್ತಿದ್ದಾರೆ. ಉದಾಹರಣೆಗೆ ಭಾವನಾ ರಾಮಣ್ಣ.

ಹೌದು.. ಕನ್ನಡ ಚಿತ್ರರಂಗದ ಚಂದ್ರಮುಖಿ ಪ್ರಾಣಸಖಿ.. ಇಂತಿ ನಿನ್ನ ಪ್ರೀತಿಯ ಚಿತ್ರದ ಪರಿಮಳಾ.. ಭಾವನಾ ರಾಮಣ್ಣ ಮದುವೆಯಾಗದೇ ತಾಯಿಯಾದ ವಿಚಾರ ಮತ್ತು ಹೆರಿಗೆಯ ಸಮಯದಲ್ಲಿ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಕಳೆದುಕೊಂಡ ವಿಚಾರ ನಿಮಗೆ ಗೊತ್ತೇ ಇರಬೇಕು. ಸದ್ಯ ತಮ್ಮ ಹೆರಿಗೆ ಪ್ರಕ್ರಿಯೆ ಮತ್ತು ಮಗು ಕಳೆದುಕೊಂಡ ನೋವನ್ನು ಭಾವನಾ ಹಂಚಿಕೊಂಡಿದ್ದಾರೆ.
ಈ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭಾವನಾ ನಾನು ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದೆ. ಆದರೆ.. ದುರಾದೃಷ್ಟವಶಾತ್ ಒಂದು ಮಗು ಬದುಕುಳಿಯಲಿಲ್ಲ. ಇನ್ನೂ ಆ ನೋವನ್ನು ಮರೆಯಲು ಸಾಧ್ಯ ಇಲ್ಲ.. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ಧಾರೆ.
ಸೀಮಂತ ಸಮಾರಂಭದವರೆಗೆ ಎಲ್ಲವೂ ಚೆನ್ನಾಗಿತ್ತು ಎಂದು ಹೇಳಿರುವ ಭಾವನಾ ಸೀಮಂತ ಸಮಾರಂಭವಾದ ನಂತರ ತುಂಬಾ ಹೊತ್ತು ಕುಳಿತುಕೊಳ್ಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಆ ನಂತರ ರಕ್ತಸ್ರಾವ ಕೂಡ ಶುರುವಾಯ್ತು ಎಂದು ಹೇಳಿದ್ದಾರೆ.
ಇನ್ನೂ ನಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ನಮ್ಮ ಮನೆಯಿಂದ ದೂರ ಇತ್ತು. ಈ ಹಿನ್ನೆಲೆ ಮನೆಯ ಸದಸ್ಯರ ಸಲಹೆ ಮೇರೆಗೆ ನಾನು ಹತ್ತಿರದಲ್ಲಿಯೇ ಇದ್ದ ಆಸ್ಪತ್ರೆಗೆ ಹೋದೆ. ಹಾಗಂಥ ಆ ವೈದ್ಯರು ನನಗೆ ಹೊಸಬರಲ್ಲ. ಯಾಕೆಂದರೆ ಅವರು ನಮ್ಮ ಸಂಬಂಧಿಕರ ಹೆರಿಗೆಯನ್ನು ಮಾಡಿಸಿದ್ದಾರೆ ಎಂದು ಹೇಳಿರುವ ಭಾವನಾ ಅಲ್ಲಿ ಹೋದ ತಕ್ಷಣ ನನ್ನನ್ನು ಅವರು ನೋಡಿ ಭಾವನಾ ನೀವು ಟೈಮ್ ಬಾಂಬ್ ಮೇಲೆ ಕೂತಿದ್ದೀರಿ ಎಂದು ಹೇಳಿದರು ಎಂದು ಹೇಳಿದ್ದಾರೆ.

ಆ ನಂತರ ವೈದ್ಯರು ಪರೀಕ್ಷೆ ಮಾಡಿದಾಗ ಮಗುವಿಗೆ ರಕ್ತ ಪೂರೈಸುವ ನಾಳ ಹಿಮ್ಮುಖವಾಗಿ ಹರಿಯುತ್ತಿರುವ ವಿಚಾರ ಗೊತ್ತಾಯ್ತು. ಒಂದು ಮಗುವಿನ ತೂಕ ಕೂಡ ಕಡಿಮೆಯಾಗಿರುವ ವಿಚಾರ ತಿಳಿಯಿತು. ಇಷ್ಟೇ ಅಲ್ಲದೇ ಆ ಮಗುವಿನ ಹೃದಯದ ಬಡಿತ ಶೇಕಡಾ 50% ಕಡಿಮೆಯಾಗಿತ್ತು ಎಂದು ಹೇಳಿರುವ ಭಾವನಾ ದೇವರಲ್ಲಿ ಪ್ರಾರ್ಥನೆ ಮಾಡಿದೆ ಆದರೆ ಫಲ ಸಿಗಲಿಲ್ಲ ಎಂದು ಹೇಳಿದ್ದಾರೆ. ಮಾನಿಟರ್ನಲ್ಲಿ ಮಗುವಿನ ಹೃದಯದ ಬಡಿತ ಕುಸಿಯುತ್ತಿರುವುದನ್ನು ನೋಡಿದಾಗ ನನಗಾದ ಆಘಾತ ವಿವರಿಸಲು ಸಾಧ್ಯ ಇಲ್ಲ ಎಂದು ಭಾವುಕರಾಗಿದ್ದಾರೆ.
ಕೂಡಲೇ ಒಂದು ಮಗುವನ್ನು ಉಳಿಸಲು ಸಾಧ್ಯ ಇಲ್ಲ ಎಂದು ವೈದ್ಯರು ಹೇಳಿದರು, ಇನ್ನೊಂದು ಮಗುಗಾಗಿ ಗರ್ಭಾವಸ್ಥೆಯ ಫೂರ್ಣಾವಧಿವರೆಗೆ ಕಾಯುವ ಪರಿಸ್ಥಿತಿ ಕೂಡ ಇರಲಿಲ್ಲ ಹೀಗಾಗಿ 32ವಾರಕ್ಕೆ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯ್ತು ಎಂದು ಆ ದಿನವನ್ನು ನೆನೆಪು ಮಾಡಿಕೊಂಡಿರುವ ಭಾವನಾ ರಾಮಣ್ಣ, ಹೆಣ್ಣು ಮಗು ಆಗಿದ್ದಕ್ಕೆ ಖುಷಿ ಇದೆ. ಆದರೆ ಇದೇ ಸಮಯದಲ್ಲಿ ಮತ್ತೊಂದು ಮಗು ನನ್ನ ಮಡಿಲು ಸೇರಲಿಲ್ಲವಲ್ಲಾ ಎನ್ನುವ ಕೊರಗು ಇದೆ. ಈ ನೋವು ಸದಾ ಕಾಲ ನನ್ನನ್ನು ಕಾಡುತ್ತಲೇ ಇರುತ್ತೆ ಎಂದು ಹೇಳಿದ್ದಾರೆ.
ಶಸ್ತ್ರ ಚಿಕಿತ್ಸೆಯ ನಂತರ ಎರಡು ಮಕ್ಕಳು ಹೆಣ್ಣು ಎನ್ನುವ ವಿಚಾರ ನನಗೆ ಗೊತ್ತಾಯ್ತು, ಬದುಕುಳಿದ ಮಗುವನ್ನು ಅದರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಎನ್ಐಸಿಯುಗೆ ಕರೆದೊಯ್ಯಬೇಕಾಯಿತು ಎಂದು ಹೇಳಿರುವ ಭಾವನಾ ಒಂದು ಮಗುವನ್ನ ಕಳೆದುಕೊಂಡಿದ್ದಕ್ಕೆ ಅಳಬೇಕಾ.. ಇನ್ನೊಂದು ಮಗು ಆರೋಗ್ಯವಾಗಿ ಜನಿಸಿದ್ದಕ್ಕೆ ಖುಷಿ ಪಡಬೇಕಾ.. ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ಧಾರೆ. ಮಗು ಜೊತೆ ಈಗ ನಾನು ಮನೆಗೆ ಹಿಂತಿರುಗಿ ಬಂದಿದ್ದೇನೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











