ರಘು ದೀಕ್ಷಿತ್ ಬದುಕಿನಲ್ಲಿ ಮತ್ತೆ ಅರಳಿತು ಅನು'ರಾಗ' ; 50ನೇ ವರ್ಷದಲ್ಲಿ ವಾರಿಜಶ್ರೀ ಜೊತೆ 2ನೇ ಮದುವೆಯಾದ ಗಾಯಕ
ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಹೀಗೆ ಬೇರೂರಿದ ಪ್ರೀತಿ ಆ ನಂತರ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಬಹುದು. ಇನ್ನೂ.. ಹಿಂದೆ ಆದರೆ ಮದುವೆಯಲ್ಲಿ ವಯಸ್ಸು ಬಹುಮುಖ್ಯವಾದ ಪಾತ್ರ ಕೂಡ ವಹಿಸುತ್ತಿತ್ತು. ಆದರೆ ಈಗ ಹಾಗಿಲ್ಲ.
ಬದಲಾದ ಈ ಕಾಲದಲ್ಲಿ ಬದುಕಿನ ಲವಲವಿಕೆಗೆ, ಪತಿ- ಪತ್ನಿ ನಡುವಿನ ಅನ್ಯೋನ್ಯತೆಗೆ, ಅವರ ನಡುವಿನ ಆತ್ಮೀಯತೆಗೆ ಯಾವ ಕೋನದಲ್ಲೂ ಕೂಡ ವಯಸ್ಸಿನ ಹಂಗಿಲ್ಲ. ಒಂದೊಳ್ಳೆ ಮನಸ್ಸು ಮತ್ತು ದಾಂಪತ್ಯದ ಕಲೆಯನ್ನು ಅರಿತಿರುವ ನೈಪುಣ್ಯತೆಯನ್ನು ಹೊಂದಿದ್ದರೆ ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟೇ ಇದ್ದರೂ ಕೂಡ ಸುಖವಾಗಿ ಸಂಸಾರ ನಡೆಸಬಹುದು. ಬದುಕಿ ಬಾಳಬಹುದು ಎನ್ನುವ ವಾದವನ್ನು ಹಲವರು ಮಾಡುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ವಯಸ್ಸನ್ನು ಪರಿಗಣಿಸದೇ ಮದುವೆಯಾಗಿದ್ದಾರೆ. ಉದಾಹರಣೆಗೆ ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್.

ಹೌದು, ಬಣ್ಣದ ಅಂಗಿ ಅದಕ್ಕೆ ತದ್ವಿರುದ್ದವಾದ ಬಣ್ಣದ ಲುಂಗಿಯನ್ನು ಧರಿಸಿ, ಕಾಲಿಗೆ ಹೆಜ್ಜೆ ಕಟ್ಟಿಕೊಂಡು, ವಿಚಿತ್ರ ಉಡುಗೆಯ ಮೂಲಕ ಕನ್ನಡದ ದಾಸರ, ಕೀರ್ತನೆಕಾರರ ಪದಗಳನ್ನು, ಕನ್ನಡದ ಚೌಕಟ್ಟನ್ನು ಮೀರಿ ಹೊರಗಿನವರಿಗೆ ಪರಿಚಯಿಸಿದ ಗಾಯಕಂ ಕಂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ 50ನೇ ವರ್ಷದಲ್ಲಿ 34 ವರ್ಷದ ಕೊಳಲು ವಾದಕಿ ಮತ್ತು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ನಾಮನಿರ್ದೇಶಿತ ಕನ್ನಡ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ.
ಸರಳವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ರಘು ದೀಕ್ಷಿತ್ ಮತ್ತು ವಾರಿಜಶ್ರೀ ಅವರ ಮನೆಯ ಸದಸ್ಯರು ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಯಮುನಾ ಶ್ರೀನಿಧಿ, ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಈ ಮದುವೆಯಲ್ಲಿ ಭಾಗವಹಿಸಿದ್ದರು. ನವ ಜೋಡಿಗೆ ಶುಭ ಕೋರಿದರು.
ರಘು ದೀಕ್ಷಿತ್ ಅವರ ಮದುವೆಯ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯಮುನಾ ಶ್ರೀನಿಧಿ, ಕನ್ನಡ ನಾಡಿನ ಹೆಮ್ಮೆಯ ಸಂಗೀತಗಾರ ರಘು ದೀಕ್ಷಿತ್ ಹಾಗೂ ಪ್ರತಿಭಾವಂತ ಸಂಗೀತಗಾರ್ತಿ ವಾರಿಜಾ ವೇಣುಗೋಪಾಲ್ ಅವರ ವಿವಾಹದ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಜೀವನ ಸಂಗಮವು ಪ್ರೀತಿ, ಸಂತೋಷ ಮತ್ತು ಸಂಗೀತದ ಸುಂದರ ರಾಗಗಳಿಂದ ತುಂಬಿರಲಿ ಎಂದು ಬರೆದುಕೊಂಡಿದ್ಧಾರೆ.
ಸದ್ಯ ರಘು ದೀಕ್ಷಿತ್ ಮತ್ತು ವಾರಿಜಶ್ರೀ ವೇಣುಗೋಪಾಲ್ ಅವರ ಮದುವೆ ಸಮಾರಂಭದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ರಘು ದೀಕ್ಷಿತ್ ಮತಗ್ತು ವಾರಿಜಶ್ರೀ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಅಂದ್ಹಾಗೇ ರಘು ದೀಕ್ಷಿತ್ ಅವರಂತೆಯೇ ವಾರಿಜಶ್ರೀ ವೇಣುಗೋಪಾಲ್ ಅವರು ಮೂಲತ: ಮೈಸೂರಿನವರು. ಇವರಿಬ್ಬರಿಗೆ ಸಂಗೀತವೇ ಉಸಿರು. ರಘು ದೀಕ್ಷಿತ್ ಅವರ ಜೊತೆ ವಾರಿಜಶ್ರೀ ವೇಣುಗೋಪಾಲ್ ಹಲವು ವೇದಿಕೆಗಳಲ್ಲಿ ಜೊತೆಯಾಗಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಮಾಡಿದ್ದಾರೆ. ಹೀಗೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಇಬ್ಬರು ಈಗ ನಿಜ ಜೀವನದಲ್ಲಿ ಕೂಡ ಒಂದಾಗಿದ್ದಾರೆ.
ಇನ್ನುಳಿದಂತೆ ಕನ್ನಡದ ''ಸೈಕೋ'' ಚಿತ್ರದ ''ನಿನ್ನ ಪೂಜೆಗೆ ಬಂದೇ ಮಾದೇಶ್ವರಾ'' ಹಾಡಿನ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ರಘು ದೀಕ್ಷಿತ್ ಈ ಹಿಂದೆ ಮೈಸೂರಿನಲ್ಲಿಯೇ ಹುಟ್ಟಿ ಬೆಳೆದ, ಶಾಸ್ತ್ರೀಯ ನೃತ್ಯ, ಕಳರಿಪಯಟ್ಟು, ಕಥಕ್, ಪಾಶ್ಚಾತ್ಯ ನೃತ್ಯ, ಕರಗತ ಮಾಡಿಕೊಂಡು ಡ್ಯಾನ್ಸ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಯೂರಿ ಉಪಾಧ್ಯ ಅವರನ್ನು 2005ರಲ್ಲಿ ಮದುವೆಯಾಗಿದ್ದರು. ಆದರೆ ಈ ಸಂಬಂಧ 2019ರಲ್ಲಿ ಮುರಿದು ಬಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಿಂಗಲ್ ಆಗಿದ್ದ ರಘು ದೀಕ್ಷಿತ್ ಅವರ ಬದುಕಿನಲ್ಲಿ ಈಗ ಮತ್ತೊಮ್ಮೆ ಅನು'ರಾಗ' ಅರಳಿದೆ.


Click it and Unblock the Notifications











