ಸೋಲೇ ಗೆಲುವಿನ ಸೋಪಾನ ; ಹೊಸ ಉತ್ಸಾಹ, ಅದೇ ನಿರ್ದೇಶಕ- ಎರಡನೇ ಚಿತ್ರ ಘೋಷಿಸಿದ ಯಶ್ ತಾಯಿ ಪುಷ್ಪಾ
ಸವಾಲುಗಳನ್ನು ಎದುರಿಸದೇ ಬಹುಬೇಗ ಗೆದ್ದಾಗ ಕೆಲ ಒಮ್ಮೆ ಕೆಲವರಿಗೆ ಮುಂಬರುವ ದಿನಗಳಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ಆರಂಭದಲ್ಲಿಯೇ ಗೆಲುವು ಸಿಕ್ಕ ಹಿನ್ನೆಲೆ ಮಾನಸಿಕವಾಗಿ ಬಹುತೇಕರು ಸಿದ್ದರು ಇರುವುದಿಲ್ಲ. ಹೀಗಾಗಿಯೇ ಸೋಲೇ ಗೆಲುವಿನ ಸೋಪಾನ ಎಂದು ಆ ಕಾಲದಿಂದಲೂ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಸೋತು ಗೆಲ್ಲುವುದನ್ನು ಕಲಿಯಬೇಕು ಎಂದು ಪಾಠವನ್ನು ಮಾಡಿದ್ದಾರೆ.
ಸದ್ಯ.. ಉನ್ನತ ಗುರಿಯ ಬೆನ್ನೇರಿರುವ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಕೂಡ ಇದೇ ರೀತಿ ಸೋಲೆ ಗೆಲುವಿನ ಮೆಟ್ಟಿಲು ಎಂದುಕೊಂಡು ಚಿತ್ರರಂಗದಲ್ಲಿ ಮತ್ತೊಂದು ಮೆಟ್ಟಿಲೇರಿದ್ದಾರೆ. ನಿರ್ಮಾಪಕಿಯಾಗಿ ತಮ್ಮ ಎರಡನೇ ಚಿತ್ರವನ್ನು ಘೋಷಿಸಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಯಶ್ ಅವರ ತಾಯಿ ಪುಷ್ಪಾ ಈ ಹಿಂದೆ ''ಕೊತ್ತಲವಾಡಿ'' ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಬಂದಿದ್ದರು. ಪೃಥ್ವಿ ಅಂಬರ್ ನಾಯಕನಾಗಿದ್ದ ಈ ಚಿತ್ರವನ್ನು ಶ್ರೀರಾಜ್ ನಿರ್ದೇಶನ ಮಾಡಿದ್ದರು.
ಆದರೆ.. ನಿರ್ಮಾಪಕಿಯಾಗಿ ತಮ್ಮ ಜವಾಬ್ಧಾರಿಗಳನ್ನು ಪೂರೈಸಿದ್ದ ಚಿತ್ರಕ್ಕೆ ಬೇಕಾದ ಪ್ರಚಾರವನ್ನು ಕೂಡ ಪುಷ್ಪಾ ಮಾಡಿದ್ದರೂ ಕೂಡ ಕೊತ್ತಲವಾಡಿ ನಿರ್ಮಾಪಕಿ ಪುಷ್ಪಾ ಅವರ ಕೈ ಹಿಡಿಯಲಿಲ್ಲ. ಗೆಲ್ಲಲಿಲ್ಲ. ಖುದ್ದು ಪುಷ್ಪಾ ಅವರೇ ನಾವು ಅಂದುಕೊಂಡತೆ ಆಗಲಿಲ್ಲ ಎಂದು ಹೇಳಿದ್ದರು. ಇನ್ನೂ ಬಣ್ಣದ ಲೋಕದಲ್ಲಿ ಸ್ಟಾರ್ ಸೋತರೂ ಕೂಡ ಇನ್ನೊಂದು ಅವಕಾಶ ಸಿಗುತ್ತೆ. ಆದರೆ.. ಮೊದಲ ಪ್ರಯತ್ನದಲ್ಲಿ ನಿರ್ದೇಶಕ ಭರವಸೆ ಮೂಡಿಸಿ ಸೋತರೆ, ಆ ನಿರ್ದೇಶಕನಿಗೆ ಮತ್ತೊಂದು ಅವಕಾಶ ಸುಲಭಕ್ಕೆ ಸಿಕ್ಕುವುದಿಲ್ಲ. ಬಂಡವಾಳ ಹೂಡಲು ಹಲವರು ಮೀನಾ ಮೇಷ ಎಣಿಸುತ್ತಾರೆ.
ಆದರೆ.. ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಇದಕ್ಕೆ ತದ್ವಿರುದ್ದ. ಮೊದಲ ಚಿತ್ರದಲ್ಲಿ ನಿರ್ದೇಶಕರು ಎಡವಿದರು ಕೂಡ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ತಮ್ಮ ''ಕೊತ್ತಲವಾಡಿ'' ಚಿತ್ರದ ನಿರ್ದೇಶಕ ಶ್ರೀರಾಜ್ ಅವರಿಗೆಯೇ ಮತ್ತೊಂದು ಅವಕಾಶ ನೀಡಿದ್ದಾರೆ. ಎರಡನೇ ಚಿತ್ರದ ನಿರ್ದೇಶನದ ಜವಾಬ್ಧಾರಿ ವಹಿಸಿದ್ಧಾರೆ. ಈ ಮೂಲಕ ಗಾಂಧಿನಗರದಲ್ಲಿ ಹಲವರ ಹುಬ್ಬೇರಿಸಿದ್ದಾರೆ.
ಇನ್ನೂ ಚಿತ್ರದ ಪ್ರಮುಖ ನಾಯಕ ಯಾರು..? ನಾಯಕಿ ಯಾರು..? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆಯಾದರೂ ''ಕೊತ್ತಲವಾಡಿ'' ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರೇ ಇಲ್ಲಿಯೂ ಕೂಡ ಮುಂದುವರೆಯಲಿದ್ದಾರೆ. ''ಕೊತ್ತಲವಾಡಿ'' ವಿಚಾರದಲ್ಲಿ ವಿವಾದ ಮಾಡಿದವರಿಗೆ ಸಹಜವಾಗಿ ಇಲ್ಲಿ ಅವಕಾಶ ಇರುವುದಿಲ್ಲ. ಸದ್ಯ ವಿಜಯ ದಶಮಿಯಂದು ಪುಷ್ಪಾ ಅರುಣ್ ಕುಮಾರ್ ತಮ್ಮ ಎರಡನೇ ಚಿತ್ರದ ಘೋಷಣೆ ಮಾಡಿದ್ದಾರೆ. ಚಿತ್ರದ ತಾರಾಬಳಗ ಮತ್ತು ಚಿತ್ರದ ಶೀರ್ಷಿಕೆಯನ್ನು ಮುಂಬರುವ ದಿನಗಳಲ್ಲಿ ಪುಷ್ಪಾ ಅರುಣ್ ಕುಮಾರ್ ಬಹಿರಂಗಗೊಳಿಸಲಿದ್ದಾರೆ.

ಅಂದ್ಹಾಗೇ ಈ ಹಿಂದೆ ಕನ್ನಡ ಚಿತ್ರರಂಗದ ಅಧ್ಯಕ್ಷ ಶರಣ್ ಅವರಿಗೆ ಒಂದು ಚಿತ್ರ ಮಾಡುವುದಾಗಿ ಕೂಡ ಪುಷ್ಪಾ ಅವರು ಹೇಳಿದ್ದರು. ''ಕೊತ್ತಲವಾಡಿ'' ಟೀಸರ್ ಬಿಡುಗಡೆ ಸಮಯದಲ್ಲಿ ನಮ್ಮ ಸಂಸ್ಥೆಯಿಂದ ಎರಡನೇ ಚಿತ್ರವನ್ನು ಶರಣ್ ಜೊತೆ ಮಾಡುತ್ತೇವೆ. ಮೊದಲ ಚಿತ್ರವನ್ನೇ ಅವರ ಜೊತೆ ಮಾಡಬೇಕಿತ್ತು. ಆದರೆ ನನಗೆ ಧೈರ್ಯ ಇರಲಿಲ್ಲ. ಈಗ ಒಂದು ಸಿನಿಮಾವನ್ನು ಬೇರೆಯವರ ಜೊತೆ ಮಾಡಿದ್ದೇನೆ. ಎರಡನೇ ಸಿನಿಮಾವನ್ನು ಶರಣ್ ಜೊತೆ ಮಾಡುತ್ತೇನೆ ಎಂದು ಶರಣ್ ಅವರ ಮುಂದೆಯೇ ಹೇಳಿದ್ದರು. ಈಗ ಎರಡನೇ ಚಿತ್ರ ಘೋಷಣೆಯಾಗಿದೆ. ಹೀಗಾಗಿ ಈ ಚಿತ್ರ ಶರಣ್ ಅವರದ್ದೇನಾ..? ಅಥವಾ ಇದೇ ಬೇರೆ ಆ ಚಿತ್ರವೇ ಬೇರೆನಾ..? ಎನ್ನುವ ಚಿಕ್ಕ ಗೊಂದಲ ಸದ್ಯ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ.


Click it and Unblock the Notifications










