ರಾಜ್ ನೃತ್ಯಕ್ಕೆ ಮನಸೋತಿತ್ತು ನಂದಿಬೆಟ್ಟದ ಆ ಹನುಮ
ಏಪ್ರಿಲ್ 12 ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ. ರಾಜ್ ಅವರ ಆತ್ಮೀಯರೂ ಆದ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ವರನಟನೊಂದಿಗಿನ ಒಂದು ತಮಾಷೆ ಪ್ರಸಂಗವನ್ನು ಸ್ಮರಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಸಮೀಪದ ನಂದಿಬೆಟ್ಟದಲ್ಲಿ ರಾಜಕುಮಾರ್ ಅಭಿನಯದ 'ಭೂಪತಿ ರಂಗ' ಸಿನಿಮಾ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ರಾಜ್ - ಉದಯ ಚಂದ್ರಿಕಾ ಜೋಡಿ 'ಓಹೋ ಮುದ್ದಿನ ಮಲ್ಲಿಗೆ..' ಯುಗಳ ಗೀತೆಗೆ ಹೆಜ್ಜೆ ಹಾಕುತ್ತಿದ್ದರು.

ಶೂಟಿಂಗ್ ಬಿಡುವಿನ ವೇಳೆ ನಾನು ಅವರ ಕೆಲವು ಫೋಟೋಗಳನ್ನು ತೆಗೆದುಕೊಂಡೆ. ಸಂಜೆಯ ವೇಳೆಯಲ್ಲೊಂದು ತಮಾಷೆ ನಡೆಯಿತು. ಆಗ ನಂದಿ ಬೆಟ್ಟದಲ್ಲಿ ಕೋತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ರಾಜ್, ಮುಂದಿನ ಶಾಟ್ ಗೆಂದು ಕ್ಯಾಮರಾ ಎದುರು ಬರುತ್ತಿದ್ದಂತೆ ಕೋತಿಯೊಂದು ಅವರ ಬಳಿ ಓಡಿಬಂತು.

ಚಿತ್ರತಂಡದ ಹುಡುಗರು ಓಡಿಸಿದರೂ ಅದು ಹೋಗಲೊಲ್ಲದು. ತಮ್ಮ ಕಾಲ ಬಳಿಯೇ ಸುಳಿದಾಡುತ್ತಿದ್ದ ಕೋತಿಯನ್ನು ರಾಜ್ ಪ್ರೀತಿಯಿಂದ ಮಾತನಾಡಿಸತೊಡಗಿದರು. ಕ್ಯಾಮರಾಮನ್ ಪಿ.ಎಸ್.ಪ್ರಕಾಶ್ ತಮ್ಮ ಕ್ಯಾಮರಾ ಆಫ್ ಮಾಡಿ ನಗುತ್ತಾ ಕುಳಿತರು. ನಾನು ಕ್ಯಾಮರಾ ಎತ್ತಿಕೊಂಡು ಅಲ್ಲಿಗೆ ಓಡಿದೆ. ಕೋತಿ ಎದುರು ರಾಜ್ ನೃತ್ಯದ ಬಂಗಿಯಲ್ಲಿ ಕೊಟ್ಟ ಪೋಸುಗಳನ್ನು ಕ್ಲಿಕ್ಕಿಸಿಕೊಂಡೆ.


Click it and Unblock the Notifications











