twitter
    For Quick Alerts
    ALLOW NOTIFICATIONS  
    For Daily Alerts

    ಅಪರೂಪದ ಚಿತ್ರಕರ್ಮಿ ಮಿ. ಪರ್ಫೆಕ್ಟ್ ಶಂಕರ್ ನಾಗ್

    By ಮಲೆನಾಡಿಗ
    |

    Recommended Video

    ಶಂಕರ್ ನಾಗ್ ನೆನಪಲ್ಲಿ ಒಂದು ಸುತ್ತು...

    ಜೀವನ ಬಂದಂತೆ ನಾವು ಅನುಭವಿಸಬೇಕು', 'ಕೆರೆಯ ನೀರನು ಕೆರೆಗೆ ಚೆಲ್ಲಿ...' ಈ ರೀತಿಯ ತತ್ವಗಳು ಶಂಕರನ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಬ್ಯಾಕ್ ಟು ವಿಲೇಜ್ ಎಂಬ ಗಾಂಧಿ ಹೇಳಿದ ಮಾತು ಅಕ್ಷರಶಃ ಪಾಲಿಸಿದ ಶಂಕರ ಅವಿನಾಶಿ.

    ಸದಾ ಹೊಸತನ, ಕ್ರಿಯಾಶೀಲ ಬದುಕು, 'ಸಮಾಹಿತ' ಮನೋಭಾವ ಶಂಕರ್ ವಿಶೇಷತೆ. ಕನಸುಗಳ ಬೆನ್ನತ್ತಿ ಸುತ್ತುತ್ತಿದ್ದ ಶಂಕರ ಹಾಕಿಕೊಂಡ ಯೋಜನೆಗಳು ಅನೇಕ. ಸ್ಟುಡಿಯೋ ಆಯಿತು, ತೋಟದ ಮನೆ ಮಾಡಿ ವಾಸಮಾಡಿಯಾಗಿತ್ತು, ಡೈರಿ ಆರಂಭಿಸಿದ್ದು ಆಯಿತು. ಇದಕ್ಕಿಂತಲೂ ಹೆಚ್ಚಿನ ರೀತಿಯ ಯೋಜನೆಗಳ ಸರಮಾಲೆ ಶಂಕರನ ತಲೆಯಲ್ಲಿ ತುಂಬಿತ್ತು.

    ಅನಂತ್ ಅವರಂತೆ ಶಂಕರ ಬಯಸಿದ್ದರೆ ಸಮಾಜವಾದಿ ನೆಲೆಯ ಮೇಲೆ ರಾಮಕೃಷ್ಣ ಹೆಗಡೆ ಅವರ ಸ್ನೇಹದ ಆಧಾರವಾಗಿಟ್ಟುಕೊಂಡು ರಾಜಕೀಯ ರಂಗ ಪ್ರವೇಶಿಸಬಹುದಿತ್ತು. ಆದರೆ, ಶಂಕರ್ ಸದಾ ಕಾಲ ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂದು ಜನರ ನಡುವೆ ಇದ್ದು ಚುನಾವಣೆ ಇಲ್ಲದೆ ಜನ ಪ್ರತಿನಿಧಿಯಾಗಿ ಬೆಳೆದವ.

    ಅಭಿಮಾನಿಗಳು ಕರಾಟೆ ಕಿಂಗ್, ಆಟೋರಾಜ ಎಂದೆಲ್ಲ ಕರೆದರೂ ತನ್ನ ಪಾಡಿನ ಕೆಲಸ ಹಾಗೂ ಚಿತ್ರರಂಗಕ್ಕಾಗಿ ಅವಿರತ ದುಡಿಮೆಯನ್ನೇ ಉಸಿರಾಗಿಸಿಕೊಂಡಿದ್ದ ಕರ್ಮಯೋಗಿ

    ಇಂಥ ಒಬ್ಬ ಮಿ. ಪರ್ಫೆಕ್ಟ್ ಚಿತ್ರಕರ್ಮಿ ವ್ಯಕ್ತಿ ನಮ್ಮಲ್ಲಿ ಇಲ್ಲ ಎಂದು ಬೇರೆ ರಾಜ್ಯದವರು ಹೊಟ್ಟೆಕಿಚ್ಚು ಪಡಬೇಕು. ಆದರೆ, ಕರ್ನಾಟಕದ ಪಾಲಿಗೆ ಶಂಕರ್ ವರ್ಣರಂಜಿತ ಅಧ್ಯಾಯ ಬಹುಬೇಗ ಮುಗಿದಿದ್ದು ಇಂದಿಗೂ ಸಹಿಸಲು ಕಷ್ಟವಾಗುತ್ತಿದೆ.

    ಸೆ.30ಕ್ಕೆ ಶಂಕರ್ ಮರೆಯಾದರೂ, ಇಂದಿಗೂ ಶಂಕರ್ ಸದಾ ನಮ್ಮೊಂದಿಗೆ ನೆಲೆಸಿರುವುದನ್ನು ಕಾಣಬಹುದು.. ಶಂಕರ್ ನೆನಪಲ್ಲಿ ಒಂದು ಸುತ್ತು...

    ವಿಭಿನ್ನ ಪರಿಸರಗಳ ಪ್ರಭಾವ

    ವಿಭಿನ್ನ ಪರಿಸರಗಳ ಪ್ರಭಾವ

    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದ ಚಿತ್ರಾಪುರ ಸಾರಸ್ವತ ಕೊಂಕಣಿ ಬ್ರಾಹ್ಮಣ ನಾಗರಕಟ್ಟೆ ಮನೆತನ ಕೂಸಾಗಿ ನವೆಂಬರ್ 9, 1954ರಲ್ಲಿ ಶಂಕರ್ ಜನನ, ಸಂಪ್ರದಾಯನಿಷ್ಠವಾದ ಚಿತ್ರಾಪುರಮಠ ಒಂದೆಡೆ, ಎಲ್ಲಾ ಕಟ್ಟುಪಾಡುಗಳಿಂದ ಮುಕ್ತವಾದ ಆನಂದಾಶ್ರಮ.

    ಮಲೆನಾಡು, ಕರಾವಳಿ ಒಂದೆಡೆಯಾದರೆ ಇನ್ನೊಂದೆಡೆ ಮುಂಬಯಿ, ಬೆಂಗಳೂರಿನ ಗಡಿಬಿಡಿ ಜೀವನ

    ಕೊಂಕಣಿ, ಮರಾಠಿ, ಹಿಂದಿ ಹೀಗೆ ಅನೇಕ ಭಾಷೆಗಳ, ಸಂಸ್ಕೃತಿಯ ಪರಿಚಯದ ಲಾಭ. ಜೀವನ ಬಂದ ಹಾಗೆ ಸ್ವೀಕರಿಸೋಣ ಎಂಬ ಸಿಂಪಲ್ ಥಿಯರಿ ಯಂತೆ ಬಾಳಿದ ಶಂಕರನಿಗೆ ಮುಂದೆ ಆವನು ಹಾಕಿಕೊಂಡ ಯೋಜನೆಯಲ್ಲಿ ಎರಡೆರಡು ಸಂಸ್ಕೃತಿಯ ಪ್ರಭಾವ ಎದ್ದು ಕಾಣುತ್ತದೆ.

    ಕುಟುಂಬದ ಬಗ್ಗೆ

    ಕುಟುಂಬದ ಬಗ್ಗೆ

    ಡ್ರಾಮಾ ತರಬೇತಿ ಸಂದರ್ಭದಲ್ಲಿ ಅರುಂಧತಿ ರಾವ್ ಅವರನ್ನು ನೋಡಿ ಮೆಚ್ಚಿ ಮದುವೆಯಾಗಿ ಮುಂಬೈನಿಂದ ಬೆಂಗಳೂರಿಗೆ ಬಂದ ಶಂಕರ್ ಗೆ ನಟನೆಗಿಂತ ನಿರ್ದೇಶನದಲ್ಲೇ ಆಸಕ್ತಿ ಇತ್ತಂತೆ.

    ಬೆಂಗಳೂರಿನ ಸಿಂಗಸಂದ್ರ ಬಳಿಯ ತೋಟದ ಮನೆ ಮಾಡುವ ಹೊತ್ತಿಗೆ ಶಂಕರ್ ಚಿತ್ರರಂಗದಲ್ಲಿ ಅನೇಕ ಏಳು ಬೀಳು ಕಂಡಿದ್ದರು. ಶಂಕರ್ ಆಲೋಚನಾ ಲಹರಿಗೆ ತಕ್ಕಂತೆ ಅರುಂಧತಿ ಅವರು ಹೆಜ್ಜೆ ಹಾಕುತ್ತಾ ಸಾಗಿದ್ದು ಸಾಧನೆ ಎನ್ನಬಹುದು. ದಂಪತಿಯ ಏಕೈಕ ಕೂಸು ಕಾವ್ಯ ಮತ್ತದೇ ಹೊಸ ಮಾರ್ಗದಲ್ಲಿ ಸಾಗಿದ್ದಾರೆ. ಮತ್ತೊಂದು ಕೂಸು ರಂಗಶಂಕರ ಎಲ್ಲರ ಆಪ್ತ ರಂಗಮಂದಿರವಾಗಿ ಬೆಳೆಯುತ್ತಲೇ ಇದೆ.

    ಶಂಕರ್ ಹಾಕಿಕೊಂಡಿದ್ದ ಯೋಜನೆ

    ಶಂಕರ್ ಹಾಕಿಕೊಂಡಿದ್ದ ಯೋಜನೆ

    * ಕಂಟ್ರಿ ಕ್ಲಬ್ -ಸಾರ್ವಜನಿಕರಿಗಾಗಿ
    * ಅಮ್ಯೂಸ್ ಮೆಂಟ್ ಪಾರ್ಕ್-ನಂದಿ ಬೆಟ್ಟದ ಕೆಳಗೆ
    * ನಂದಿ ಬೆಟ್ಟಕ್ಕೆ ರೋಪ್ ವೇ
    * ನಂದಿಬೆಟ್ಟ ಪಕ್ಕದಲ್ಲಿ ಮೈಸೂರಿನ ಮಾದರಿಯಲ್ಲಿ ಭರ್ಜರಿ ಹೋಟೆಲ್ (ವಿದೇಶಿ ವಿನ್ಯಾಸದಲ್ಲಿ)
    * ವಿದ್ಯುತ್ ಬಳಸದೆ ಇಟ್ಟಿಗೆ ತಯಾರಿಸುವ ಜರ್ಮನ್, ಹಾಲೆಂಡ್ ನ ವಿಧಾನ ಅಳವಡಿಕೆ
    * ಆಸ್ಟ್ರಿಯಾ ದೇಶದ ತಂತ್ರಜ್ಞಾನದ ಉಪಯೋಗಿಸಿ ಫ್ಯಾಬ್ರಿಕೇಟೆಡ್ ಶೀಟುಗಳ ಸಹಾಯದಿಂದ ಅಗ್ಗವಾಗಿ (45ಸಾವಿರ ರೂ ) ಮನೆ ತಯಾರಿಸುವುದು.
    * ಈ ರೀತಿ ಮನೆಗಳು ಇಂದಿಗೂ ಬೆಂಗಳೂರಿನ ಹೊರ ವಲಯದ ಯಲಹಂಕದಲ್ಲಿದೆ
    * ಸಿದ್ಧ ಉಡುಪು ತಯಾರಿಕಾ ಘಟಕ ವಿದೇಶಿ ರಫ್ತು ಹೆಚ್ಚಿಸುವ ಯೋಜನೆ
    * ಮೆಟ್ರೋ ರೈಲಿಗೆ ಚಾಲನೆ ನೀಡಲು ಪ್ರಯತ್ನ.

    ಶಂಕರ್ ಬಗ್ಗೆ ಅಣ್ಣ ಅನಂತ್

    ಶಂಕರ್ ಬಗ್ಗೆ ಅಣ್ಣ ಅನಂತ್

    ಶಂಕರ್ ನಾಗ್ ಗೆ ಚಿಕ್ಕಂದಿನಲ್ಲಿ ಇಟ್ಟ ಹೆಸರು ಇಷ್ಟು ಹೊಂದುತ್ತಿತ್ತು ನೋಡಿ ಒಂದು ಶಂಕರ=ಶಂ(ಒಳ್ಳೆಯ)+ಕರ(ಹಸ್ತ)-ಈಶ್ವರ ಅಂದರೆ ಒಳ್ಳೆಯ ಹಸ್ತವುಳ್ಳವನು ಎಲ್ಲರಿಗೂ ಶುಭವನ್ನು ಕೋಡುವವನು . ಶಂಕರನ ಬದುಕಿನ ಚಿತ್ರಣವನ್ನು 'ನನ್ನ ತಮ್ಮ ಶಂಕರ' ಪುಸ್ತಕದಲ್ಲಿ ಸ್ಥೂಲವಾಗಿ ನೀಡಿದ್ದಾರೆ ಅನಂತ್

    ಇನ್ನೊಂದು ರಾಯರು ಕರೆಯುತ್ತಿದ್ದ ಹೆಸರು ಅವಿನಾಶ- ವಿನಾಶವಿಲ್ಲದವನು ,ನಿಜ ಶಂಕರನ ಖ್ಯಾತಿ ಅವನ ಉತ್ಸಾಹ ಎಂದಿಗೂ ನಾಶವಾಗುವಂತದ್ದಲ್ಲ. ಎರಡು ವಿರುದ್ಧ ದಿಕ್ಕಿನ ಸಂಪ್ರದಾಯಗಳನ್ನು ಅವಲಂಬಿಸಿದ ಪರಿಸರದಲ್ಲಿ ಬೆಳೆದರೂ ಎರಡಕ್ಕೂ ಅಂಟದೆ ಆದರೆ ಎರಡನ್ನು ಬಿಡದಂತೆ ಬದುಕಿದ್ದು ಅಚ್ಚರಿಯೇ ಸರಿ

    ಮಾಲ್ಗುಡಿ ಡೇಸ್

    ಮಾಲ್ಗುಡಿ ಡೇಸ್

    ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮಾಲ್ಗುಡಿ ಡೇಸ್ ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. 1987ರ ಕಾಲದಲ್ಲಿ ಆರ್ ಕೆ ನಾರಯಣನ್ ಅವರ ಕೃತಿಯನ್ನು 25ಕ್ಕೂ ಅಧಿಕ ಕಂತುಗಳಲ್ಲಿ ಧಾರಾವಾಹಿಯಾಗಿ ತಂದಿದ್ದಲ್ಲದೆ ವಿಷ್ಣುವರ್ಧನ್, ಅರುಂಧತಿ ನಾಗ್, ರಮೇಶ್ ಭಟ್, ಅನಂತ್ ನಾಗ್, ಮನದೀಪ್ ರಾಯ್(ಇದಕ್ಕಾಗಿ ಐಬಿಎಂ ಸಂಸ್ಥೆ ತೊರೆದು ಬಂದರು), ಮಾಸ್ಟರ್ ಮಂಜುನಾಥ್ ಅವರ ಪ್ರತಿಭೆ ಅನಾವರಣಗೊಳಿಸಿದರು.

    ಮಾನವತಾವಾದಿ

    ಮಾನವತಾವಾದಿ

    ಚಿಕ್ಕಂದಿನಿಂದಲೂ ಪರರ ಹಿತಚಿಂತನೆ ಮಾಡುತ್ತಿದ್ದವ ಸಿನಿಮಾ ರಂಗಕ್ಕೆ ಬಂದ ಮೇಲೂ ಬದಲಾಗಲಿಲ್ಲ ಎಷ್ಟೋ ಚಿತ್ರಗಳನ್ನು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡು ಕೇವಲ ಮಾನವತೆಯ ದೃಷ್ಟಿಯಿಂದ ನಿರ್ಮಾಪಕರಿಗೆ ಕಷ್ಟ ಆಗದಿರಲೆಂದು ಚಿತ್ರ ಪೂರೈಸಿದ ಬಗ್ಗೆ ತಿಳಿಯುತ್ತದೆ.

    ಚಿಂತಕ, ಸಂಘಟಕ, ಹೋರಾಟಗಾರ-ಚಿತ್ರಗಳಲ್ಲಿ ಇಂತಹ ಪಾತ್ರಗಳಲ್ಲಿ ನಟಿಸಿದಂತೆ, ಜೀವನದಲ್ಲೂ ಹೋರಾಟಪರ ಡಾ .ರಾಜ್ ನೇತೃತ್ವದ ಗೋಕಾಕ್ ಚಳುವಳಿ ಇರಬಹುದೂ, ಅಣ್ಣನ ರಾಜಕೀಯದ ಉನ್ನತಿಗಾಗಿ ಇರಬಹುದು. ಅನಂತ್ ರವರು ರಾಜಕೀಯವಾಗಿ ಸಾಧಿಸಲು ಹೊರಟಾಗ ಅದಕ್ಕೆ ಬೇಕಾದ ಜನಬೆಂಬಲವನ್ನು ಸಂಘಟಕನಾಗಿ ಕಲೆಹಾಕಿದ ಶಂಕರ

    ಸರಳಜೀವಿ

    ಸರಳಜೀವಿ

    ಶಂಕರ್ ದಿನಕ್ಕೆ 3 ರಿಂದ 4 ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅಭಿಮಾನಿಗಳ ಪತ್ರಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಉತ್ತರಿಸುತ್ತಿದ್ದರು. ಸಣ್ಣ ಟೈಪ್ ರೈಟರ್ ಇತ್ತು. ಕಾಸ್ಟ್ಯೂಮರ್ ನಿಂದ ಶೂ ಹಾಕಿಸಿಕೊಳ್ಳುತ್ತಿರಲಿಲ್ಲ. ಸಮಯದ ಉಳಿತಾಯಕ್ಕೆ ಬಟ್ಟೆ ಬದಲಾಯಿಸಲು ಗ್ರೀನ್ ರೂಂ ಗೆ ಹೋಗುತ್ತಿರಲಿಲ್ಲ. ಅವರ ಒಡನಾಡಿಗಳು ಇವೆಲ್ಲವನ್ನೂ ಹೇಳುತ್ತಾರೆ.

     ಶಂಕರ್ ಅಗಲಿಕೆ

    ಶಂಕರ್ ಅಗಲಿಕೆ

    ಒಂದಾನೊಂದು ಕಾಲದಲ್ಲಿ ಶುರುವಾದ ಶಂಕರನ ಕಥೆ ಗೀತಾ -ಸಂಗೀತಾ ಎನ್ನುತ್ತಾ, ಜನ್ಮ ಜನ್ಮದ ಅನುಬಂಧ ಬೆಸೆದು, ಮಾಲ್ಗುಡಿ ಡೇಸ್ ಗೆ ಕರೆದೊಯ್ದು ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂದು ಜೀವನ ದರ್ಶನ ಮಾಡಿಸಿ, ತರ್ಕಕ್ಕೆ ಸಿಗದಂತಹ ಚಿಂತನೆ ನಡೆಸಿ ದುಷ್ಟರ ಮಟ್ಟಹಾಕಲು ಸಾಂಗ್ಲಿಯಾನನ ಪಾತ್ರವಹಿಸಿ,ನಿಗೂಢ ರಹಸ್ಯವ ಬೇಧಿಸಿ, ಇದು ಸಾಧ್ಯವೆಂದು ತೋರಿಸಿ ಮಿಂಚಿನ ಓಟದಂತೆ ಸಾಗಿ ಕೊನೆಗೆ ಆಕ್ಸಿಡೆಂಟ್ ನಲ್ಲಿ ಮುಕ್ತಾಯವಾಗಿದ್ದು ದುರ್ದೈವವೇ ಸರಿ.

    ಡಾ.ರಾಜ್ ಜತೆ

    ಡಾ.ರಾಜ್ ಜತೆ

    1988ರಲ್ಲಿ ಒಂದು ಮುತ್ತಿನ ಕಥೆ ನಿರ್ಮಿಸಿ, ನಿರ್ದೇಶಿಸಿ ಚಿತ್ರದ ನಾಯಕನಾಗಿ ಡಾ. ರಾಜ್ ಅವರೇ ಸರಿ ಎಂದು ಒಪ್ಪಿಸಿದ ಶಂಕರ್ ಮೊದಲ ಬಾರಿಗೆ ರಾಜ್ ಅವರಿಗೆ ವಿಶಿಷ್ಟ ಪಾತ್ರ ಸೃಷ್ಟಿಸಿದರು.

    ನೀರಿನ ಒಳಗೆ ಚಿತ್ರೀಕರಣ, ಆಕ್ಟೋಪಸ್ ಜತೆ ಹೋರಾಟ, ರಮೇಶ್ ಭಟ್ ನಟನೆ, ರಾಜ್ ಗಾಯನ ಎಲ್ಲವೂ ಜನಮೆಚ್ಚುಗೆ ಪಡೆಯಿತು. 1984ರಲ್ಲಿ ಅಪೂರ್ವ ಸಂಗಮ ಚಿತ್ರದಲ್ಲಿ ರಾಜ್ ಜತೆ ನಟಿಸಿದ್ದರು.

    ವಿಷ್ಣುವರ್ಧನ್ ಜತೆ

    ವಿಷ್ಣುವರ್ಧನ್ ಜತೆ

    ಬೆಂಕಿ ಬಿರುಗಾಳಿ, ಕಾರ್ಮಿಕ ಕಳ್ಳನಲ್ಲ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಮಾಲ್ಗುಡಿ ಡೇಸ್ ನಲ್ಲಿ ಶಂಕರ್ ಸ್ನೇಹಕ್ಕೆ ಮಣಿದು ವಿಷ್ಣುವರ್ಧನ್ ನಟನೆ ಮಾಡಿದ್ದರು.

    ಆಟೋರಾಜ

    ಆಟೋರಾಜ

    1982ರಲ್ಲಿ ಬಂದ ಆಟೋರಾಜ ಚಿತ್ರದಲ್ಲಿ ಶಿಕ್ಷಿತ ಬಡವನೊಬ್ಬ ಶ್ರೀಮಂತ ಹುಡುಗಿ ಪ್ರೀತಿಸಿ ಸಿರಿವಂತರಿಗೆ ಸವಾಲು ಹಾಕುವ ಸರಳ ಕಥೆ ಇದೆ. ಆದರೆ, ಚಿತ್ರ ಇಂದಿಗೂ ಆಟೋರಿಕ್ಷಾದವರ ಪಾಲಿನ ಮೆಚ್ಚಿನ ಚಿತ್ರವಾಗಿದೆ. ಆಟೋನಿಲ್ದಾಣಗಳಲ್ಲಿ ಶಂಕರಣ್ಣನ ಚಿತ್ರಗಳು ರಾರಾಜಿಸುತ್ತಿವೆ. ಅಭಿಮಾನಿಗಳ ಪಾಲಿಗೆ ಶಂಕರ್ ಇಂದಿಗೂ ಅಮರ

    English summary
    A Tribute To Karate King Shankar Nag on his 23rd death anniversary today(Sept 30).Kannada film industry has lost many legendary actors. Even today, people worship them as their gods. One such actor, who is not only worshiped by his fans, but also by entire Karnataka is Karate King, Auto Raja Shankar Nag.
    Wednesday, September 30, 2020, 9:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X