ದರ್ಶನ್ ನಟನೆಯ 'ಕಾಟೇರ' ನೋಡಿ ಇಂದಿರಾ ಗಾಂಧಿಯನ್ನು ನೆನಪಿಸಿಕೊಂಡ ಮಹಿಳೆ: ಕಾರಣವೇನು?
ನಟ ದರ್ಶನ್ ಮತ್ತು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕಾಂಬಿನೇಷನ್ನಲ್ಲಿ ಬಂದಿರುವ 'ಕಾಟೇರ' ಸಿನಿಮಾಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೈಜ್ಯ ಘಟನೆಗಳ ಸುತ್ತ ಕಟ್ಟಿರುವ ಕಥೆಗೆ ಜನ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ದರ್ಶನ್ ಸಿನಿಮಾಗಳೆಂದರೇ ಆಕ್ಷನ್ ಎನ್ನುತ್ತಿದ್ದವರಿಗೆ ಇದು ಫ್ಯಾಮಿಲಿ ಸಿನಿಮಾವಾಗಿದ್ದು, ಜನರು ಕುಟುಂಬಗಳ ಸಮೇತ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಜೊತೆಗೆ 'ಕಾಟೇರ' ನೋಡಿ ಕಣ್ಣೀರು ಹಾಕುತ್ತಿದ್ದಾರೆ!.
ಈಗಾಗಲೇ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ಬಾಯಿಂದ ಬಾಯಿಗೆ ತಲುಪಿ ಸಿನಿಮಾ ಕುಟುಂಬಗಳನ್ನು ತಲುಪಿತ್ತಿದೆ. ಕಾಟೇರ ಸಿನಿಮಾ 1974 ರಲ್ಲಿ ನಡೆಯುವ ಘಟನೆಗಳ ಸುತ್ತ ಸುತ್ತಿದೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದ ಮಹತ್ತರ ಕಾಯ್ದೆ ಭೂ ಸುಧಾರಣೆಯ ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ಸ್ಫೂರ್ತಿ ಪಡೆದಿದೆ. ಈಗ ಸಿನಿಮಾ ನೋಡಿದ ಹಲವು ಮಂದಿ ಇಂದಿರಾ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಉಳುವವನೇ ಭೂಮಿಯ ಒಡೆಯ ಮತ್ತು ಕಾಟೇರ
"ಭಾರತದ ಉಕ್ಕಿನ ಮಹಿಳೆ" ಎಂದು ಕರೆಸಿಕೊಳ್ಳುವ ಮತ್ತು ದೇಶದ ಹಲವಾರು ಭೂ ಸುಧಾರಣೆಗಳ ಹಿಂದೆ ನಿಂತ ವಿಶೇಷವಾಗಿ ಐತಿಹಾಸಿಕ ಕಾನೂನು 'ಉಳುವವನೇ ಭೂಮಿಯ ಒಡೆಯ ಕಾಯ್ದೆ'ಯನ್ನು ಜಾರಿಗೊಳಿಸಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ಅವರು ಕರ್ನಾಟಕದಲ್ಲಿ ಆಡಳಿತ ನಡೆಸುವಾಗ ಜಾರಿಗೆ ಬಂದ ಈ ಕಾಯ್ದೆ ಅದೆಷ್ಟೋ ಶೋಷಿತರಿಗೆ ವರದಾನವಾಗಿತ್ತು.
ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿ 1970 ಮತ್ತು 80 ರ ದಶಕಗಳಲ್ಲಿ ಕಾರ್ಮಿಕರು ಮತ್ತು ಭೂ ಕೃಷಿಕರು ಎದುರಿಸಿದ ಶೋಷಣೆಗೆ ಪ್ರತಿಕ್ರಿಯೆಯಾಗಿ ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಿತು. ಈ ಕಾನೂನು ಕರ್ನಾಟಕದಲ್ಲಿ ಭೂ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು. ಇಂದಿರಾ ಗಾಂಧಿಯವರ ಅವಧಿಯಲ್ಲಿ ಜಾರಿಗೆ ತಂದ ಈ ಕಾಯ್ದೆಯನ್ನು ಮುಖ್ಯವಾಗಿಟ್ಟುಕೊಂಡು ಕಾಟೇರ ಸಿನಿಮಾ ಮಾಡಲಾಗಿದೆ.

ಕಾಟೇರ ನೋಡಿ ಇಂದಿರಾ ಗಾಂಧಿಯನ್ನು ನೆನಪಿಸಿಕೊಂಡ ಮಹಿಳೆ
ದರ್ಶನ್ ನಟನೆಯ ಕಾಟೇರ ಸಿನಿಮಾ ನೋಡಿ ಬಂದ ಮಹಿಳೆಯೊಬ್ಬರು ಭಾವುಕವಾಗಿ ಮಾತನಾಡಿದ್ದಾರೆ. ಎಸ್ ಎಸ್ ಟಿವಿ ಯೂಟ್ಯೂಬ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಮಹಿಳೆಯೊಬ್ಬರು ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ಇಂದಿರಾ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ.
"ಸಿನಿಮಾ ಚೆನ್ನಾಗಿದೆ. ನಮ್ಮ ಹಿಂದಿನ ದಿನಗಳನ್ನು ನೆನಪಿಸಿದೆ. ನಾವು ಸಿನಿಮಾ ನೋಡಿ ಅತ್ತು ಬಂದಿದ್ದೇವೆ. ನಾನು ಸಣ್ಣವಳಿದ್ದಾಗ ಎಲ್ಲಾ ಆಸ್ತಿ, ಪಾಸ್ತಿ ಎಲ್ಲಾ ಸಾಹುಕಾರರ ಕೈಯಲ್ಲಿರುತ್ತಿತ್ತು. ನಮಗೆ ಏನು ಕೊಡುತ್ತಿರಲಿಲ್ಲ. ಆದರೆ, ಇಂದಿರಾ ಗಾಂಧಿ ಅವರು ಅದನ್ನೆಲ್ಲಾ ಬಡವರಿಗೆ ಹಂಚಿದರು. ಹೀಗಾಗಿ ನಾವು ಚೆನ್ನಾಗಿದ್ದೇವೆ" ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಜಾತಿ ಎಂಬುದನ್ನು ಬಿಡಿ ಎಂದು ಹೇಳಿದ್ದಾರೆ ಚಂದದ ಸಂದೇಶ ಇದೆ ಎಂಬುದನ್ನು ಹಂಚಿಕೊಂಡಿದ್ದಾರೆ.
ದರ್ಶನ್ ನಟನೆಯ ಕಾಟೇರ
ಕಾಟೇರ ಸಿನಿಮಾ ಬಿಡುಗಡೆಯಾದ ಎರಡು ದಿನಗಳಲ್ಲಿ ಬರೋಬ್ಬರಿ 37.14 ಕೋಟಿಯನ್ನು ಗಳಿಸಿದೆ. ಮೊದಲ ದಿನ ಕಾಟೇರ ಗಳಿಸಿದ್ದು 19.79 ಕೋಟಿ ಎರಡನೇ ದಿನ 17.35 ಕೋಟಿ ಬೆಳೆಯನ್ನು ತೆಗೆದಿದೆ. ರೈತರ ಸಮಸ್ಯೆಗಳು, ಜಾತಿ ವ್ಯವಸ್ಥೆಯ ಸುತ್ತ ತೆಗೆದ ಸಿನಿಮಾಕ್ಕೆ ಜನ ಉತ್ತಮ ಬೆಂಬಲ ನೀಡಿದ್ದಾರೆ.


Click it and Unblock the Notifications











