'ಸಂಜು' ರೀತಿ ನಟ ದರ್ಶನ್ ಬಯೋಪಿಕ್; ಹೀರೋ ಯಾರು?
ಕನ್ನಡ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ಕಮ್ಮಿ. ಅದರಲ್ಲೂ ಸಿನಿಮಾ ಕಲಾವಿದರ ಬಗ್ಗೆ ಹೆಚ್ಚೇನು ಜೀವನಾಧರಿತ ಚಿತ್ರಗಳು ಬಂದಿಲ್ಲ. ಈ ಹಿಂದೆ ಮಿನುಗುತಾರೆ ನಟಿ ಕಲ್ಪನಾ ಅವರ ಜೀವನದಿಂದ ಪ್ರೇರಣೆಗೊಂಡು ಸಿನಿಮಾ ಬಂದಿತ್ತು.
ಬಾಲಿವುಡ್, ಟಾಲವುಡ್ನಲ್ಲಿ ಇಂತಹ ಪ್ರಯತ್ನಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಮಹಾನಟಿ ಸಾವಿತ್ರಿ, ಎನ್ಟಿಆರ್, ಸಿಲ್ಕ್ ಸ್ಮಿತಾ ಸೇರಿದಂತೆ ಈಗಾಗಲೇ ಕೆಲ ಸಿನಿಮಾ ತಾರೆಯರ ಜೀವನಾಧರಿತ ಚಿತ್ರಗಳು ಬಂದು ಹೋಗಿದೆ. ಸಂಜಯ್ ದತ್ ಬಯೋಪಿಕ್ ದೊಡ್ಡದಾಗಿ ಸದ್ದು ಮಾಡಿತ್ತು. ಒಂದ್ಕಾಲದಲ್ಲಿ ಸ್ಟಾರ್ ನಟನಾಗಿ ಮೆರೆದ ಸಂಜುಬಾಬು ಸಾಕಷ್ಟು ವಿವಾದಗಳಿಂದ ಸುದ್ದಿ ಆಗಿದ್ದರು. ಸಂಜು ಬಾಬ ಬಯೋಪಿಕ್ ತೆರೆಗೆ ತಂದು ನಿರ್ದೇಶಕ ರಾಜ್ಕುಮಾರ್ ಹಿರಾನಿ ಗೆದ್ದಿದ್ದರು.

ಸಂಜಯ್ ದತ್ ಪಾತ್ರದಲ್ಲಿ ರಣ್ಬೀರ್ ಕಪೂರ್ ನಟಿಸಿ ಮೋಡಿ ಮಾಡಿದ್ದರು. ಅಂದಾಜು 90 ಕೋಟಿ ರೂ. ಬಜೆಟ್ ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. 'ಸಂಜು' ರೀತಿಯಲ್ಲೇ ದರ್ಶನ್ ಬಯೋಪಿಕ್ ಮಾಡಬೇಕು, ನಾನು ಹೀರೋ ಆಗಿ ನಟಿಸಬೇಕು ಎನ್ನುವ ಆಸೆಯನ್ನು ನಟ ರಾಜವರ್ಧನ್ ತೆರೆದಿಟ್ಟಿದ್ದಾರೆ. ದರ್ಶನ್ ಆಪ್ತ ಬಳಗದಲ್ಲಿ ಕೂಡ ಅವರು ಗುರ್ತಿಸಿಕೊಂಡಿದ್ದಾರೆ. ನೆಚ್ಚಿನ ನಟನ ಜೀವನಧಾರಿತ ಕಥೆಯಲ್ಲಿ ಹೀರೊ ಆಗಿ ನಟಿಸೋ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜವರ್ಧನ್ ನಟನೆಯ 'ಗಜರಾಮ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವಾರ ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾ ಪ್ರಚಾರದ ಭಾಗವಾಗಿ ಕೆಲ ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ. ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡುತ್ತಾ ದರ್ಶನ್ ಬಯೋಪಿಕ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ನಾನು ಐತಿಹಾಸಿಕ ಸೇರಿದಂತೆ ಎಲ್ಲಾ ತರಹದ ಪಾತ್ರಗಳಲ್ಲಿ ನಟಿಸಿದ್ದೀನಿ, ದರ್ಶನ್ ಸರ್ ಬಯೋಪಿಕ್ನಲ್ಲಿ ಬಣ್ಣ ಹಚ್ಚುವ ಆಸೆ ಇದೆ ಎಂದಿದ್ದಾರೆ. 'ಸಂಜು' ರೀತಿ ಆ ಸಿನಿಮಾ ಬರಬೇಕು ಎಂದು ತಿಳಿಸಿದ್ದಾರೆ.
ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಪುತ್ರ ಆಗಿದ್ದರೂ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು, ಹೀರೊ ಆಗುವುದು ಅಷ್ಟು ಸುಲಭ ಇರಲಿಲ್ಲ. ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಜೀವನೋಪಾಯಕ್ಕಾಗಿ ಹಸು ಕಟ್ಟಿ ಹಾಲು ಕರೆದು ಮಾಡಿದ್ದರು. ಬಳಿಕ ನೀನಾಸಂ ಸೇರಿ ನಟನೆಯ ಪಟ್ಟುಗಳನ್ನು ಕಲಿತರು. ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಲು ಆರಂಭಿಸಿದ್ದರು. ಮುಂದೆ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿ 'ಮೆಜೆಸ್ಟಿಕ್' ಚಿತ್ರದಿಂದ ಹೀರೊ ಆಗಿದ್ದರು.
ಕಷ್ಟಪಟ್ಟು ಮೇಲೆ ಬಂದ ದರ್ಶನ್ ಸ್ಟಾರ್ ನಟನಾಗಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಆದರೆ ವಿವಾದಗಳಿಂದಲೂ ಸುದ್ದಿ ಆಗಿದ್ದರು. ಕೌಟುಂಬಿಕ ಕಲಹದಿಂದ ಜೈಲು ಸೇರಿದ್ದರು. ಇತ್ತೀಚೆಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ2 ವಿಚಾರಣಾಧೀನ ಕೈದಿಯಾಗಿ ಜೈಲು ಸೇರುವಂತಾಗಿತ್ತು. ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದಾರೆ. ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ. ಆದಷ್ಟು ಬೇಗ 'ಡೆವಿಲ್' ಶೂಟಿಂಗ್ ಶುರುವಾಗಬೇಕಿದೆ.

'ನೂರೊಂದು ನೆನಪು' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ರಾಜವರ್ಧನ್ 'ಬಿಚ್ಚುಗತ್ತಿ' ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಬಳಿಕ 'ಪ್ರಣಯಂ' ಹಾಗೂ 'ಹಿರಣ್ಯ' ಸಿನಿಮಾಗಳಲ್ಲಿ ಮಿಂಚಿದ್ದರು. ಬಯೋಪಿಕ್ ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಕನ್ನಡದಲ್ಲಿ ಅಂತಹ ಪ್ರಯತ್ನ ಮಾಡಿ ಗೆಲ್ಲುವುದು ನಿಜಕ್ಕೂ ಸವಾಲಿನ ಕೆಲಸ. ಅದಕ್ಕೆ ದಕ್ಷ ನಿರ್ದೇಶಕ, ಕಲಾವಿದರು ಹಾಗೂ ತಂತ್ರಜ್ಞರ ತಂಡ ಒಳ್ಳೆ ಚಿತ್ರಕಥೆ ಅಗತ್ಯವಿದೆ. ನಟ ರಾಜವರ್ಧನ್ ಆಸೆ ಈಡೇರುತ್ತಾ ಕಾದು ನೋಡಬೇಕಿದೆ.


Click it and Unblock the Notifications











