ಅಭಿಮಾನ್ ಸ್ಟುಡಿಯೋ ವಶಕ್ಕೆ ಮುಂದಾದ ಸರ್ಕಾರ; ಒಂದು ಎಕರೆ ಬೆಲೆ ಎಷ್ಟಿದೆ ಗೊತ್ತಾ?
ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೀಗ ಅಭಿಮಾನ್ ಸ್ಟುಡಿಯೋಗೆ ನೀಡಿದ್ದ ಜಮೀನನ್ನು ಹಿಂಪಡೆಯಲು ಬೆಂಗಳೂರು ನಗರ ಅರಣ್ಯ ಇಲಾಖೆಯು ಮುಂದಾಗಿದೆ. ಇದು ವಿಷ್ಣುವರ್ಧನ್ ಅಭಿಮಾನಿಗಳಿಗೂ ಸಂತಸ ತಂದಿದೆ. ಅಲ್ಲಿ ಮತ್ತೆ ದಾದಾ ಸ್ಮಾರಕ ಪುನರ್ ನಿರ್ಮಾಣ ಆಗುವ ಆಶಾಭಾವನೆ ಶುರುವಾಗಿದೆ.
1969ರಲ್ಲಿ ಸ್ಟುಡಿಯೋ ನಿರ್ಮಾಣಕ್ಕಾಗಿ ಹಿರಿಯ ನಟ ಬಾಲಕೃಷ್ಣ ಅವರುಗೆ 20 ಎಕರೆ ಭೂಮಿ ಸರ್ಕಾರ ನೀಡಿತ್ತು. ಇದೀಗ ಆ ಭೂಮಿಯನ್ನು ಹಿಂಪಡೆದು ಅರಣ್ಯ ಇಲಾಖೆಗೆ ನೀಡಲು ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಅಂದು 20 ವರ್ಷಗಳ ಅವಧಿಗೆ ಭೂಮಿಯನ್ನು ಗೇಣಿಗೆ ನೀಡಲಾಗಿತ್ತು. 5 ವರ್ಷಗಳಲ್ಲಿ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂದು ಹೇಳಲಾಗಿತ್ತು. ಆದರೆ 20 ಎಕರೆ ಪೈಕಿ 1 ಎಕರೆ ಜಾಗವನ್ನು ಮಾರಾಟ ಮಾಡಲು ಬಾಲಕೃಷ್ಣ ಮಕ್ಕಳು, ಮೊಮ್ಮಕ್ಕಳು ಮುಂದಾಗಿದ್ದಾರೆ.

ಸ್ಟುಡಿಯೋ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಯಾವುದೇ ಸಿನಿಮಾ ಚಿತ್ರೀಕರಣ ಕೂಡ ಅಲ್ಲಿ ನಡೆಯುತ್ತಿಲ್ಲ. ಮಾಲ್ ಕಟ್ಟಲು ಜಾಗವನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರ್ತಿದೆ. 1969-70ರಲ್ಲಿ ಆಗಿರುವ ಷರತ್ತುಗಳ ಉಲ್ಲಂಘನೆಯಾಗಿದೆ. ಯಾವುದೇ ಕಾರಣಕ್ಕೂ ಸ್ಟುಡಿಯೋ ಜಾಗವನ್ನು ಅರಣ್ಯ ಇಲಾಖೆಗೆ ಬಿಡಲು ಸಾಧ್ಯವಿಲ್ಲ, ನಾವು ಹೋರಾಟ ಮಾಡುತ್ತೇವೆ ಎಂದು ಬಾಲಕೃಷ್ಣ ಪುತ್ರಿ ಗೀತಾ ಬಾಲಿ ಸವಾಲು ಹಾಕಿದ್ದಾರೆ.
ಅಭಿಮಾನ್ ಸ್ಟುಡಿಯೋ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಬೆಂಗಳೂರು ಜಿಲ್ಲಾಧಿಕಾರಿಗೆ ಅರಣ್ಯ ಅಧಿಕಾರಿ ಪತ್ರ ಬರೆದಿರುವ ಬಗ್ಗೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ. "ಬಾಲಕೃಷ್ಣ ಅವರ ಮೊಮ್ಮಗ ಕಾರ್ತೀಕ ಅಭಿಮಾನ್ ಸ್ಟುಡಿಯೋದ ಒಂದು ಎಕರೆಯನ್ನು 14 ಕೋಟಿ 37 ಲಕ್ಷಕ್ಕೆ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಂಡಿದ್ದ. ಅಂದ್ರೆ 10 ಎಕರೆಗೆ 144 ಕೋಟಿ ರೂ." ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
"ಅಭಿಮಾನ್ ಸ್ಟುಡಿಯೋದ ಜಾಗವನ್ನು ಅರಣ್ಯಭೂಮಿ ಎಂದು ಘೋಷಣೆ ಮಾಡಿರುವುದು ಚೂರು ಗೊಂದಲವನ್ನು ಸೃಷ್ಟಿಸಿದೆ. ಅರಣ್ಯಭೂಮಿಯ ನೆಪ ಹೇಳಿ ಅಲ್ಲಿ ಯಜಮಾನ್ರ ಪುಣ್ಯಭೂಮಿ, ಬಾಲಣ್ಣನ ಸಮಾಧಿ ಆಗದಂತೆ ತಡೆದುಬಿಟ್ಟರೆ? ಅದು ಆಗದಿರಲೆಂದು ಒತ್ತಾಯಿಸೋಣ. ಅರಣ್ಯ ಭೂಮಿಯ ಆಶಯಕ್ಕೆ ಅಡ್ಡಿಯಾಗದಂತಹ ಮರ ಗಿಡಗಳಿಂದಲೇ ಕೂಡಿರುವ ಸರಳ ಪುಣ್ಯಭೂಮಿ ನಿರ್ಮಾಣಕ್ಕೆ ಸರ್ಕಾರ ಮನಸು ಮಾಡಬೇಕು. ಇಲ್ಲವಾದರೆ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿದ ಕಾರ್ತೀಕನ ಕನಸುಗಳೂ ನೆಲಸಮ ಆದವೆಂದು ಸಮಾಧಾನಪಡುವುದಕ್ಕಷ್ಟೇ ಈ ತೀರ್ಮಾನ ಉಪಯೋಗಕ್ಕೆ ಬರುತ್ತದೆ ಎಂದು ವೀರಕಪುತ್ರ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಬೆಳೆದಂತೆ ಭೂಮಿಯ ಬೆಲೆಯೂ ಗಗನಕ್ಕೇರಿದೆ. ಒಂದ್ಕಾಲದಲ್ಲಿ ಅಭಿಮಾನ್ ಸ್ಟುಡಿಯೋ ಬೆಂಗಳೂರಿನ ಹೊರವಲಯದಲ್ಲಿ ಇದೆ ಎನ್ನುವ ಭಾವನೆ ಇತ್ತು. ಆದರೆ ಈಗ ಸುತ್ತಾಮುತ್ತಾ ಸಾಕಷ್ಟು ಲೇಔಟ್ಗಳು ತಲೆಯೆತ್ತಿ ಜನವಸತಿ ಹೆಚ್ಚಾಗಿದೆ. ಅಭಿಮಾನ್ ಸ್ಟುಡಿಯೋ ಇರುವ ಜಾಗದಲ್ಲಿ ದೊಡ್ಡ ಮಾಲ್ ನಿರ್ಮಾಣ ಮಾಡುವ ಪ್ರಯತ್ನಗಳು ಶುರುವಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ವಿಚಾರ ಇನ್ನು ಕಗ್ಗಂಟಾಗಿಯೇ ಇದೆ. ಅದೇ ಕಾರಣಕ್ಕೆ ಕೆಂಗೇರಿ ಬಳಿ ದಾದಾ ದರ್ಶನ ಕೇಂದ್ರಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಈಗಾಗಲೇ ನಟ ಸುದೀಪ್ ಅರ್ಧ ಎಕರೆ ಜಾಗವನ್ನು ಕೂಡ ಖರೀದಿಸಿದ್ದಾರೆ. ಅದೇ ಜಾಗದಲ್ಲಿ 25 ಅಡಿ ವಿಷ್ಣು ಪುತ್ಥಳಿ ಸೇರಿ ಲೈಬ್ರರಿ ವಿಷ್ಣು ದರ್ಶನ ಕೇಂದ್ರ ನಿರ್ಮಿಸಲು ಮುಂದಾಗಿದ್ದಾರೆ. ಇನ್ನೊಂದು ವರ್ಷದಲ್ಲಿ ಕೆಂಗೇರಿ ಬಳಿ ವಿಷ್ಣು ಸ್ಮಾರಕ ತಲೆ ಎತ್ತುವ ಸಾಧ್ಯತೆಯಿದೆ.


Click it and Unblock the Notifications











