'ಅಭಿಮಾನಿಗಳ ರತ್ನ' ಅಪ್ಪು ಕನ್ನಡ ಜನಮಾನಸ ಗೆದ್ದ ರಾಜಕುಮಾರ
ಪುನೀತ್ ರಾಜಕುಮಾರ್ ಅವರು ಕನ್ನಡ ಜನತೆಯಿಂದ ಭೌತಿಕವಾಗಿ ದೂರವಾಗಿ ಇಂದಿಗೆ ಹನ್ನೊಂದು ದಿನವಾಯಿತು. ಮೊದಲ ಮೂರು ದಿನದಲ್ಲಿ ಸುಮಾರು 25 ಲಕ್ಷ ಮಂದಿ ಅವರ ಅಂತಿಮ ದರ್ಶನ ಮಾಡಿದ್ದಾರೆ. ಈಗಲೂ ಅವರ ಸಮಾಧಿಯ ದರ್ಶನ ಮಾಡಲು ಲಕ್ಷಾಂತರ ಮಂದಿ ಪ್ರತಿನಿತ್ಯ ಕಂಠೀರವ ಸ್ಟುಡಿಯೋ ಗೆ ಭೇಟಿ ನೀಡುತ್ತಲೇ ಇದ್ದಾರೆ. ಕೆಲವು ಅಭಿಮಾನಿಗಳಂತೂ ಅಲ್ಲಿಯೇ ತಮ್ಮ ಮದುವೆಯಾಗಲು ಕೂಡ ನಿರ್ಧರಿಸಿದ್ದಾರೆ. ಅಬಾಲವೃದ್ಧರಾದಿಯಾಗಿ ಕರ್ನಾಟಕದ ಉದ್ದಗಲದಿಂದ, ಅಷ್ಟೇ ಯಾಕೆ, ಹೊರರಾಜ್ಯಗಳಿಂದಲೂ ಕೂಡ ಅಪಾರ ಪ್ರಮಾಣದಲ್ಲಿ ಅಪ್ಪು ಸಮಾಧಿಯ ದರ್ಶನಕ್ಕೆ ಜನಪ್ರವಾಹ ನಿಲ್ಲದೆ ಹರಿದುಬರುತ್ತಿದೆ. ನೆರೆ ರಾಜ್ಯಗಳ ಸಿನಿಮಾ ತಾರೆಯರು ಕೂಡ ದೊಡ್ಡ ಪ್ರಮಾಣದಲ್ಲಿ ಬರುತ್ತಲೇ ಇದ್ದಾರೆ.
Recommended Video
ಕಳೆದ 11 ದಿನದಿಂದ ಅಪ್ಪು ಅವರೇ ಸೋಶಿಯಲ್ ಮೀಡಿಯಾಗಳಲ್ಲಿ ಪೂರ್ತಿಯಾಗಿ ಆವರಿಸಿಕೊಂಡಿದ್ದಾರೆ. ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು-ತಮಿಳು-ಹಿಂದಿ ಸೋಶಿಯಲ್ ಮೀಡಿಯಾ ಗಳಲ್ಲಿ ಅವರ ಗುಣಗಾನ, ಅವರ ಸೇವಾಕಾರ್ಯಗಳಿಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಅಪ್ಪು ಅವರ ಸೇವಾಕಾರ್ಯಗಳಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಅಲ್ಲಿನ ಜನತೆ ನಮ್ಮ ಹೀರೋಗಳು ಪುನೀತ್ ರಾಜಕುಮಾರ್ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಅಂತ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಗಳಲ್ಲಿ 'ಅಪ್ಪು'ದೆ ಸುದ್ದಿ!
ಸೂಪರ್ ಸ್ಟಾರ್ ಗಳು ಸಾಕಷ್ಟು ಮಂದಿ ಬರುತ್ತಾರೆ, ಹೋಗುತ್ತಾರೆ ಆದರೆ ಇಂತಹ (ಅಪ್ಪು) ಮಹಾನ್ ಚೇತನ ಮಾತ್ರವೇ ನಿಜವಾದ ಅರ್ಥದಲ್ಲಿ ಜನಸಾಮಾನ್ಯರ ಮನಸ್ಸಿನಲ್ಲಿ ಉಳಿದುಹೋಗುತ್ತದೆ. ಪುನೀತ್ ರಾಜಕುಮಾರ್ ಅವರನ್ನು ನೋಡಿ ಇತರ ಎಲ್ಲಾ ನಟರು ಸೇವಾಕಾರ್ಯಗಳನ್ನು ಮಾಡುವಂತೆ ಮತ್ತು ಪುನೀತ್ ಅವರನ್ನು ಆದರ್ಶವಾಗಿ ತೆಗೆದುಕೊಂಡು ಸಿನಿಮಾಗಳನ್ನು ತೆಗೆಯುವಂತೆ ಕೂಡ ಅವರೆಲ್ಲ ಸೂಚಿಸುತ್ತಿದ್ದಾರೆ. ಇನ್ನು ರಾಷ್ಟ್ರೀಯ ಮಾಧ್ಯಮಗಳು ಕೂಡ ಇತ್ತೀಚಿನ ಕೆಲವು ದಿನಗಳಿಂದ ಪುನೀತ್ ರಾಜಕುಮಾರ್ ಅವರ ಬಗ್ಗೆ ವಿಶೇಷವಾದ ಚರ್ಚೆಗಳನ್ನು ಸಹ ನಡೆಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕೋಟ್ಯಂತರ ಮನಸುಗಳ ರಾಜಕುಮಾರ
ಅಪ್ಪು ಅವರಿಗೆ ಈಗ 46 ವಸಂತಗಳು, 45ವರ್ಷಗಳ ಸಿನಿ ಕೆರಿಯರ್. ಆರು ತಿಂಗಳ ಮಗುವಾಗಿರುವಾಗಲೇ ಅಭಿನಯಿಸಿದ ಅವರ ಸಿನಿಮಾ ಪಯಣ ಬರೋಬ್ಬರಿ 45 ವರ್ಷಗಳದ್ದು. ಇಷ್ಟು ಸುದೀರ್ಘವಾದ ಸಿನಿಪಯಣ ಮಾಡಿರುವ ಮತ್ತೊಬ್ಬ ನಟ ಪ್ರಸ್ತುತ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಬ್ಬರಿಲ್ಲ. ರಾಜಕುಮಾರ್, ವಿಷ್ಣುವರ್ಧನ್ ನಂತರ ಹೆಚ್ಚಿನ ಫ್ಯಾಮಿಲಿ ಆಡಿಯನ್ಸ್ ಹೊಂದಿದ್ದ ಏಕೈಕ ಸೂಪರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಮುಂದೆ ಯಾವ ಸೂಪರ್ ಸ್ಟಾರ್ ಗಳು ಕೂಡ ಅಪ್ಪು ಅವರಂತೆ ಫ್ಯಾಮಿಲಿ ಆಡಿಯನ್ಸ್ ಗಳಲ್ಲಿ ವಿಶಿಷ್ಟವಾದ ಸ್ಥಾನ ಪಡೆಯಲು ಸಾಧ್ಯವೇ ಇಲ್ಲ. ಫ್ಯಾಮಿಲಿ ಆಡಿಯನ್ಸ್ ಗಳ ಮನಗೆದ್ದ ಕಟ್ಟಕಡೆಯ ಸೂಪರ್ ಸ್ಟಾರ್ ಅಪ್ಪು. ಕರ್ನಾಟಕದ ಉದ್ದಗಲಕ್ಕೂ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ ಈಗಲೂ ಕೂಡ ಅವರೆಲ್ಲರ ಪಾಲಿನ ರಾಜಕುಮಾರ.

'ಸೇವಾ ರತ್ನ' ಪುನೀತ್ ರಾಜಕುಮಾರ್
ಸೂಪರ್ ಸ್ಟಾರ್ ಗಳು ಹತ್ತಾರು ಮಂದಿ ಇದ್ದಾರೆ, ಆದರೆ ಪುನೀತ್ ಅವರಿಗೆ ಇರುವ ಜನಾದರಣೆ ಮಾತ್ರ ಯಾರಿಗೂ ಇಲ್ಲ, ಯಾಕೆ?
ಮೊದಲನೇದಾಗಿ ಅವರು ರಾಜಕೀಯದಿಂದ ದೂರ ಉಳಿದಿದ್ದು, ಎರಡು: ಸಣ್ಣ ವಿವಾದಕ್ಕೂ ಸಿಲಕದ ವ್ಯಕ್ತಿತ್ವ ಜೊತೆಗೆ ಅವರೊಂದು ಕಂಪ್ಲೀಟ್ ಫ್ಯಾಮಿಲಿ ಮ್ಯಾನ್. ಅವರದು 1800 ಮಕ್ಕಳಿಗೆ ಶಿಕ್ಷಣ, ಗೋಶಾಲೆಗಳು, ವೃದ್ಧಾಶ್ರಮಗಳು, 45 ಶಾಲೆಗಳ ಜೀರ್ಣೋದ್ದಾರ ಹೀಗೆ ಅನೇಕ ಸೇವಾಕಾರ್ಯಗಳನ್ನು ಸೇವಾಮನೋಭಾವದಿಂದಲೇ ಮಾಡಿದ ವ್ಯಕ್ತಿತ್ವ. ಹತ್ತು ರೂಪಾಯಿ ದಾನ ಮಾಡಿ ನೂರು ರೂಪಾಯಿ ಪಬ್ಲಿಸಿಟಿ ತೆಗೆದುಕೊಳ್ಳುತ್ತಿರುವ ಇಂದಿನ ಕಾಲದಲ್ಲಿ ಕೋಟ್ಯಾಂತರ ರೂಪಾಯಿಗಳ ದಾನ ಮಾಡಿ ಕೂಡ ಎಲ್ಲಿಯೂ ಒಂದೇ ಒಂದು ಮಾತು ಅದರ ಬಗ್ಗೆ ಮಾತನಾಡದ ಮಹಾನ್ ವ್ಯಕ್ತಿತ್ವ ಪುನೀತ್ ಹೀಗಾಗಿ ಅವರು ನಿಜವಾದ ಅರ್ಥದಲ್ಲಿ ಸೇವಾರತ್ನ.

ಪುನೀತ್ ಅವರ ಹೆಸರು 'ಪದ್ಮಶ್ರೀ'ಪ್ರಶಸ್ತಿಗೆ ಶಿಫಾರಸು?
ಕಳೆದ ಕೆಲವು ದಿನಗಳಿಂದಲೂ ಪುನೀತ್ ರಾಜಕುಮಾರ್ ಅವರ ಹೆಸರನ್ನು 'ಪದ್ಮಶ್ರೀ' ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಜೋರಾದ ಮತ್ತು ವ್ಯಾಪಕವಾದ ಒತ್ತಡ ಹೆಚ್ಚುತ್ತಲೇ ಇದೆ. ಈ ಬೇಡಿಕೆಗೆ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಒಕ್ಕೊರಲಿನಿಂದ ಬೆಂಬಲಿಸಿದೆ. ಅಲ್ಲದೆ, ಸಮಸ್ತ ಕರ್ನಾಟಕದ ಜನತೆ ಕೂಡ ಪುನೀತ್ ಅವರಿಗೆ 'ಪದ್ಮಶ್ರೀ' ಸಿಗಲೇಬೇಕು ಅಂತ ಅಭಿಮಾನ ಪೂರ್ವಕವಾದ ಒತ್ತಾಯವನ್ನು ಹಾಕುತ್ತಿದ್ದಾರೆ. ಇನ್ನು ಈ ವಿಚಾರದಲ್ಲಿ ರಾಜ್ ಅವರ ಕುಟುಂಬಕ್ಕೂ ಕೂಡ ಆತ್ಮೀಯರಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೂಡ ಧ್ವನಿಗೂಡಿಸಿದ್ದು ಇದರ ಬಗ್ಗೆ ಸಕಾರಾತ್ಮಕವಾದ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಅವರೆಂದಿಗೂ ಅಭಿಮಾನಿಗಳ ರತ್ನ
'ಪದ್ಮ' ಸೇರಿದಂತೆ ಅನೇಕ ತರದ ಪ್ರಶಸ್ತಿಗಳು ಮುಂದೆ ಅಪ್ಪು ಅವರಿಗೆ ಒಲಿಯಬಹುದು. ಆದರೆ ಇದೆಲ್ಲದಕ್ಕಿಂತ ಮಿಗಿಲಾಗಿ ಅಭಿಮಾನಿಗಳ ಹೃದಯದಲ್ಲಿ ಅವರು ಪಡೆದಿರುವ ಸ್ಥಾನ ಬಹು ದೊಡ್ಡದಾಗಿದೆ. ರಾಜ್ ಕುಮಾರ್ ಅವರ ಅನಂತರ ಅಷ್ಟೊಂದು ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ಮತ್ತೊಬ್ಬ ನಟ ಭವಿಷ್ಯ ಪುನೀತ್ ಅವರೇ ಇರಬೇಕು. ಯಾವುದೇ ಪ್ರಶಸ್ತಿಗಳಿಗಿಂತ ದೊಡ್ಡದಾದದ್ದು ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನ, ಕೋಟ್ಯಾಂತರ ಮನಸುಗಳನ್ನು ಗೆದ್ದಿರುವ ಪುನೀತ್ ರಾಜಕುಮಾರ್ ಅವರನ್ನು 'ಅಭಿಮಾನಿಗಳ ರತ್ನ' ಅಂತ ಕರೆದರೆ ತಪ್ಪಾಗಲಾರದು. ಹೌದು ಹೀಗಾಗಿ ಅವರು ಎಂದೆಂದಿಗೂ 'ಅಭಿಮಾನಿಗಳ ರತ್ನ' ಅಪ್ಪು!


Click it and Unblock the Notifications











